Monday, March 12, 2012

ಮುಂಬಯಿ ಕನ್ನಡ : ಮೊಳೆವು - ಬೆಳೆವು - ಉಳಿವು

ಇವತ್ತು ಕನ್ನಡಕ್ಕೆ ಇನ್ನೊಂದು ವಿಸ್ತರಿತ ನಾಡಿನಂತೆ, ಕನ್ನಡ ನುಡಿ ಸಂಬಂಧಿತ ನುಡಿಯಾಧರಿತ ಚಟುವಟಿಕೆಗೆ ಇನ್ನೊಂದು ಹೆಚ್ಚುವರಿ ನಾಡಿನಂತೆ, ಕನ್ನಡದ ಸಂಸ್ಕೃತಿಗೆ ಇನ್ನೊಂದು ವೇದಿಕೆಯಂತೆ ಮೂಡಿ ಬಂದಿರುವ ಆಧುನಿಕ ಮುಂಬಯಿಯಲ್ಲಿ ಕನ್ನಡದ ನುಡಿ ಕುಡಿಯೊಡೆದ ಮಹಾನ್‌ ಗಾಥೆಗೆ ಸರಿ ಸುಮಾರು ಎರಡೂವರೆ ಶತಮಾನಗಳ ಶ್ರೀಮಂತ ಇತಿಹಾಸವಿದೆ.

ಆಧುನಿಕ ಮುಂಬಯಿಗೆ ಕನ್ನಡಿಗರ ಆರಂಭಿಕ ವಲಸೆ :

ಇವತ್ತು ಮುಂಬಯಿ ಎಂದು ಕರೆಯಲ್ಪಡುವ , ಒಂದು ಕಾಲದ "ಮುಂಬಾ ಆಯಿ" ಎಂಬ ಸಪ್ತ ದ್ವೀಪ ಸಂಕುಲಕ್ಕೆ ಕನ್ನಡಿಗರು "ವಲಸೆಯ" ಸ್ವರೂಪದಲ್ಲಿ ಬರಲಾರಂಭಿಸಿರುವುದಕ್ಕೆ ೧೭ ನೇ ಶತಮಾನದ ಉತ್ತರಾರ್ಧದ, ಅರ್ಥಾತ್‌ ೧೭೭೦ ರ ಸುಮಾರಿನ ಪುರಾವೆಗಳು ದೊರಕುತ್ತವೆ.ವಿಶೇಷವಾಗಿ ಅಂದಿನ ಮುಂಬಯಿ ಸಂಸ್ಥಾನ (ರಾಜ್ಯ) ಕ್ಕೆ ಹತ್ತಿರದ ಕರ್ನಾಟಕ ಭಾಗವಾದ , ಕೆನರಾ ಜಿಲ್ಲೆಯ ಕನ್ನಡಿಗ ಬೆಸ್ತ , ಮೊಗವೀರ ಸಮುದಾಯದ ಜನ ಈ "ಜೀವನೋಪಾಯ ವಲಸೆಯ" ಮುಂಚೂಣಿಯಲ್ಲಿದ್ದರೆಂಬುದು ಮುಂಬಯಿ ಗಝೆಟಿಯರ್‌ ಮತ್ತು ಇತಿಹಾಸಾಧ್ಯಯನಗಳಿಂದ ತಿಳಿದು ಬರುತ್ತದೆ. ೧೮ ನೇ ಶತಮಾನದ ಮಧ್ಯ ಭಾಗದಲ್ಲಿ ದೇಶದ ರೈಲು ಸಂಚಾರ ವ್ಯವಸ್ಥೆ ಮುಂಬಯಿಯಲ್ಲಿ ಆರಂಭಗೊಳ್ಳುವ ವೇಳೆಗೆ, ಇಲ್ಲಿ ಕೆನರಾ ಜಿಲ್ಲೆಯ ಸಾರಸ್ವತರೂ ಸಾಕಷ್ಟು ಸಂಖ್ಯೆಯಲ್ಲಿ ದ್ದು ಖಾನಾವಳಿಗಳನ್ನು ನಡೆಸುತ್ತಿದ್ದ, ರೈಲು ಪ್ರಯಾಣಿಕರಿಗಾಗಿ ಊಟ ಮತ್ತು ವಸತಿ ವ್ಯವಸ್ಥೆ ಮಾಡುತ್ತಿದ್ದರೆಂಬುದೂ ಗೊತ್ತಾಗುತ್ತದೆ. ಸಮುದ್ರೋತ್ಪತ್ತಿಯಿಂದ ತಮ್ಮ ಜೀವನ ನಿರುವಹಣೆಯನ್ನು ಮಾಡುತ್ತಿದ್ದ್ದ ಮೊಗವೀರ ಸಮುದಾಯಕ್ಕೆ ಅದೇ ಸಮುದ್ರಮಾರ್ಗವೇ ಮುಬಯಿ ನಗರವನ್ನು ಕಾಣಿಸಿದರೆ, ಸಾರಸ್ವತರಿಗಿದ್ದ ಗುಜರಾತ್‌ ಸಂಪರ್ಕ ಅವರನ್ನು ದಾರಿ ಮಧ್ಯೆ ಮುಂಬಯಿ ಶಹರದಲ್ಲಿ ತಡೆಯುವಂತೆ ಮಾಡಿತ್ತು .ಮೊಗವೀರರು ತಾವು ಮತ್ಸ್ಯ ಬೇಟೆಗೆ ಬಳಸುತ್ತಿದ್ದ ಸಣ್ಣ ದೋಣಿಗಳು(ಹಾಯಿ), ಮಂಜಿ, (ಮುಂದೆ ಸ್ಟೀಮರ್‌ ಬಂತು, ಆ ಬಳಿಕ ರೈಲು, ಬಸ್ಸು) ಮೂಲಕ ಮುಂಬಯಿ ಮುಟ್ಟುತ್ತಿದ್ದರು.

ಮೊಗವೀರರು ಎರೆದ ತೈಲ... ಕರ್ಕಿ ಸೂರಿ ಗಳ ಜ್ಞಾನ ಸಲಿಲ...

ಹೀಗೆ ಆಧುನಿಕ ಮುಂಬಯಿಯ ಮೊದಲ ಕನ್ನಡಿಗರಾದ ಮೊಗವೀರರು ಇಲ್ಲಿ ಕನ್ನಡದ ಹಾಗೆಯೇ ತುಳುವಿನ ಸಾಂಘಿಕ ಚಟುವಟಿಕೆಗಳ ಹರಿಕಾರರೂ ಹೌದು. ೧೮೭೮ ರಲ್ಲಿ ಶ್ರೀಮಧ್ಬಾರತ ಮಂಡಳಿಯ ಮೂಲಕ ಮೊತ್ತ ಮೊದಲ ಸಂಘಟನೆ (ಲಭ್ಯ ದಾಖಲೆಗಳ ಪ್ರಕಾರ)ಹುಟ್ಟುವಡೆಯಿತು. ಅದೇ ವೇಳೆಯಲ್ಲಿ ಉತ್ತರ ಕನ್ನಡದ ಕರ್ಕಿ ಮೂಲದ , ಸೂರಿ ಎಂಬ ಹವ್ಯಕಮನೆತನಕ್ಕೆ ಸೇರಿದ ವೆಂಕಟರಮಣ ಭಟ್ಟ ಎಂಬವರು ತಮ್ಮ ಸ್ನೇಹಿತರಾದ ಬೂದಿ ಮಹಾಬಲೇಶ್ವರ ಭಟ್ಟರ ಜೊತೆ ಸೇರಿ "ಕರ್ಕಿ ವೆಂಕಟರಮಣ ಶಾಸ್ತ್ರಿ ಎಂಡ್‌ ಕಂಪೆನಿ" ಎಂಬ ಖಾಸಗಿ ಸಂಸ್ಥೆಯೊಂದನ್ನು ರಚಿಸಿದ್ದಲ್ಲದೆ , ಆ ಮೂಲಕ ಪತ್ರಿಕೋದ್ಯೋಗ, ಸಾಹಿತ್ಯ ರಚನೆ, ಪುಸ್ತಕ ಮುದ್ರಣ ವ್ಯಾಪಾರ, ಹೀಗೆ, ಮೂರೂ ವ್ಯವಹಾರಗಳನ್ನು ನಡೆಸ ತೊಡಗಿರುವುದು ಮುಂಬಯಿಯ ಮಟ್ಟಿಗೆ ಕನ್ನಡದ ಸಾಂಘಿಕ ಚಟುವಟಿಕೆಯಾಗಿಯೂ ಗೋಚರಿಸುತ್ತದೆ.

ಇನ್ನು ರಾಜಕೀಯ ಇತಿಹಾಸವನ್ನು ಅವಲೋಕಿಸಿದರೆ ಹದಿಮೂರನೇ ಶತಮಾನದ ಅವಧಿಯಲ್ಲಿ ಪುರಾತನ ಮುಂಬಯಿಯ ಆಡಳಿತದ ಉಸ್ತುವಾರಿ ಹಿಡಿದಿದ್ದ ಶಿಲಾಹಾರರ ಭಾಷೆ ಕನ್ನಡವಾಗಿತ್ತು. ಮುಂದೆ , ಆಧುನಿಕ ಮುಂಬಯಿ ರೂಪುಗೊಳ್ಳುವ ಸ್ವಲ್ಪ ಪೂರ್ವಾವಧಿ ಕಾಲಮಾನದಲ್ಲಿ , ನಿರ್ದಿಷ್ಟವಾಗಿ ಹೇಳುವುದಾದರೆ, ಮುಂಬಯಿಯ ಪ್ರಥಮ ಗವರ್ನರ್‌ ವೌಂಟ್‌ ಸ್ಟುವರ್ಟ್‌ ಎಲ್ಪಿಸ್ಟನ್‌ ರವರಿಗೆ ೧೮೧೮ ರಲ್ಲಿ ಅರ್ಪಿಸಲಾದ ಸಾರ್ವಜᅵನಿಕ ಸತ್ಕಾರ ಕೂಟದ ಮಾನಪತ್ರದ ಒಕ್ಕಣೆ ಕನ್ನಡದಲ್ಲಿತ್ತೆಂಬುದನ್ನು ಅನುಲಕ್ಷಿಸಿ ಹೇಳುವುದಾದರೆ ಅಧುನಿಕ ಮುಂಬಯಿಗೆ ಎರಡು ಎರಡೂವರೆ ಶತಮಾನದಿಂದೀಚೆಗೆ ಕನ್ನಡಿಗರ ವಲಸೆ ಆರಂಭಗೊಳ್ಳುವ ಸಹಸ್ರವರ್ಷಗಳ ಪೂರ್ವದಲ್ಲೇ ಈ ಶಹರದಲ್ಲಿ ಕನ್ನಡದ ಬೇರುಗಳಿದ್ದವೆನ್ನುವುದು ಖಚಿತ.
೧೮೫೭ ರಲ್ಲಿ ಮುಂಬಯಿ ವಿಶ್ವ ವಿದ್ಯಾಲಯದ ಸ್ಥಾಪನೆಯಾದರೆ, ಅಲ್ಲಿ ಮ್ಯಾಟ್ರಿಕ್‌ ಗೆ ಹಿಂದಿ ಮರಾಠಿ ಗುಜರಾಥಿ ಜೊತೆಗೆ ಕನ್ನಡಕ್ಕೂ ಅವಕಾಶವಿದ್ದು , ರಾಜಕೀಯ ಕಾರಣಗಳಿಗಾಗಿ ಇದು ಆಗಾಗ ರದ್ದಾಗಿ, ಕನ್ನಡಗರ ಹೋರಾಟದಲ್ಲಿ ಮತ್ತೆ ದೊರಕುತ್ತಿತ್ತು.೧೯೦೦ ರ ಸುಮಾರಿನಲ್ಲಿ ಕನ್ನಡದ ಪ್ರಾತಸ್ಮರಣೀಯ ಹೋರಾಟಗಾರರಾದ ಶ್ಯಾಮರಾಯ ವಿಠಲ ಕಾಯ್ಕಿಣಿಯವರು ಮುಂಬಯಿ ವಿಶ್ವವಿದ್ಯಾಲಯದ ಉನ್ನತ ವ್ಯಾಸಂಗ ವಿಭಾಗದಲ್ಲಿ ಕನ್ನಡ ಕಲಿಕೆಯ ಅವಕಾಶವನ್ನು ಪುನರಪಿ ದೊರಕಿಸಿಕೊಟ್ಟರೆನ್ನುವುದು ಬಹು ಮಹತ್ವದ ಘಟನೆಯಾಗುತ್ತದೆ.
ಮೊಳೆವು ಬೆಳೆವಿನ ಹಾದಿ...
ಆದಾಗ್ಯೂ, ಆಧುನಿಕ ಮುಂಬಯಿಯಲ್ಲಿ ಕನ್ನಡದ ಮೊಳೆವು , ಬೆಳೆವು ಉಳಿವಿನ ಹಾದಿಯನ್ನು ಸ್ಥೂಲವಾಗಿ ಮೂರು ಹಂತಗಳಲ್ಲಿ ವಿಂಗಡಿಸುವುದು ಸರಿಯೆನಿಸುತ್ತದೆ. ೧೮೫೦ ರಿಂದ ೧೯೧೦ ರ ಅವಧಿಯನ್ನು ಮೊಳೆವಿಗೆ , ೧೯೨೫ ರಿಂದ ೧೯೬೦ ರ ನಡುವಣ ಅವಧಿಯನ್ನು ಬೆಳೆವಿಗೆ ಮತ್ತು ಆ ನಂತರದ ವಿಶೇಷವಾಗಿ ೧೯೬೦ ರಿಂದೀಚಿನ ಅವಧಿಯನ್ನು ಉಳಿಸುವ ಪ್ರಜ್ಞೆ ಮತ್ತು ಪ್ರಕ್ರಿಯೆ ಆರಂಭಗೊಂಡ ಕಾಲಮಾನವೆಂದು ಹೆಸರಿಸಬಹುದಾಗಿದೆ. *೧೮೭೦ ರ ದಶಕದಲ್ಲಿ ಮೊಗವೀರರ ಮೂಲಕ ಆರಂಭಗೊಂಡ ಕನ್ನಡದ ಸಂಘಟನಾ ಪ್ರವೃತ್ತಿ, ೧೮೮೩ ರ ಹೊತ್ತಿಗೆ ಇಲ್ಲಿ ಹುಟ್ಟಿದ ಪ್ರಥಮ ಕನ್ನಡಪತ್ರಿಕೆ ಸುವಾರ್ತೆ ಮುಂದೆ ಕರ್ಕಿಯᅵವರ ಕೃತಿ ಕನ್ನಡದ ಪ್ರಪ್ರಥಮ ನಾಟಕ "ಇಗ್ಗಪ್ಪ ಹೆಗ್ಗಡೆ ವಿವಾಹ ಪ್ರಹಸನ" ಇವೆಲ್ಲ ಕನ್ನಡದ ಮಟ್ಟಿಗೆ ಬುನಾದಿ ಹೆಜ್ಜೆಗಳಾಗಿ ಮೈಲಿಗಲ್ಲುಗಳಾಗಿ ದಾಖಲಾಗುತ್ತವೆ.

ಮುಂದೆ ಆವತ್ತಿನ ಕೋಟೆ, ಇವತ್ತಿನ ಫೋರ್ಟ್‌ (ಸಿಎಸ್‌ ಟಿ) ಪ್ರದೇಶದಲ್ಲಿ ಮೊಗವೀರ ಧರ್ಮಾರ್ಥ ರಾತ್ರಿ ಶಾಲೆಯನ್ನಾರಂಭಿಸುವ ಮೂಲಕ (೧೯೦೮) ಇದೇ ಕರಾವಳಿ ಕರ್ನಾಟᅵಕದಿಂದ ವಲಸೆ ಬಂದ ಮೊಗವೀರ ಜನಾಂಗ ಮುಂಬಯಿಯಲ್ಲಿ ನ ಕನ್ನಡಿಗ ವಲಸೆ ಕುಟುಂಬಗಳಿಗೆ ಶಿಕ್ಷಣ ದಾಸೋಹ ನೀಡುವ ಮಹಾ ಕಾಯಕಕ್ಕೂ ತಾನೇ ನಾಂದಿ ಹಾಡಿ ಇತಿಹಾಸದಲ್ಲಿ ತನ್ನ ಸ್ಥಾನವನ್ನು ಚಿರಗೊಳಿಸಿತು.ಮೊಗವೀರ ಧರ್ಮಾರ್ಥ ರಾತ್ರಿ ಶಾಲೆ ಶಿಕ್ಷಣವನ್ನಷ್ಟೇ ಅಲ್ಲದೆ, ಮುಂಬಯಿಯಲ್ಲಿ ಕನ್ನಡದ ನುಡಿ ಬಂಡಿಯ ಮಹಾಯಾನಕ್ಕೆ ಅಳಿವಿಲ್ಲದ ಹಳಿ ನೆಟ್ಟಿತು. ಕನ್ನಡದ ಆರಂಭಿಕ ಬೆಳೆವಿಗೆ ಸಂಘಟನೆ ಮತ್ತು ಮುದ್ರಣಾಲಯದ ತೈಲ ದೊರೆತರೆ, ಮುಂದೆ ರಾತ್ರಿ ಶಾಲೆಗಳು, ಈ ತೈಲದ ಜ್ಯೋತಿಯನ್ನಾಧರಿಸಿ ನಿಂತವು.೧೯೧೭ ರಲ್ಲಿ ಎರಡನೆಯ ರಾತ್ರಿ ಶಾಲೆ ಬಾಂಬೇ ಫೋರ್ಟ್‌ ಆರಂಭಗೊಳ್ಳುವ ವೇಳೆಗೆ ಇಲ್ಲ ಕನ್ನಡ ಕಲಿಕೆ, ಆಧ್ಯಯನ, ಅಧ್ಯಾಪನಕ್ಕೆ ಚಾಲನೆ ದೊರೆತಾಗಿತ್ತು. ಕನ್ನಡದ ಯಕ್ಷಗಾನ, ಹರಿಕಥಾ ಕಾಲಕ್ಷೇಪ ಕೂಟಗಳು, ವಲಸೆ ಬಂದ ತುಳು ಕನ್ನಡ ನಾಡಿಗೆ ಸೇರಿದ ವಿವಿಧ ಸಮುದಾಯ ಸಂಘಟನೆಗಳ ಮೊಳಕೆಗೂ ನೆಲಹದಗೊಳ್ಳತೊಡಗಿತ್ತು.೧೯೨೦ ರಿಂದಾಚೆಗೆ ಒಂದೊಂದಾಗಿ ಜಾತಿ ಸಂಘಟನೆಗಳು ನೋಂದಾವಣೆಗೊಂಡು, ಬಂಟ ಬಿಲ್ಲವ, ದೇವಾಡಿಗ ಬ್ರಾಹ್ಮಣ ಹೀಗೆ ಹತ್ತಾರು ಸಂಘಗಳು ಅಧಿಕೃತವಾಗಿ ಜನ್ಮ ತಳೆಯುತ್ತಲೇ ಕನ್ನಡದ ಚಟುವಟಿಕೆಗಳು, ಮಾಸಿಕ , ಪಾಕ್ಷಿಕ ಮೀಟಿಂಗುಗಳು ನಿರಂತರಗೊಂಡವು. ರಾತ್ರಿ ಶಾಲೆಗಳ ಸಂಖ್ಯೆ ಜಾಸ್ತಿಯಾದವು.ವಿದ್ಯಾರ್ಥಿ ವೇತನದ ಮೂಲಕ ಕನ್ನಡದ ಮಕ್ಕಳ ಕಲಿಕೆಗೆ ಸಹಾಯ ಹಸ್ತವೂ ದೊರಕುವುದರೊಂದಿಗೆ ಮಕ್ಕಳ ಕಲಿಕೆಯ ಹಾದಿ ಸುಗಮಗೊಂಡವು.
ಶಿಕ್ಷಣ ಪ್ರೇಮೀ ಹೊಟೇಲಿಗರು ಹಚ್ಚಿದ ಹಣತೆ...

ಒಂದೆಡೆ ಕನ್ನಡದ ನುಡಿ ಬೀಜ ಹೀಗೆ ಮೊಳೆಯುತ್ತಾ ಸಾಗಿದರೆ, ಅದೇ ಸುಮಾರಿಗೆ, ಅರ್ಥಾತ್‌ ೧೯೦೦ ರ ನಂತರದಲ್ಲಿ ತುಳುನಾಡಿನಿಂದ ಬಂದ ಬಂಟ, ಬ್ರಾಹ್ಮಣ ಸಾರಸ್ವತ ರು ಹೊಟೇಲು ಉದ್ಯೋಗದ ಮುಂಚೂಣಿಗೆ ಸರಿದರು. ಕಲಿಯದೆ ನಗರ ಸೇರಿ, ಪರಿಶ್ರಮವನ್ನೇ ಬಂಡವಾಳವಾಗಿಟ್ಟು ಕಾಸು ಮಾಡಿದ ಈ ಮಂದಿ, ಮುಂದಿನ ಪೀಳಿಗೆಯ ಶಿಕ್ಷಣದ ಮಟ್ಟಿಗೆ ಬಹು ಧಾರಾಳಿಗಳಾಗಿ ನುಡಿಯ ನಡೆಯಲ್ಲಿ ಬಹು ಮುಖ್ಯಪಾತ್ರವಹಿಸಿದರು.
ರಾತ್ರಿ ಶಾಲೆಗಳಲ್ಲಿ ಕಲಿತ ಮಕ್ಕಳು, ಮತ್ತೆ ತಾವು ಕಲಿತᅵ ಶಾಲೆಗಳಲ್ಲಿ ಉಚಿತವಾಗಿ ಕಲಿಸತೊಡಗಿದ್ದು, ಊರಿಂದ ಅರೆಬರೆ ಕಲಿತು ಓಡಿ ಬಂದ ಮಕ್ಕಳ ಕಲಿಕೆಗೆ ಒತ್ತಾಸೆಯಾಗಿ ನಿಂತದ್ದು, ರಾತ್ರಿ ಶಾಲೆಗಳ ಜೊತೆಗೆ ವಡಾಲದಲ್ಲಿ ರಾಷ್ಟ್ರೀಯ ಕನ್ನಡ ಶಿಕ್ಷಣ ಸಂಸ್ಥೆಯ ವತಿಯಿಂದ ಹಗಲು ಶಾಲೆ ಆರಂಭಗೊಂಡಂದ್ದು, ಕಾಲೇಜುಗಳಲ್ಲಿ ಕನ್ನಡ ಉನ್ನತ ವ್ಯಾಸಂಗದ ವಿಭಾಗಗಳು ತೆರೆಯಲ್ಪಟ್ಟದ್ದು, ಇವೆಲ್ಲ, ಒಂದಕ್ಕೊಂದು ಪೂರಕವಾಗಿ , ಕೊಂಡಿಯೋಪಾದಿಯಲ್ಲಿ ಕನ್ನಡದ ಹುಲುಸಾದ ಬೆಳೆಗೆ ಕಾರಣವಾದವು.

ಗ್ರಂಥಾಲಯ ಗಳು ...ಮುಖವಾಣಿ ಪತ್ರಿಕೆಗಳು...

ಇದರ ಜೊತೆ ಜೊತೆಗೇ, ಕನ್ನಡ ಸಂಘ ಸಂಸ್ಥೆಗಳು, ಜಾತೀ ಸಂಸ್ಥೆಗಳು ತೆರೆದ ಗ್ರಂಥಾಲಯಗಳು, ನಂತರದ ಮುಖವಾಣಿಪತ್ರಿಕೆಗಳು ಕೂಡಾ ಈ ನುಡಿಯಾತ್ರೆಗೆ ಇನ್ನಷ್ಟು ಬಲ ತುಂಬಿದವು. ಇಲ್ಲಿಯೂ ಮತ್ತೆ ಮೊಗವೀರರದೇ ಮುಂಚೂಣಿ. ಫೋರ್ಟ್‌ ಪರಿಸರದಲ್ಲಿ ಗ್ರಂಥಾಲಯಗಳನ್ನು ಕನ್ನಡದ ಓದುಗರಿಗೆಂದೇ ತೆರೆದ ಮೊಗವೀರರು ೧೯೩೯ ರಲ್ಲಿ "ಮೊಗವೀರ" ಎಂಬ ಹೆಸರಲ್ಲೇ ತಮ್ಮ ಸಮುದಾಯದ ಮುಖವಾಣಿಯಾಗಿ ಆರಂಭಿಸಿದ ಮಾಸಿಕ, ಮುಂಬಯಿ ಕನ್ನಡದ ಹೆಸರನ್ನು ಒಟ್ಟಾರೆ ಕನ್ನಡದ ಸಾಹಿತ್ಯ ಮತ್ತು ಪತ್ರಿಕಾ ಚರಿತ್ರೆಯಲ್ಲೂ ಚಿರಸ್ಥಾಯಿಗೊಳಿಸಿತೆಂದರೆ ಅಚ್ಚರಿಯಿಲ್ಲ.ಮೊಗವೀರರು ಆರಂಭಿಸಿದ ಗ್ರಂಥಾಲಯ ಮತ್ತು ಮುಖವಾಣಿಯೂ ಇತರ ಸಂಸ್ಥೆಗಳ ಮೂಲಕ ದಾಂಗುಡಿ ಇಟ್ಟಿತು. ಮೈಸೂರ್‌ ಅಸೋಸಿಯೇಶನ್‌, ಮುಂಬಯಿ ಕನ್ನಡ ಸಂಘ ಇತ್ಯಾದಿ ಕನ್ನಡ ಸಂಘಟನೆಗಳು ಒಳ್ಳೆಯ ಗ್ರಂಥಾಲಯವನ್ನು ಆರಂಭಿಸುವ ಮೂಲಕ ಕನ್ನಡಿಗರ ವಾಚನಾಭಿರುಚಿ ತಗ್ಗದಂತೆ ಕಾಪಿಟ್ಟವು. ಅಷ್ಟಲ್ಲದೆ, ಈ ಸಂಘಟನೆಗಳ ಕಚೇರಿಗಳು ಕನ್ನಡಿಗರ ಭೇಟಿ, ಪರಿಚಯ ಮತ್ತು ಮಾಹಿತಿ ಹಾಗೆಯೇ ಸಾಹಿತ್ಯ ಪರಿಚಾರಿಕೆಯ ಕೇಂದ್ರಗಳೂ ಆದವು.

ನಗರ ಉಪನಗರಗಳಲ್ಲಿ ಕನ್ನಡದಲ್ಲಿ ಪುಸ್ತಕಗಳು ಮತ್ತು ಆಮಂತ್ರಣ ಪತ್ರಿಕೆಗಳನ್ನು ಮುದ್ರಿಸಬಲ್ಲ ಕನ್ನಡದ , ಕನ್ನಡಿಗರ ಮುದ್ರಣಾಲಯಗಳು, ಶುದ್ದ ಕನ್ನಡದಲ್ಲೇ ನಡೆಯುವ ಶನಿಗ್ರಂಥ ಪಾರಾಯಣ ಪರಿಪಾಠ, ಯಕ್ಷಗಾನದ ತಾಳ ಮದ್ದಲೆ ಕೂಟಗಳು.. ಹೀಗೆ ಎಲ್ಲೆಡೆ ಕನ್ನಡ ಘಮ ಘಮ...

ಇನ್ನೊಂದೆಡೆ , ರಾತ್ರಿ ಶಾಲೆಗಳ ಉಛ್ರಾಯದ ಹಂತದಲ್ಲಿ , ಕನ್ನಡಿಗರ ಬೇಡಿಕೆಗೆ ಓಗೊಟ್ಟ ಮುಂಬಯಿ ನಗರ ಪಾಲಿಕೆ ಐವತ್ತರ ದಶಕದ ಉತ್ತರಾರ್ಧಕ್ಕೆ, ಕನ್ನಡ ಶಾಲೆಗಳನ್ನೇ ಆರಂಭಿಸುವ ಮೂಲಕ ಕನ್ನಡದ ನುಡಿ ಕೃಷಿ ಪೂರ್ಣರೂಪ ಪಡೆಯಿತು.ಅರುವತ್ತರ ದಶಕದಲ್ಲಿ ಮುಂಬಯಿಯ ಆಕಾಶವಾಣಿಯಲ್ಲೂ ಕನ್ನಡ ಭಾಷೆಯೊಂದು ವಿಭಾಗವಾಗಿ ಸ್ಥಾನಮಾನ ಪಡೆದರೆ, ಇತ್ತ ಮುಂಬಯಿ ವಿಶ್ವವಿದ್ಯಾಲಯಕ್ಕೂ ಪೂರ್ಣ ಪ್ರಮಾಣದ ಕನ್ನಡ ವಿಭಾಗ ದೊರೆತು ಕನ್ನಡದ ಉನ್ನತ ವ್ಯಾಸಂಗ ಸುಲಭವಾಯಿತು. ವಡಾಲದ ರಾಷ್ಟ್ರೀಯ ಕನ್ನಡ ಶಾಲೆಯಲ್ಲದೆ, ಉಪನಗರ ಚೆಂಬೂರು, ಮುಳುಂಡು,ಥಾಣೆ, ಡೊಂಬಿವಲಿ ಹೀಗೆ ಕನ್ನಡಿಗರ ಬಾಹುಳ್ಯವುಳ್ಳ ಕಡೆಗಳಲ್ಲೆಲ್ಲ, ಕನ್ನಡದ ಹಗಲು ಶಾಲೆ ಕಾಲೇಜುಗಳು ಆರಂಭಗೊಂಡವು.
ಕಾಲದ ಕರೆ...

ಒಂದೊಮ್ಮೆ ಸಾಕಷ್ಟು ಶಿಕ್ಷಣ ಪಡೆಯುವ ಮೊದಲೇ ನಾಲ್ಕೋ ಐದೋ ಕ್ಲಾಸಿಗೆ ಶಾಲೆ ಬಿಟ್ಟು ಕನ್ನಡದ ಒಳನಾಡಿನಿಂದ ಮುಂಬಯಿಗೆ ಬರುತ್ತಿದ್ದ ಮಕ್ಕಳಿಗೆ "ಕಾಲದ ಅಗತ್ಯವಾಗಿ" ಹುಟ್ಟಿಕೊಂಡ ರಾತ್ರಿ ಶಾಲೆಗಳು ಮತ್ತೆ "ಕಾಲದ ಕರೆಗೆ "ಓಗೊಡ ಬೇಕಾಯಿತು.ಅರ್ಥಾತ್‌ ಅವನತಿಯತ್ತ, ಮುಚ್ಚುಗಡೆಯತ್ತ ಸಾಗಬೇಕಾಯಿತು. ಇದಕ್ಕಾಗಿ, ಅಳುವ ಅಗತ್ಯವಾದರೂ ಕಾಣುತ್ತಿಲ್ಲ, ಕಾಲದ ನಡೆಯಲ್ಲಿ ಎಲ್ಲವೂ ಹೀಗೆಯೇ! ಅನಿವಾರ್ಯತೆ ಶೋಧಕ್ಕೆ, ಹೊಸ ಹುಟ್ಟಿಗೆ ಕಾರಣವಾದ ಹಾಗೆಯೇ , ಅನಗತ್ಯತೆ ನಿರುಪಯುಕ್ತತೆ, , ಮುಕ್ತಾಯಕ್ಕೂ ಕಾರಣವಾಗುವುದು ಸಹಜವೇ ಸರಿ!. ಇವತ್ತಿಗೂ ಮುಂಬಯಿಗೆ ಕನ್ನಡಿಗರ ವಲಸೆ ಸಾಕಷ್ಟು ಪ್ರಮಾಣದಲ್ಲಿದ್ದರೂ ಅವರೆಲ್ಲ ವಿದ್ಯಾವಂತರಾಗಿಯೇ ಬರುತ್ತಿರುವುದು ವಾಸ್ತವ. ಆದರೆ ಕನ್ನಡಿಗರಾಗಿ ನಾವಿಲ್ಲಿ ಉಳಿಯಬೇಕಾದರೆ, ಮುಂದಿನ ಪೀಳಿಗೆಯೂ ನುಡಿಯನ್ನು, ನುಡಿಯ ಮೂಲಕ ಬಿಟ್ಟು ಬಂದ ನಾಡನ್ನು, ಅಲ್ಲಿನ ಸಂಸ್ಕೃತಿ ವಿಶೇಷಗಳನ್ನು ಉಳಿಸಿಕೊಂಡು ಬರಬೇಕಾದರೆ ಭಾಷೆಯ ನಂಟು ಬೇಕೇ ಬೇಕಾಗುತ್ತದೆ, ಎನ್ನುವುದು ಬೆಳಕಿನಷ್ಟು ಸತ್ಯ!

ಈ ಹಿನ್ನಲೆಯಲ್ಲಿ ನೋಡಿದಾಗ ಮತ್ತೆ ಬೆಳಕು ಗೋಚರಿಸುವುದು ಮಾಧ್ಯಮಗಳ ಮೂಲಕ. ಮೊಗವೀರ ಪತ್ರಿಕೆಯ ಹುಟ್ಟು, ಐವತ್ತರ ದಶಕದ ನುಡಿ ಪತ್ರಿಕೆ, ನುಡಿಯ ತರುವಾಯದ ತಾಯ್ನುಡಿ ಪತ್ರಿಕೆ, ಇದಕ್ಕೆ ಇಂಬು ನೀಡಿದರೆ, ನುಡಿ ತಾಯ್ನುಡಿ ವಾನ ಪ್ರಸ್ಥಕ್ಕೆ ತೆರಳುವ ಮೊದಲೇ ಹುಟ್ಟಿಕೊಂಡ ಎಲ್ಲ ಸಮುದಾಯಗಳ ಮುಖವಾಣಿ ಪತ್ರಿಕೆಗಳು (ಮೊಗವೀರ, ಅಕ್ಷಯ, ಬಂಟರವಾಣಿ, ಪತ್ರಪುಷ್ಪ, ಗೋಕುಲವಾಣಿ , ನೇಸರು,ಸಂಬಂಧ, ಗುರುತು, ಸಾಫಲ್ಯ, ಹವ್ಯಕ.....ಹೀಗೆ ಸುಮಾರು ಹದಿನೈದಕ್ಕೂ ಹೆಚ್ಚು!) ಆಯಾಯ ಸಮುದಾಯದಲ್ಲಿ ಭಾಷೆಯ ಬಳಕೆಯನ್ನು ಜೀವಂತ ಇರಿಸುವ ಮೂಲಕ ಒಟ್ಟಂದದಲ್ಲಿ ಮುಂಬಯಿ ಕನ್ನಡದ ಉಳಿವಿಗೆ ದೇಣಿಗೆ ನೀಡುತ್ತಿವೆ.

ಕನ್ನಡದ ಭವಿಷ್ಯ ದ ಕೈ ದೀವಿಗೆಗಳಿವು....

ಸಹಸ್ರ ವರ್ಷಗಳ ಹಿಂದೆ ಕನ್ನಡ ಅರಸರ ಆಡಳಿತದಲ್ಲಿ ಕನ್ನಡದ ಪಳೆಯುಳಿಕೆಗಳನ್ನುಬಿಟ್ಟಿರುವ ಮಹಾರಾಷ್ಟ್ರದ ಮಹಾ ಪಟ್ಟಣ ಮುಂಬಯಿಯ ಆಧುನಿಕ ಸ್ವರೂಪದಲ್ಲಿ ಹೀಗೆ ಎರಡನೇ ಬಾರಿಗೆ ಕನ್ನಡದ ನುಡಿ ಮಲ್ಲಿಗೆಯಾಗಿ ಚಿಗುರಿ ಘಮಘಮಿಸಿದ ಬಳಿಕ ಅದನ್ನು ಮುಂದಿನ ಪೀಳಿಗೆಗೆ ಕಾಪಿಡುವ ಕುರಿತ ಪ್ರಜ್ಞೆ, ಆತಂಕ, ಕಳವಳ (Concern)ಈ ನಗರದ ಕನ್ನಡಿಗ ಮನಸುಗಳಲ್ಲಿ ಮೂಡಲಾರಂಭಿಸಿದ್ದು ಎಂಭತ್ತರ ದಶಕದ ಉತ್ತರಾರ್ಧದಲ್ಲಿ! ಕಳೆದು ಹೋಗುವ ಇಲ್ಲವಾಗುವ ಅಳಿದು ಹೋಗುವ ವಸ್ತು, ವಿಚಾರ, ವಿಷಯಗಳ ಕುರಿತಾಗಿ ಒಂದು ಕಾಲಘಟ್ಟದಲ್ಲಿ ಹುಟ್ಟಿಕೊಳ್ಳುವ ಆತಂಕವೇ ಅಂತಿಮವಾಗಿ ಅವುಗಳಉಳಿವಿಗೆ ಊರುಗೋಲಾಗುವುದು, ಕಾರಣವಾಗುವುದು ನಾವು ಇತಿಹಾಸದಲ್ಲಿ ಕಂಡ ಸತ್ಯ!

ಇಲ್ಲಾದರೂ ಅಂತಹದೇ ದಿಕ್ಸೂಚಿಯೊಂದು ಕಂಡು ಬರುತ್ತಿದೆ. ಭಾಷೆ, ಸಂಸ್ಕೃತಿ ಪ್ರಜ್ಞೆಯೊಂದೇ ಆಗಿದ್ದ ಕಾಲದಿಂದ ಮುಂದೊತ್ತಿ , ಬದುಕು ಕಟ್ಟಿಕೊಳ್ಳವಲ್ಲಿ ಅದೊಂದು ಅನುಕೂಲ ಸಾಧನ (Tool) ವೂ ಆಗಿ ಹೋದ ಕಾಲದಲ್ಲಿ ನಾವಿಂದು ಜೀವಿಸುತ್ತಿದ್ದೇವೆ. ಇವತ್ತು ಕಾಸರಗೋಡಿಂದ ಬಂದ ಕನ್ನಡಿಗನಿಗೆ ಎರಡು ಭಾಷೆಗಳ ಅನುಕೂಲವಿರುತ್ತದೆ. ಆತ ಕನ್ನಡದ ಜೊತೆಗೆ ಮಲಯಾಳವನ್ನೂ ಆಡಬಲ್ಲನಾದರೆ, ಬರೆಯಬಲ್ಲನಾದರೆ, ಎರಡೂ ಭಾಷೆಗಳಿಗೆ ಸಂಬಂಧಪಟ್ಟ ಅನುವಾದದ ಕೆಲಸಗಳನ್ನು ಕೊಡಮಾಡುವ ಜಾಹೀರಾತು ಸಂಸ್ಥೆಗಳು ಈ ನಗರದಲ್ಲಿವೆ. ಅರ್ಥಾತ್‌,ಭಾಷೆ ಜ್ಞಾನದ ಜೊತೆಗೆ ಹೊಟ್ಟೆ ಹೊರೆಯುವಲ್ಲೂ ನೆರವಾಗುತ್ತ್ತಿರುವುದು, ಅನ್ನದ ಹುಟ್ಟಿಗೂ ಕಾರಣವಾಗುವುದು, ಅದರ ಉಳಿವಿನಲ್ಲಿ ಧನಾತ್ಮಕ ಪಾತ್ರವಹಿಸುತ್ತದೆ. ಮುಂಬಯಿ ಕನ್ನಡಕ್ಕೆಂದೇ ಪ್ರತ್ಯೇಕವಾಗಿ ಹೇಳುವುದಾದರೆ, ಇಲ್ಲಿ ಕನ್ನಡದ ಟಿವಿ ಚಾನೆಲುಗಳಿಗೆ , ಜಾಹೀರಾತು ನಿರ್ಮಾಣ, ಸ್ವರದಾನ ಮಾಡುವ ನೂರಾರು ಏಜೆನ್ಸಿಗಳಿವೆ, ಅಲ್ಲೆಲ್ಲಾ, ಸಾವಿರಾರು ಸಂಖ್ಯೆಯಲ್ಲಿ ಕನ್ನಡಿಗರು ದುಡಿಯುತ್ತಿದ್ದಾರೆ ಮತ್ತು ಅವರೆಲ್ಲ ಕನ್ನಡವನ್ನೇ ದುಡಿಸುತ್ತಾರೆ, ಹೀಗೆ ಕನ್ನಡ ಶಾಲೆಗಳ ಮಾದರಿಯಲ್ಲೇ, ಇಲ್ಲಿ ಕೂಡಾ ಭಾಷೆ ಅವರ ಅನ್ನದ ಹುಟ್ಟಿಗೆ ಕಾರಣವಾಗಿದೆ.ಭಾಷೆ ಒಂದು ಉಪಕರಣವಾದ ಈ ಸಂದರ್ಭಕ್ಕೆ ಮಕ್ಕಳ ಹೆತ್ತವರೂ ಧನಾತ್ಮಕ ಸ್ಪಂದನ ನೀಡಿದ್ದು ೭೦ ರ ದಶಕದಲ್ಲಿ, "ಮುಂಬಯಿಯಲ್ಲಿ ಬದುಕಬೇಕಾದ ತಮ್ಮ ಮಕ್ಕಳಿಗೆ" ಹಿಂದಿ ಇಂಗ್ಳೀಷ್‌ ಮರಾಠಿ ಕಲಿಸುವುದಕ್ಕೇ ಒತ್ತು ನೀಡಿದ್ದ ಅವರು ಇದೀಗ ತಮ್ಮ ಮಾತೃ ಭಾಷೆ ಕಲಿಸುವತ್ತಲೂ ಒಲವು ತೋರಿದ್ದಾರೆ.

ಪೂರ್ಣಕಾಲಿಕ ದಿನ ಪತ್ರಿಕೆಗಳು, ಮಕ್ಕಳ ತರಬೇತು ಸಂಸ್ಥೆಗಳು ...

೯೦ ರ ದಶಕದ ವರೆಗೂ ಮುಂಬಯಿಗೆ ತನ್ನದಾದ ಕನ್ನಡ ದಿನಪತ್ರಿಕೆ ದೊರಕಿರಲಿಲ್ಲ. ಆದರೆ ೯೦ ಮತ್ತ್ತು ೨೦೦೦ ದ ಮಧ್ಯೆ ಇಲ್ಲಿ ಎರಡು ಪೂರ್ಣ ಪ್ರಮಾಣದ ದಿನ ಪತ್ರಿಕೆಗಳನ್ನು ಕಾಣುವಂತಾದದ್ದು , ಕನ್ನಡ ಶಾಲೆಗಳ ಮುಚ್ಚುವಿಕೆಯಿಂದೊದಗಿದ ನಷ್ಟವನ್ನು ಸ್ವಲ್ಪ ಮಟ್ಟಿಗೆ ಭರಿಸಿದವು.ಮುಂಬಯಿ ನೆಲದಲ್ಲೇ ಹುಟ್ಟಿದ , ಮುಂಬಯಿ ವಾರ್ತೆಗಳನ್ನೇ ಪ್ರಧಾನವಾಗಿ ಮುದ್ರಿಸುವುದರಿಂದಾಗಿ ಅದಕ್ಕೂ ಹೆಚ್ಚು ಮುಂದುವರಿದು ಹೇಳುವುದಾದರೆ, ಇಲ್ಲಿ ನಡೆಯುವ ಕನ್ನಡದ, ಕನ್ನಡಿಗರ ಚಟುವಟಿಕೆಗಳನ್ನು ಬೆಳಗಾತ ಮನೆ ಮನೆಗೆ ಮುಟ್ಟಿಸುವ ಕಾರಣದಿಂದಾಗಿ ಈ ಪತ್ರಿಕೆಗಳು ಸಾಕಷ್ಟು ಪ್ರಸಾರವನ್ನೂ ಹೊಂದುವಂತಾಯಿತು. ಜತೆಗೆ, ಮುಂಬಯಿ ಕನ್ನಡಿಗ ನಿತ್ಯ ಕನ್ನಡದ ಓದು ಮತ್ತು ಕನ್ನಡ ಲಿಪಿಯ ಒಡನಾಟದಲ್ಲಿರುವಂತೆ ಇವು ಮಾಡಿದವು. ಆ ಕಾರಣಕ್ಕೇ, ಇವು ಮತ್ತು ಕನ್ನಡದ ಮಕ್ಕಳಿಗೆ ಕನ್ನಡ ಭಾಷೆ , ಸಂಸ್ಕೃತಿಯ ತಿಳುವಳಿಕೆ ನೀಡುತ್ತಿರುವ "ಕಲಾ ಜಗತ್ತು ಚಿಣ್ಣರ ಬಿಂಬ " ದಂತಹಾ ಸಂಸ್ಥೆಗಳು ಮುಂಬಯಿ ನಗರದಲ್ಲಿ ಕನ್ನಡದ ಭವಿಷ್ಯ ವನ್ನು ಕಾಯುವ ಕೈ ದೀವಿಗೆಗಳಾಗಿ ಗೋಚರಿಸಿವೆ ಎನ್ನಲಡ್ಡಿಯಿಲ್ಲ.
ಇದರ ಜೊತೆಗೆ, ನಗರದ ಮೂಲೆ ಮೂಲೆಗಳಲ್ಲಿ ಹುಟ್ಟುತ್ತಿರುವ ಕನ್ನಡಿಗ ಸಂಸ್ಥೆಗಳು, ಅವುಗಳ ಪ್ರಾಯೋಜಕತ್ವದಲ್ಲಿ ನಡೆಯುತ್ತಿರುವ ಹಾಸ್ಟೆಲುಗಳು, ಸಭಾಭವನಗಳು, ವೃದ್ದಾಶ್ರಮಗಳು,ಜಾತಿ ಸಂಘಟನೆಗಳ ಸ್ಥಳೀಯ ಸಮಿತಿ (ಪ್ರಾದೇಶಿಕ) ಗಳು, ಅವು ಇಡೀ ತಿಂಗಳು, ವರ್ಷ ನಿರಂತರವಾಗಿ ನಡೆಸುತ್ತಿರುವ ಕನ್ನ್ನಡ ಕಾರ್ಯಕ್ರಮಗಳು, ಹೀಗೆ ಭಾಷೆಯ ಮೂಲಕ ನಡೆಯುವ ಚಟುವಟಿಕೆಗಳೆಲ್ಲ ಪರೋಕ್ಷವಾಗಿ ಕನ್ನಡ ಭಾಷೆಯ ಉಳಿವಿಗೆ ದೇಣಿಗೆಯನ್ನು ನೀಡುತ್ತಲೇ ಇವೆ ಎನ್ನುವುದು ನೆಮ್ಮದಿಮತ್ತು ಸಂತಸ ಎರಡನ್ನೂ ಒಟ್ಟೊಟ್ಟಿಗೇ ನೀಡುವ ವಿಚಾರ.



Thursday, April 1, 2010

ಬಸಿರ ತುಂಬ ಬದುಕ ಹೊತ್ತ ಮುಂಬಯಿಯೊಳಗೊಂದು ಇಣುಕು..

ಬದುಕು ಬಹುಮುಖಿ ಇಲ್ಲಿ ...
ಮುಂಬಾ 'ಆಯಿ'ಯಲ್ಲಿ !!

ಭಾರತದ ಕಾಸ್ಮೋಪಾಲಿಟನ್ ನಗರವೆಂಬ ಅಭಿಧಾನವುಳ್ಳ, ಮಹಾನಗರಿ ಮುಂಬಯಿಯ ಕಳೆದೊಂದು ವರ್ಷದಿಂದೀಚಿನ, ಘಟನಾವಳಿಗಳನ್ನೇ ನೋಡಿ...
ಮೊದಲು , ಬಿಹಾರಿ ಬಾಬುಗಳ ವಿರುದ್ದ ಬೊಮ್ ಬೊಮ್...
ನಂತರ, ಉತ್ತರ ಭಾರತೀಯ ಟ್ಯಾಕ್ಸಿ ಚಾಲಕ್ ಬಗಾವೋ...
ಈಗ, ಮುಂಬಯಿ 'ಮುಂಬಯಿಕರ್' ಗೆ ಮಾತ್ರ...!

ರೈಲ್ವೇ ಪರೀಕ್ಷೆ ಬರೆಯಲು ಬಂದ ಬಿಹಾರಿಗಳ ಮೇಲೆ ರೈಲು ನಿಲ್ದಾಣದಲ್ಲೇ ದಾಳಿ, ತಲೆ ಒಡೆತ. ಬಳಿಕ ಬಡಪಾಯಿ ಉತ್ತರ ಭಾರತೀಯ ಟ್ಯಾಕ್ಸಿ ಚಾಲಕರ ಮೇಲೆ ಕಂಡಲ್ಲೆಲ್ಲಾ ಹಲ್ಲೆ , ರಾತ್ರಿ ಹಗಲು ಮುಂಬಯಿ ಜನಸಾಮಾನ್ಯನ ಸಾರಿಗೆಯ ಜೀವಾಳವಾಗಿರುವ ಟ್ಯಾಕ್ಸಿ ವಾಲಾಗಳಿಗೆ ಮುಂಬಯಿ ಬಿಟ್ಟೋಡಲು ಆಜ್ಞೆ. .

ಇದೀಗ ಮುಂಬಯಿಯಲ್ಲಿ ಟ್ಯಾಕ್ಸಿ ನಡೆಸ ಬೇಕಾದಲ್ಲಿ ಮರಾಠಿ ಬರಲೇ ಬೇಕೆಂಬ 'ದಿಕ್ ತಾಟ್'! ಇಷ್ಟೇ ಯಾಕೆ, ಬಾಳ್ ಠಾಕ್ರೆ ಪಕ್ಕದ ಮನೆಯ ಅಚ್ಚ ಮರಾಠಿ ಹುಡುಗ ,ಭಾರತೀಯರೆಲ್ಲರ ಮನಗೆಲ್ಲುವ "ಕ್ರಿಕೆಟ್ ಚಿನ್ನ" ಸಚಿನ್ನನಿಗೂ 'ನೀನು ಮರಾಠಿಗನೆಂದು ಮೊದಲು ಹೇಳು' ಎಂಬ ಹುಕುಂ!

. . . ಮನ ಮುರಿದುಕೊಂಡ ಸೋದರರಿಬ್ಬರು ಮನೆಯ , ಇರುವ ಒಂದೇ ಜಹಗೀರಲ್ಲಿ ತಮ್ಮ ಹಕ್ಕು ಸ್ವಾಮ್ಯಕ್ಕಾಗಿ ಜಂಗೀ ಕುಸ್ತಿ ಕಾದುತ್ತಾರೆ.. ...ಅಲ್ಲಿ ಜಹಗೀರು ಮನೆಯ ಸ್ವಂತದ್ದು ... ಇಲ್ಲಿ ಮುಂಬಯಿ ಎಂಬ ಭಾರತದ 'ಎಲ್ಲರ ಸಲಹುವ' ನಗರದಲ್ಲಿ , ತಮ್ಮ ಬೇಳೆ ಬೇಯಿಸಿಕೊಳ್ಳುವ ಹುನ್ನಾರದಲ್ಲಿ , ರಾಜಕೀಯ ಅಧಿಪತ್ಯ' ಸಾಧಿಸುವ ಹಟದಲ್ಲಿ , ಪರಭಾಷೆ -ಪರಪ್ರಾಂತವೆಂಬ ನೆಲೆಯಲ್ಲಿ ಹಿಂದೂ -ಮುಸ್ಲಿಮ್ ಎಂಬ ನೆವದಲ್ಲಿ ಸಾರ್ವಜನಿಕ ಬದುಕಿನ ಮೇಲೆ ದಿನಕ್ಕೊಂದು ಬಗೆಯ ಹಲ್ಲೆ...ಮೂಲ ಭೂತ ಸ್ವಾತಂತ್ರದ ಮೇಲೇ ದಾಳಿ..!

'ಪುಂಗಿ ಬಜಾವೋ ..ಲುಂಗಿ ಹಠಾವೋ " ಎಂಬ ಅರುವತ್ತರ ದಶಕದ ದಕ್ಷಿಣ ಭಾರತೀಯರನ್ನು ಗುರಿಯಾಗಿರಿಸಿದ್ದ ಚಳವಳಿಗಿಂತಲೂ ಕೆಟ್ಟ ಉದ್ದೇಶ ಹೊಂದಿರುವ ಹೂಟ! ಮುಂಬಯಿ ಎಂಬ ಬಹು ಮಖೀ -ಬಹು ಆಯಾಮದ -ಬಹು ಮಜಲ ಬದುಕಿನ ಕಣ್ಣ ಪಾಪೆಗೇ ಗುರಿಯಿಡುವ ಕುಟಿಲ ಗೂಂಡಾಗಿರಿಯ ಕೂಟ! !

ಹೌದು, ಎಲ್ಲಿಯೂ ಸಲ್ಲದವ... ಎಲ್ಲೆಲ್ಲೂ ಸಲ್ಲದವ , ಇಲ್ಲಿ ಸಲುವ...!

ವಲಸೆ ಸಹಜವಾಗಿಯೇ ಮನುಷ್ಯನನ್ನು ಪರಿಶ್ರಮಿಯೂ , ಸಾಹಸಿಯೂ ಆಗಿ ರೂಪಿಸುತ್ತದೆ. ಹಾಗಾಗಿಯೇ ಇರಬೇಕು, ನೂರು ವರ್ಷಕ್ಕೂ ಹೆಚ್ಚು ಕಾಲ ಮುಂಬಯಿಗರಾಗಿ ಬದುಕಿದ "ಮರಾಠಿ ಮಾನೂಸ್" ಗಿಂತ ಆರು ವರ್ಷಕ್ಕೆ ಹಿಂದೆ ಈ ನಗರಿಗೆ ಬರಿಗೈ ಪಕೀರರಾಗಿ ಬಂದ ಮಲಯಾಳಿಯೋ, ಕನ್ನಡಿಗನೋ ತಮಿಳನೋ ಅಥವಾ ಉತ್ತರ ಭಾರತೀಯನ ಆರ್ಥಿಕ ಹುಟ್ಟುವಳಿ ,ಜೀವನದ ಸಾಧನೆ , ಯಶಸ್ಸು ದೊಡ್ಡದು. ಆದರೆ ಇದು , ಹಗಲು ರಾತ್ರಿ ಗಳೆರಡೂ ಒಂದೇ ಎಂಬಂತೆ ಎರಡು ಮೂರು ಪಾಳಿಗಳಲ್ಲಿ, ಕಾರಕೂನ, ವೈಟರ್ , ವ್ಯಾಪಾರವೆಂಬಂತೆ , ಬಗೆ ಬಗೆ ವೇಷಗಳಲ್ಲಿ ಮಾಡಿದ ಬೆವರಿನ ಫಲ ಎಂಬುದನ್ನು ಭೂಮಿಪುತ್ರರ "ಗುತ್ತಿಗೆ" ವಹಿಸಿಕೊಂಡ ಮಂದಿ ಅರಿತುಕೊಳ್ಳುವುದಿಲ್ಲವೇಕೆ? ಭಾಷೆಯ ನೆಲೆಯಲ್ಲಿ, ಉತ್ತರ ಭಾರತೀಯ ಟ್ಯಾಕ್ಸಿ ಚಾಲಕರನ್ನು ಹೊರದಬ್ಬಬೇಕೆನ್ನುವವರು, ಮಣ್ಣಿನ ಮಕ್ಕಳು ಈ ಉದ್ಯೋಗವನ್ನೇಕೆ ಇಷ್ಟಪಡುವುದಿಲ್ಲವೆಂಬುದಕ್ಕೆ ಕಾರಣವನ್ನು ಕಂಡು ಹಿಡಿಯುವುದಿಲ್ಲವೇಕೆ? ಪಟ್ನಾದಿಂದಲೋ, ಲಕ್ನೋದಿಂದಲೋ ಬಂದ "ಭಯ್ಯಾ" ಮಾರುವ ವಡಾಪಾವ್" ಸ್ಟಾಲ್ ನ ವ್ಯಾಪಾರದ ಮೇಲೆ ಕಣ್ಣಿಟ್ಟವರು, ಪ್ರತಿಯಾಗಿ ತಾವು ಆರಂಭಿಸಿದ "ಭಾಕ್ರಿ ಭಾಜೀ" ಮಾರಾಟದ "ಝುನ್ಕಾ ಬಾಕರ್ " ಕೇಂದ್ರಗಳು , "ಶಿವ್ ವಡಾ ಪಾವ್" ಯಾಕೆ ಜನರ ಕಣ್ಣಿಗೇ ಬೀಳಲ್ಲಿಲ್ಲ ವೆಂಬುದನ್ನು ತಿಳಿಯಬೇಕು...

ಬದುಕು ಬಹುಮುಖಿ ಇಲ್ಲಿ ...

ವಿಟಿ ಸ್ಟೇಶನ್ನಿನ ಪಕ್ಕದ ಫೋರ್ಟ್ ಬಳಿ ಇರುವ "ಮಹೇಶ್ ಲಂಚ್ ಹೋಮ್" ಸ್ಟಾರ್ ಗ್ರೇಡಿನ ಹೊಟೇಲೇನೂ ಅಲ್ಲ, ಆದರೆ ರುಚಿಗೆ ಮನಸೋತು , ತಮ್ಮ ತಾರಾ ಇಮೇಜುಗಳನ್ನೆಲ್ಲ ಬದಿಗಿಟ್ಟು, ಈ ಹೊಟೇಲಿಗೆ ಸದ್ದಿಲ್ಲದೆ ಭೇಟಿ ಇತ್ತು ತಮಗಿಷ್ಟವಾದ ವೆಜ್ , ನಾನ್ ವೆಜ್ , ಸೀ ಫುಡ್ ಖಾದ್ಯಗಳನ್ನು ಸವಿಯುವುದನ್ನು ಅಮಿತಾಬ್, ಜಯಾ ಬಚ್ಚನ್, ರಾಹುಲ್ ಗಾಂಧಿ, ಲಿಟ್ಲ್ ಮಾಸ್ಟರ್ ಸುನೀಲ್ ಗವಾಸ್ಕರ್ ಎಂದಿಗೂ ತಪ್ಪಿಸುವುದಿಲ್ಲ...ಅಂದ ಹಾಗೆ ಈ ಹೊಟೇಲಿನ ಮಾಲಕ ಸೂರು ಸಿ. ಕರ್ಕೇರಾ , ದಕ್ಷಿಣದ ರಾಜ್ಯವಾದ ಕರ್ನಾಟಕದ ದ.ಕ.ಜಿಲ್ಲೆಯವರು. ಇಷ್ಟೆಂದರೆ ಸಾಕೇ? ಮುಂಬಯಿ ಮರಾಠಿಗರದ್ದು ಎಂದು ಡಂಗುರ ಸಾರುವ ಶಿವ ಸೇನಾ -ನವ ನಿರ್ಮಾಣ ಸೇನಾ ದ ನಾಯಕ ಮಣಿಗಳಾದ ಉದ್ದವ್ -ರಾಜ್ ಠಾಕ್ರೆಗಳಿಗೂ ಸಮಯ ಸಿಕ್ಕಾಗಲೆಲ್ಲ ಅಮರಾಠಿಯಲ್ಲದ ಕರ್ಕೇರಾ ಅವರ ಹೋಟೇಲಿನ ರುಚಿ ಸವಿಯದಿರಲಾಗುವುದಿಲ್ಲ!

ಅಮ್ಚೀ ಮುಂಬಯಿಯ ಮೊದಲ ಕಾಪಿ ರೈಟ್" ತನ್ನದೆನ್ನುವ "ಹಿಂದೂ ಹೃದಯ ಸಾಮ್ರಾಟ" ಬಾಳಾ ಸಾಹೇಬ್ ಠಾಕ್ರೆಯವರಿಗೆ ಬಹುಕಾಲ ರೇಖಿ ಚಿಕಿತ್ಸೆ ನೀಡಿದ ಆಪ್ತ ವೈದ್ಯ ಡಾ.ವೆಂಕಟೇಶ ಪೈ ದಕ್ಷಿಣ ಕನ್ನಡದವರು.! ಅಷ್ಟೇ ಯಾಕೆ ಸದ್ಯ "ಫಯರ್" ಅಂದರೂ ಬೆಂಕಿ ಉಗುಳದ ಈ ಫೈರ್ ಬ್ರಾಂಡ್ ನಾಯಕನ ಖಾಸಗಿ ಭದ್ರತಾ ವಲಯದಲ್ಲಿದ್ದವರಲ್ಲಿ ಹೆಚ್ಚಿನವರೂ ಉಡುಪಿ -ದ.ಕ.ಜಿಲ್ಲೆ ಯ ಬಂಟ ಸಮುದಾಯಕ್ಕೆ ಸೇರಿದ "ನಂಬುಗೆಯ"ಶೆಟ್ರು ಗಳು !!

ಮುಂಬಯಿ ಕೇಂದ್ರಿತ ಬಾಲಿವುಡ್ ನ 'ಒಗರು ' - 'ರಂಗು' ಇರುವುದೇ ಮರಾಠಿಗಳಲ್ಲದ ಅಮಿತಾಬ್, ಅಕ್ಷಯ್ ರೇಖಾ, ಶ್ರೀದೇವಿ ಅಥವಾ ಮೂಲತಹ ತುಳು -ಕನ್ನಡಿಗರಾಗಿರುವ ಐಶ್ವರ್ಯಾ -ಶಿಲ್ಪಾ --ಸುನೀಲ್ ಇಂತಾ ಹತ್ತಾರು ಖ್ಯಾತ ತಾರೆಯರಿಂದ ! ಇವರನ್ನೆಲ್ಲ ಯಾವ ಮಾನದಂಡದಲ್ಲಿ ಟ್ಟು ಮಾಹಾರಾಷ್ಟ್ರೇತರರೆಂಬ"ಶಿರೋನಾಮೆ"ಯಲ್ಲಿ ಹೊರಹಾಕಬಹುದು? ಹಾಗೊಮ್ಮೆ ಮಾಡಿದ ಮೇಲೂ ಮುಂಬಯಿ , "ಮುಂಬಯಿ" ಯಾಗುಳಿದೀತೇ ? ಬಿಡಿ, ವರುಷವೆರಡರ ಹಿಂದೆ "ಉಗ್ರ"ರಾಕ್ಷಸರು ಮುಂಬಯಿಯೆಂಬ ಮುಂಬಯಿಗೇ "ಕೊಳ್ಳಿ" ಯಿಟ್ಟು ಮಾರಣವೆಸಗಿದಾಗ, ಮುಂಬಯಿಯ ದು:ಖ -ದುಮ್ಮಾನ ಕೇವಲ ಮರಾಠಿಗರದ್ದಾಗಿ ಉಳಿದಿತ್ತೇ? ಸದ್ಯ ದೇಶಾದ್ಯಂತ ವಿಚಾರವಂತ, ಸೃಜನ -ಸಂವೇದನಾಶೀಲ ಮನಸ್ಸುಗಳನ್ನು ಕಲಕಿರುವ ಪ್ರಶ್ನೆ ಇದು.

ಯಾವ ಪ್ರಾಂತ..ಏನು ಭಾಷೆ ?

ನಮ್ಮ ಗ್ರಾಮೀಣ ಪ್ರದೇಶಗಳಲ್ಲಿ ಹಳ್ಳಿಗಳನ್ನು ವಿಭಾಗಿಸುವ ಸಣ್ಣ ಪುಟ್ಟ ನದಿಗಳಂತೆ, ಮುಂಬಯಿ ಎಂಬ ಮಹಾನಗರದ ಸುತ್ತಲ ಪುಟ್ಟ ನಗರಗಳು -ಒತ್ತಲ ಉಪನಗರಗಳ ತುಂಬ ಕರುಳ ಬಳ್ಳಿಗಳಂತೆ ಹರಡಿರುವ ಸಾವಿರದ ಸಂಖ್ಯೆಯನ್ನೂ ಮೀರುವ ಲೋಕಲ್ ರೈಲ್ವೇ ಲೈನುಗಳು...
ಅವುಗಳನ್ನೇ ನಂಬಿ ಸಾಗುವ ಕೋಟ್ಯಂತರ ಜನಗಳ ನಿತ್ಯದ ಬದುಕು ...
ಮೂರೋ ನಾಲ್ಕೋ ನಿಮಿಷಕ್ಕೊಂದರಂತೆ ಲೋಕಲ್ ಯಾನದ ಬಂಡಿಗಳು ದಾದರ್, ವಿಟಿ ಅಥವಾ ಚರ್ಚ್ ಗೇಟಿನಂತಹಾ ನಿಲ್ದಾಣದಲ್ಲಿ ಅರೆಕ್ಷಣ ನಿಂತಾಗ , ಕೆದರಿ ಗೂಡು ಬಿಟ್ಟು ಹೊರಗೋಡುವ ಜೇನು ಕೀಟಗಳಂತೆ ಬೋಗಿಗಳಿಂದ ಹೊರಕ್ಕೆ ಬೀಳುವ ಸಾವಿರಾರು ಮಂದಿಯ ಮಂದೆ...
ಇಲ್ಲಿ ಯಾರು ಬಿಹಾರಿ ಬಾಬು..ಯಾರು ಉತ್ತರದ ಭಯ್ಯಾ..ಯಾರು ದಕ್ಷಿಣದ ಅಯ್ಯ...
ನಿಜಕ್ಕಾದರೆ ಇದು ನಿತ್ಯ ಕಣ್ಣಿಗೆ ಕಾಣುವ ನಿಜದ ಭಾರತ! ಇದಕ್ಕಾಗಿಯೇ ಬಂದದ್ದ್ದು ಅಭಿದಾನ...

ಮುಂಬಯಿ ಎಂದರೆ ಅದು "ಮಿನಿ ಭಾರತ"!

ಬದುಕೊಂದೇ ಮಂತ್ರ..

ಹೊಟೇಲಿನ ಹಣದ "ಗಲ್ಲೆ' ಗೆ, ಪಾನ್ ಬೀಡಾದ ಅಂಗಡಿಯ ದೇವರ ಪಟಕ್ಕೇರಿಸಲು ಬೆಳಗಾತ "ಫೂಲ್ " ಕಟ್ಟು ತಂದಿಟ್ಟು ಹೋಗುವವ ರಾಜಸ್ತಾನಿ ಭಟ್ಟ...ಪಾವ್ ಭಾಜೀ, ವಡಾ ಪಾವ್ ಸೆಂಟರಿಗೆ ನಿತ್ಯ ಪಾವ್ ಪೂರೈಸುವವ, ಹಾಲು ಹಂಚುವವ ಯು.ಪಿ.ಯ ಭಯ್ಯಾ...
ಟಿವಿ ಜಾಹೀರಾತೊಂದು ಸದಾ ಹೇಳುತ್ತಿರುತ್ತದೆ.. "ತಿಂದರೆ ತಿಂದವರು ತಿನ್ನುತ್ತಲೇ ಇರಬೇಕು.."..ಇಂತಾ ಸ್ವಾದದ ಬ್ರಿಜ್ವಾಸಿ...ಬಿಕಾನೇರ್ ಸ್ವೀಟ್ಸ್ ಗಳಿಲ್ಲದ ...ಉತ್ತರ ಭಾರತದವರೇ ಹೆಚ್ಚಿದ್ದು, ನಡೆಸುವ ಪಾನೀ ಪೂರಿ, ಪಾವ್ ಭಾಜೀ , ವಡಾ - ಪಾವ್ ದುಕಾನ್ ಗಳಿಲ್ಲದ ಮುಂಬಯಿಯ ಬೀದಿಗಳನ್ನು ಊಹಿಸುವುದಾದರೂ ಸಾಧ್ಯವೇ....??

ಬೆಳಗೆದ್ದು , ಇಪ್ಪತ್ತೈದೋ ಮೂವತ್ತೋ ರೂಪಾಯಿ ದಿನದ ಬಾಡಿಗೆಗೆ ಪಡೆದ ತಳ್ಳುಗಾಡಿಯಲ್ಲಿ ಹದಿನೈದು ಕಿಲೋ ಈರುಳ್ಳಿ ಅಷ್ಟೇ ಬಟಾಟೆ ಕೊಂಡು ಹತ್ತಾರು ಓಣಿಗಳಲ್ಲಿ ಸಾಗುವ ಕಾಂದಾ ಬಟಾಟಾವಾಲನಿಗೂ ಇಲ್ಲಿ ತನ್ನದೊಂದು ಬದುಕಿದೆ..

ದೊಡ್ಡ ಹೊಟೆಲಿಗೆ ಅಷ್ಟೇ ದೊಡ್ಡ ಮುಂಗಡ ನೀಡಿ, ಬಾರೋ , ಹೊಟೇಲೋ ನಡೆಸುವ, ಒಂದೊಮ್ಮೆ ಮಂಗಳೂರಿನ ಮೂಲ್ಕಿಯಿಂದಲೋ ಪಡುಬಿದ್ರಿಯಿಂದಲೋ ಓಡಿ ಬಂದ ಶೆಟ್ಟರ ಹುಡುಗ ಒಳ್ಳೆಯ ವ್ಯಾಪಾರದಿಂದ ಆ ಪರಿಸರದಲ್ಲಿ "ಶೆಟ್ಟಿ ಶೇಠ್" ಆಗಿ ಜನಾನುರಾಗಿಯಾಗುತ್ತಾನೆ. ಕುಟುಂಬದ , ತನ್ನೂರ ಮಂದಿಯ..ಶಾಲೆಯ ಅಭಿವೃದ್ದಿಯ ಹರಿಕಾರನಾಗುತ್ತಾನೆ..ಅದೇ ಹೊಟೇಲಿನ ಮುಂಚಾಚಿನಲ್ಲಿ ಹೆಸರಿಗೆ "ಬೀಡಾ "ಅಂಗಡಿ ನಡೆಸುವ ಪಾನ್ ವಾಲಾ ತನ್ನ ಆರಡಿ -ಮೂರಡಿ ದುಕಾನಿನಿಂದಲೂ ತಿಂಗಳ ಮೂವತ್ತು ಸಾವಿರ ಆದಾಯಕ್ಕೆ ಕಡಿಮೆ ಇಲ್ಲದ ವ್ಯಾಪಾರ ನಡೆಸುತ್ತಾನೆ...ಉತ್ತರದ ಎಲ್ಲೋ ಹಳ್ಳಿಗಾಡಿನ ತನ್ನ ಕುಟುಂಬದ ಹೆಣ್ಣು ಮಕ್ಕಳ ಮದುವೆ ಮುಂಜಿ ನಡೆಸುತ್ತಾನೆ.. .
ಎಲ್ಲ್ಲರಿಗೂ ಇಲ್ಲಿ ಒಂದೇ ಮಂತ್ರ..ಬದುಕು..ಬದುಕು ಮತ್ತು ಬದುಕು!

'ಹುಲಿಮುಖ' ದ ನಾಯಕ . . .

ಒಂದೊಮ್ಮೆ , ಭಾರತದ ಅತಿ ಪುರಾತನ ಇಂಗ್ಲೀಷ್ ಪತ್ರಿಕೆಯಲ್ಲೊಂದಾದ "ಫ್ರೀ ಫ್ರೆಸ್ ಜರ್ನಲ್ " ಯಲ್ಲಿ ಕಾರ್ಟೂನಿಸ್ಟ್ ಆಗಿ ಕೆಲಸ ಮಾಡುತ್ತಾ, "ಭೂಮಿ ಪುತ್ರ" ರಿಗೆ ಅವರದೇ ನಾಡಲ್ಲಿ, ದ್ವಿತೀಯ ದರ್ಜೆಯ ಸ್ಥಾನಮಾನ ನೀಡಲಾಗುತ್ತಿದೆ.. ಅವರನ್ನು ಮುಖ್ಯವಾಹಿನಿಯಿಂದ ದೂರವಿಡಲಾಗುತ್ತಿದೆ ಎಂಬುದೊಂದು ವಾದವನ್ನು ಮುಂದಿಟ್ಟು ..ಅದಕ್ಕೆ ಮಧ್ಯಮ , ಕೆಳಮಧ್ಯಮ ಮರಾಠಿ ಮಂದಿಯ ಸ್ಪಂದನವಿದೆ ಎಂಬುದನ್ನು ಮನಗಂಡು , ಮುಂಬಯಿ ರಾಜಕಾರಣದ ಪುಂಡು ನಾಯಕನಾಗಿ ಬೆಳೆದು, ಬಳಿಕ ತನ್ನ ಮರಾಠಿ ದಂಡಿಗೆ "ಹುಲಿಮುಖ"ದ ನಾಯಕನಾದವರು ಈ ಠಾಕ್ರೆ !
"ಮಾರ್ಮಿಕ್" ಎಂಬ ಕಾರ್ಟೂನ್ ಪತ್ರಿಕೆಯಲ್ಲಿ ತಮ್ಮ ವ್ಯಂಗ್ಯ ರೇಖೆಗಳನ್ನು (ಕಾರ್ಟೂನ್) ಎಳೆದು , ಕೆಳಗೆ ಅಷ್ಟೇ ವ್ಯಂಗ್ಯ ಅಡಿನಾಮೆಗಳ ಮೂಲಕ ಮರಾಠಿ ಮನಸ್ಸುಗಳನ್ನು ಮುಂಬಯಿಗೆ ಅನ್ಯ ರಾಜ್ಯಗಳವರ ವಲಸೆಯ ವಿರುದ್ದ ತೊಡಗಿಸಿ ಬೆಳೆದ ಠಾಕ್ರೆ ,ಮುಂದೆ ತನ್ನನ್ನು ರಾಜ್ಯಗಳ ಉಸಾಬರಿಯಿಂದ ಮತೀಯತೆಯತ್ತ ತಿರುಗಿಸಿಕೊಂಡದ್ದು ಈಗ ಇತಿಹಾಸ.

ಆದರೆ ವಾಣಿಜ್ಯವೇ ಜೀವಾಳವಾಗಿ, ಬದುಕು ಎಲ್ಲಕ್ಕಿಂತ ಮುಖ್ಯವಾದ ನಗರಕ್ಕೆ ಸದ್ಯ "ದೊಣೆ ನಾಯಕರ ಅಪ್ಪಣೆ" ಬೇಕಾಗಿಲ್ಲವೆಂಬುದು ಇತ್ತೀಚಿನ ಎರಡೂ ಚುನಾವಣೆಗಳು ಶ್ರುತಪಡಿಸಿವೆ. ಹಾಗಾಗಿಯೇ ಈ ಹೊಸ ವರಾತ !

..ಇನ್ನೊಂದೆಡೆ , ತಾನು ಬೆಳೆದ ಗವಿಯಲ್ಲಿ "ಹುಲಿ"ಯಾಗುವ ಪ್ರಯತ್ನ ವಿಫಲವಾದಾಗ ತನ್ನದೇ ದಂಡು ಕಟ್ಟಿ , ಅದೇ ಮುದಿ ಹುಲಿಯನ್ನನುಸರಿಸ ಹೊರಟ "ಮರಿ ಹುಲಿ" ಗೆ ತನ್ನ ಪುಂಡಾಟಿಕೆಯಿಂದ ಮರಾಠಿ ಮಾನುಸ್ ನ ಮನಗೆಲ್ಲುವ ತವಕ.ಒಟ್ಟಾರೆಯಾಗಿ ಎರಡೂ ಕಡೆಯ ಮತಗಟ್ಟೆ (ಮತಿಗೆಟ್ಟ ?)ರಾಜಕಾರಣಕ್ಕೆ ಬಲಿ ಪಶು ಇದೇ "ಕಾಸ್ಮೋ" ಸ್ವರೂಪದ ಅಮ್ಚೀ ಮುಂಬೈ!
ಆದರೆ , ತಾವೇ ಸೃಷ್ಟಿಸಿದ ಇತಿಹಾಸದಿಂದಲೂ ಪಾಠ ಕಲಿಯದ ಈ "ಶಿವ ಸೇನೆ -ನವ ನಿರ್ಮಾಣ ಸೇನೆ" ಯ ಮಂದಿ, ಮತ್ತೆ ಅದೇ ಚಾಳಿಗಿಳಿದು ಭಾರತದ ಮಾದರಿ ನಗರದ ಅಂದಗೆಡಿಸಲು ಹೊರಟಿದ್ದಾರೆ. , ಪ್ರಾಂತವಾದದ ಚಳವಳಿಯಿಂದ ಹುಟ್ಟುವಡೆದು , ಕೋಮುವಾದದ ಪಂಚಾಂಗದಲ್ಲಿ ತಮ್ಮನ್ನು ಪ್ರತಿಷ್ಟಾಪಿಸಿಕೊಂಡು, ಈ "ಮುದ್ದಾ"ಗಳು ಕಾಲದ ಅ ವಾಹಿನಿಯಲ್ಲಿ ತರಗೆಲೆಗಳಾಗಿ ಬಿದ್ದು ಹೋದಾಗ , ಮತ್ತೆ "ಪ್ರಾಂತ ದ್ವೇಷ" ದ ತಳಹದಿಯಲ್ಲಿ ಎದ್ದು ನಿಲ್ಲ ಹೊರಟಿರುವುದು ಅದೇ ಇತಿಹಾಸದ ಅತಿ ದೊಡ್ಡ ವ್ಯಂಗ್ಯ!

***
ಇಷ್ಟಕ್ಕೂ, ಮುಂಬಯಿ ಯಾರದ್ದು ..?
ಇದು ಪ್ರಶ್ನೆ. ಮುಂಬಯಿ, . ಮುಂಬಯಿಯಲ್ಲಿ ಬದುಕು ನಡೆಸುವ , ಮುಂಬಯಿ ಸಲಹಿದ, ಮುಂಬಯಿಯನ್ನು ಸಲಹುವ ಎಲ್ಲ ಮುಂಬಯಿಗರದ್ದು ..ಇದು ಉತ್ತರ!
*******
ಹೆಸರೇ ಹೇಳುವಂತೆ ಮುಂಬಯಿ ಎಂಬ ಈ ಮಹಾ ಮಾಯೆ ಯೊಳಗೂ ಒಬ್ಬ "ಆಯಿ" ಇದ್ದಾಳೆ...ಬಿದ್ದವರ ಎತ್ತಿ ಸಲಹುವ, "ಕೆಟ್ಟು, ಊರು ಬಿಟ್ಟು" ಬಂದವರ ಎತ್ತಿ ತಳ್ಕೈಸುವ ಈ "ಆಯಿ"ಯನ್ನು ನಮ್ಮದು ಮತ್ತು "ನಮ್ಮದು ಮಾತ್ರಎಂದು " ಹೊಲಬು ಗೆಡಿಸುವವರ ವಿರುದ್ದವೇ ಆಂದೋಲನವಾಗಬೇಕು...
ಪೊರೆವ ಆಯಿಯ ಹೊಟ್ಟೆ ತಣ್ಣಗಿರುವಂತೆ ನೋಡಿಕೊಳ್ಳಬೇಕು..
ಅಮ್ಚೀ ಮುಂಬಯಿ" ಯ ಹೆಮ್ಮೆಯ ಸಚಿನ್ ತೆಂಡೂಲ್ಕರ್ ನಂತಹಾ ಕ್ರಿಕೆಟ್ಟಿನ ದೇವತೆ, ಆಶಾ ಭೋಂಸ್ಲೆಯಂತಾ ಸಂಗೀತ ಸಾಮ್ರಾಜ್ಞಿ ಯವರಿಂದ ಈಗಾಗಲೇ ಇಂತಾ ಧ್ವನಿ ಬಂದಿದೆ..ಇವು ಒಂದೆರಡಾಗದೆ ನೂರಾಗಬೇಕು...ನೂರು ಸಾವಿರವಾಗಬೇಕು.
***
ಶ್ರಮ ಸಂಸ್ಕ್ರುತಿಯ ಪ್ರತೀಕ...

ಬದುಕನ್ನರಸಿ ವಲಸೆ ಬಂದ ಕನ್ನಡಿಗ , ವಿಶೇಷವಾಗಿ ದಕ್ಷಿಣೋತ್ತರ ಕನ್ನಡ ಜಿಲ್ಲೆಯ ಕರಾವಳಿಯಿಂದ ಬಂದ ಕನ್ನಡಿಗ ಮಹಾರಾಷ್ಟ್ರದ "ಕಣ್ಣು"..ದೇಶದ ವಾಣಿಜ್ಯದ ಎದೆಬಡಿತವೇ ಆಗಿರುವ ಮುಂಬಯಿಯ ಮಣ್ಣಲ್ಲಿ ಹುಲುಸಾದೊಂದು ಬೆಳೆ ತೆಗೆದಿದ್ದಾನೆ. ಕರಾವಳಿಯ ಮಣ್ಣಲ್ಲಿ ಬೇಸಾಯವಿದ್ದಂತೆ, ಇಲ್ಲಿ ಹೊಟೇಲು ಉದ್ಯಮವೇ ಅವನ " ಗದ್ದೆ' ಯಾಯಿತು. ಪರಿಶ್ರಮವನ್ನೇ ಬಂಡವಾಳವಾಗಿಟ್ಟು, ಬೆವರಿನ ಬೀಜ ಬಿತ್ತಿ, ಹೋರಾಟ, ಛಲ ಮತ್ತು ಅನುಭವಗಳ ನೀರೆರೆದು ಭರ್ಜರಿ ಫಸಲನ್ನೇ ತೆಗೆದು, ತಾನು ತಲೆ ಎತ್ತಿ ನಿಂತು, ದುಡಿಮೆ ಗೆ ಸಾಥಿ ಯಾದ ನೌಕರ, ಸೇರಿಕೊಂಡ ಪಾಲುದಾರ, ಹೀಗೆ ಎಲ್ಲ ರನ್ನೂ ಏಕಕಾಲದಲ್ಲಿ ಒಟ್ಟೊಟ್ಟಿಗೇ ಪೊರೆದ ಉದ್ಯಮವಿದು.
ಪರಊರಿನ ಮಣ್ಣಲ್ಲಿ ತೋರಿದ ಸಾಹಸಕ್ಕೆ ಒಲಿದು ಬಂದ ಸಿರಿ, ದಾನಧರ್ಮಾ-ಗಳ ಮೂಲಕ, ಅರಸಿ ಬಂದ ಕೀರ್ತಿ ಈ ಎಲ್ಲವೂ ಮರಾಠಿ ಮಣ್ಣಲ್ಲಿ ಕನ್ನಡಿಗನ ವರ್ಚಸ್ಸು , ಸ್ಥಾನಮಾನವನ್ನ್ನು ಮೇಲ್ಮಟ್ಟದಲ್ಲಿರಿಸಿದೆ. ಇದೇ ಶಹರಕ್ಕೆ ಬಂದ ಇತರೆಲ್ಲರಿಗಿಂತಲೂ ಮುಂಚೂಣಿಯಲ್ಲೇ ಇರಿಸಿದೆ.

ಒಂದಷ್ಟು ಹಣದ ಬೆಂಬಲವಿದ್ದ ಮಾತ್ರಕ್ಕೇ, ಮುಂಬಯಿಯಂತಾ ಶಹರದಲ್ಲ್ಲಿ ಹೊಟೇಲು ಮಾಲಕನಾಗುವುದು ಕಷ್ಟದ ಮಾತು. ಹೊಟೇಲು ಉದ್ದಿಮೆಗಿಳಿಯ ಹೊರಟವನಿಗೆ ಇಡೀ ಉದ್ಯಮ ಪೂರ್ತಿ ಜ್ಞಾನವಿರಬೇಕಾಗುತ್ತದೆ. ಆರಂಭಿಕ ಬಂಡವಾಳವೇನೋ ಬೇಕು, ಅದಕ್ಕಿಂತಲೂ ಮುಖ್ಯವಾಗಿ, ವೈವಿಧ್ಯಮಯ ರುಚಿಯ ಗ್ರಾಹಕರ ಮನಗೆಲ್ಲಲು ಬಹುತೇಕ ಎಲ್ಲ ತಿಂಡಿ ತಿನಿಸುಗಳ ತಯಾರಿ, ಪರಿಶುದ್ದತೆ, ಮತ್ತು ಶುಚಿತ್ವದ ಅರಿವಿರಬೇಕು. ಗ್ರಾಹಕ ಸಂಬಂಧ, ಸ್ಥಳೀಯರೊಡನೆ ಉತ್ತಮ ಹೊಂದಾಣಿಕೆ, ಒಡನಾಟ ಇರಬೇಕು. ಅಷ್ಟೇ ಮುಖ್ಯ ತನ್ನ ಉದ್ಯಮದ ಯಶಸ್ಸಿನ ಹಿಂದೆ ನಿಲ್ಲುವ ನೌಕರರು . ಅದರಲ್ಲೂ ಮುಖ್ಯವಾಗಿ, ವಿವಿಧ ಭಕ್ಷ್ಯಗಳನ್ನು ತಯಾರಿಸುವ ಬಹು ಡಿಮ್ಯಾಂಡಿನ "ಮಾಲ್ ವಾಲ" ರು, "ಕೊಲ್ಲಿವಾಲ" ಎಲ್ಲರನ್ನೂ ಸಂಭಾಳಿಸಬೇಕು. ಧಣಿ - ಸಂಬಂಧದ ವ್ಯಾಖ್ಯೆ ತೆಳುವಾಗಿ ಹೊಂದಾಣಿಕೆಯೇ ಜೀವಾಳವಾಗಿರುವ ಈ ದಿನಗಳಲ್ಲಿ , ನೌಕರರರನ್ನು, ಜೊತೆಯಾಗಿ ಪ್ರೀತಿ ವಿಶ್ವಾಸದಿಂದಲೇ ಒಯ್ಯಬೇಕು. ಒಟ್ಟಾರೆಯಾಗಿ ಹೊಟೇಲು ಉದ್ಯಮಿಯೊಬ್ಬ , ಉದ್ಯಮದ ಒಳಹೊರಗನ್ನು ಬಲ್ಲ, ಪರಿಶ್ರಮಿ, ವ್ಯವಹಾರ ಕುಶಲಿಗ ಮತ್ತು ಅಪಾರ ನಾಯಕತ್ವ ಹಾಗೆಯೇ ಉದ್ಯಮಕ್ಕೆ ಹಲವು ವಿಧಗಳಲ್ಲಿ ಎದುರಾಗುವ ಸಮಸ್ಯೆಗಳನ್ನು ಎದುರಿಸಿ ಬದುಕುವ ಸಾಹಸಿಯೂ ಆಗಿರಬೇಕು.

ಇನ್ನು ಮಂಬಯಿಯ ಸಾಮಾಜಿಕ - ಸಾಂಸ್ಕೃತಿಕ ಹೆಚ್ಚುಗಾರಿಕೆಯಾದರೂ ಅಷ್ಟೇ ..ಬೆರಳೆಣಿಕೆಯ ಮಂದಿಯನ್ನು ಬಿಟ್ಟ ಎಲ್ಲ ರಂಗಗಳಲ್ಲಿ ಮೂಡಿ ಬಂದ , ರಾಜ್ಯಕ್ಕೆ ಆ ಮೂಲಕ ದೇಶಕ್ಕೆ ಕೋಡು ಮೂಡಿಸಿದವರು ಅನ್ಯ ರಾಜ್ಯಗಳವರೇ!
ಕಲಾವಿದ ಕೆ. ಕೆ. ಹೆಬ್ಬಾರ್, ಮಹಾನ್ ಪತ್ರ ಕರ್ತ ಎಂವಿ ಕಾಮತ್, ಮಕ್ಕಳ ಲೋಕದ ಕಥಾಗುಗುಚ್ಚ ಅಂಕಲ್ ಪೈ, ಕ್ರಿಕೆಟಿಗ ರವಿ ಶಾಸ್ತ್ರಿ. ರಾಜಕಾರಣದ ಹಿರಿಯ ಜಾರ್ಜ್ ಫೆರ್ನಾಂಡೀಸ್, ಸಿನಿಮಾ ಕ್ಷೇತ್ರದ ಸಾಟಿ ಇಲ್ಲದ ಪ್ರತಿಭೆ ಮೆರೆದ ಗುರುದತ್ ಇವರು ಮರಾಠಿ ಮಣ್ಣಿಗೆ ರಾಷ್ಟ್ರ ಮಟ್ಟದ ಖ್ಯಾತಿ ತಂದವರು.

ಕನ್ನಡಕ್ಕೆ ವರವಾಗಿ ಒಲಿದ ಮುಂಬೈ.....

ಕನ್ನಡದ ಮಟ್ಟಿಗಾದರೂ ಮುಂಬಯಿಯಲ್ಲಿ ದೊರೆತ ಫಸಲು ಸಾಮಾನ್ಯವಾದುದಲ್ಲ. ಕನ್ನಡ ಸಾಹಿತ್ಯ ಲೋಕದ ಮೇರು ಕಥೆಗಾರ, "ಶಿಕಾರಿ" ಯ ಯಶವಂತ ಚಿತ್ತಾಲ, "ಬಂಡಾಯ" ದ ಬಲ್ಲ್ಲಾಳ, ಹೊಸ ತಲೆಮಾರಿನ ಮುಂಚೂಣಿಯಲ್ಲಿ ನಿಲ್ಲುವ ಜಯಂತ್ ಕಾಯ್ಕಿಣಿ, ಬಿ ಎ. ಸನದಿ, ಕಲಾವಿದರಾದ ದಿವಾಕರ್ ಶೆಟ್ಟಿ , ಸುದರ್ಶನ್ ಶೆಟ್ಟಿ, ಬಾಲಿವುಡ್ ನ ಯಜ್ಞೆಶ್ ಶೆಟ್ಟಿ, ಖ್ಯಾತಿವೆತ್ತ ರಂಗ ಕರ್ಮಿ ಸದಾನಂದ ಸುವರ್ಣ..ಈ ಎಲ್ಲರ ಪ್ರತಿಭೆಯ ಮೊಗ್ಗು ಚಿಗುರಿ ಹೂವಾದದ್ದು ಈ ಮುಂಬಯಿ ನೆಲದಲ್ಲಿ.

ಬ್ಯಾಂಕಿಂಗ್ ಕ್ಷೇತ್ರಕ್ಕೆ "ಸಹಕಾರ" ದ ಭಾಷ್ಯ ಬರೆದ ಶಾಮರಾಯ ವಿಠಲ್ .ನ್ಯಾಚುರಲ್ ಐಸ್ ಕ್ರೀಮಿನ ಕಾಮತರು, ಚಿತ್ರ ನಿರ್ಮಾಪಕ , ಉದ್ಯಮಿ ಮನಮೋಹನ್ ಶೆಟ್ಟಿ, ಆಲ್ ಕಾರ್ಗೋ ಓಬಲ್ ಶಶಿ ಕಿರಣ್ ಶೆಟ್ಟಿ, ಇವರೆಲ್ಲ ತಮ್ಮ ನೆಲೆ - ಬೆಲೆ ಕಂಡುಕೊಂಡದ್ದ್ದು ಇದೇ ಮುಂಬಯಿಯಲ್ಲಿ! ಖ್ಯಾತ ಪತ್ರಕರ್ತ ಸಂತೋಷಕುಮಾರ ಗುಲ್ವಾಡಿ, ಪ್ರಸಿದ್ದ ಛಾಯಾಗ್ರಾಹಕ, ಶಿವರಂಜನ್ ಗುಲ್ವಾಡಿ ತಮ್ಮ ಪ್ರತಿಭೆಯ ಪರದೆ ಸರಿಸಿದ್ದು ಇಲ್ಲಿಂದಲೇ.
ಮೊನ್ನೆ ಮೊನ್ನೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದ ಸಿನಿಮಟೋಗ್ರಾಫರ್ ವಿಕೆ ಮೂರ್ತಿ ಎಲ್ಲರೂ ಇಲ್ಲಿಯವರೇ.

ಕನ್ನಡದ "ಇನ್ನೊಂದು ನಾಡು". . .

ಹಾಗೆ ನೋಡಿದರೆ, ಕಳೆದೊಂದೂವರೆ ಶತಮಾನದಲ್ಲಿ ಕನ್ನಡಕ್ಕೆ ಆರ್ಥಿಕ, ಸಾಮಾಜಿಕ ಸಾಮುದಾಯಿಕ ಏಳ್ಗೆ ಗೆ ವರದಾನವಾಗಿ ನಾಡು ಮುಂಬೈ ಎಂದರೂ ಅತಿಶಯೋಕ್ತಿಯಿಲ್ಲ. ಕನ್ನಡದ ಒಳನಾಡಿನಲ್ಲಿ ಶತಮಾನಗಳಿಂದ ಸಾಮಾಜಿಕ ಮೇಲು -ಕೀಳಿನ ಹಂದರದಲ್ಲಿ ಪ್ರಗತಿಯಿಂದ ವಂಚಿತವಾಗಿದ್ದ ಶೋಷಿತ ಸಮುದಾಯಗಳು ಅಭಿವೃದ್ದಿಯ ಬೆಳಕನ್ನು ಕಾಣುವಲ್ಲೂ ಮುಂಬಯಿ ಒಂದು ಬಲವಾದ ಹೇತು. ಹೀಗಾಗಿಯೇ ಇರಬೇಕು ಅಂತಾ ಸಮುದಾಯದಿಂದಲೇ ಇವತ್ತು ಖ್ಯಾತಿ ಪಡೆದ ಭಾರತ್ ಕೋಪರೇಟಿವ್ ಭ್ಯಾಂಕ್ -ಮೊಗವೀರ ಬ್ಯಾಂಕ್ ಹುಟ್ಟಿ ಉಚ್ರಾಯದಲ್ಲಿ ಸಾಗಿದೆ. ಕನ್ನಡದ ಮೊದಲ ನಾಟಕ ವೆಂದು ತಿಳಿಯಲಾಗುವ "ಇಗ್ಗ್ಗಪ್ಪ ಹೆಗ್ಗಡೆ ವಿವಾಹ ಪ್ರಸಂಗವು " ವನ್ನು ಕೊಟ್ಟ ಹೆಗ್ಗಳಿಕೆ ಮುಂಬಯಿಯದ್ದು !ಯುಗದಮಾನವ ಕಾರಂತರ ಬಹಳಷ್ಟು ಸಾಹಿತ್ಯ ಸೃಷ್ಟಿ --ಯಕ್ಷಗಾನದ ಬ್ಯಾಲೆಗೆ , ಕಾದಂಬರಿ ಕ್ಷೇತ್ರದ ದೈತ್ಯ ಬೈರಪ್ಪನವರ ಕೃತಿ ಸೃಷ್ಟಿಗೆ ಇದು ವೇದಿಕೆಯಾಗಿದೆ.

ಪಾರಸ್ ರೋಡಿನ "ಪಾನ್ ಬೀಡಿ" ವಾಲ..
ಪೆರ್ಮುದೆಯ ಅಡಿಕೆ ತೋಟಗಾರ..

ಮುಂಬಯಿಯ ಗ್ರಾಂಟ್ ರೋಡ್ ರೈಲ್ವೇ ನಿಲ್ದಾಣದ ಪಕ್ಕದಲ್ಲಿ ಡ್ರೀಮ್ ಲ್ಯಾಂಡ್ ಥಿಯೇಟರ್ . ಸಮೀಪದ ಪಾರಸ್ ರೋಡ್ ಬದಿಯ ಲ್ಲೊಂದು ಪಾನ್ ಬೀಡಿ ಶಾಪ್. ಅಳೆದು , ಎಳೆದು ನೋಡಿದರೂ ನಾಲ್ಕು ಫೀಟು - ಏಳು ಫೀಟು ಉದ್ದಗಲವನ್ನು ಮೀರದ ಈ ಶಾಪಿನ ಮಾಲಕ ಯೋಗೀಶ್ ಶೆಟ್ಟಿ ಮುಂಬಯಿ ಭಾಷೆಯಲ್ಲಿ "ಯೋಗೀ ಶೇಟ್" . ದಿನವೊಂದಕ್ಕೆ ಇಪ್ಪತ್ತು ಸಾವಿರಕ್ಕೆ ಮಿಕ್ಕಿದ ವ್ಯಾಪಾರವಿರುವ ಈ ಸಣ್ಣ ಪೆಟ್ಟಿಗೆಯಾಕಾರದ ಅಂಗಡಿಯ ಮಾಲಿಕ ಒಂದರ್ಥದಲ್ಲಿ ಶೇಟ್ ಹೌದು.ಬಾಡಿಗೆ ಕಳೆದು ತಿಂಗಳ ಎರಡು ಲಕ್ಷದ "ಕಮಾಯಿ" ಯಿಂದಾಗಿ, ಅವರು ತನ್ನ ಹುಟ್ಟೂರು ಪೆರ್ಮುದೆಯಲ್ಲಿ ಖಂಡಿಗಟ್ಲೆ ಅಡಿಕೆ ಬೆಳೆವ ತೋಟದ ಸೇಠ್!

ಚೋರ್ ಬಜಾರ್ ಎಂಬ ಮಾಯಾ ಬಜಾರ್!

ಮುಂಬಯಿಗೆ ಭೇಟಿ ಕೊಟ್ಟವರು, ಭೇಟಿ ಕೊಡದವರೂ , ಕೂಡಾ ನೋಡಬಯಸುವ ಒಂದು ಜಾಗ ಚೋರ್ ಬಜಾರ್...ಇಲ್ಲಿ ,ಏನುಂಟು ಏನಿಲ್ಲ ಹೇಳಿ? ಹೇಳಿ ಕೇಳಿ ಇದು ಚೋರ್ ಬಜಾರ್. ನಿಮ್ಮ ಮನೆ, ಅದರ ಒಳ ಶೃಂಗಾರ , ಹೂರಣ ---ಓರಣ ಹೆಚ್ಚಿಸುವ ಎಲ್ಲ ಡೆಕೊರೇಟಿವ್ ವಸ್ತುಗಳು, ಎಲ್ಲ ಹೊಸ -ಹಳೆಯ ವಸ್ತುಗಳ,ಬಿಡಿ ಭಾಗಗಳು , ವಿಶೇಷವಾಗಿ ಹಳೆಯ ಉಪಕರಣಗಳ , ಪ್ರಸ್ತುತ ಮಾರುಕಟ್ಟೆಯಲ್ಲಿ ದೊರೆಯದ ವಸ್ತು ದೊರಕುವುದೇ ಚೋರ್ ಬಜಾರಿನ ವಿಶೇಷತೆ. ಅದು ಬ್ರಿಟೀಷರ ಕಾಲದ ಹಾರ್ಮೋನಿಯಂ ನ ಕೀ ಬೋರ್ಡು ತಂತಿಗಳಿರಬಹುದು, ಗ್ರಾಮೋಫೋನ್ ನ ಪ್ಲೇಟುಗಳಿರಬಹುದು! ಹಾಗಂತ ಇದು ಕಂಪೆನಿಯ ಲೇಬಲ್ ಇದ್ದು ದೊರಕುವ ವಸ್ತುಗಳಲ್ಲ. ಎಲ್ಲ್ಲೋ , ಯಾರೋ ಹಾರಿಸಿದ - ಎಗರಿಸಿದ ಮಾಲು ಗಳೂ ಇರಬಹುದು. ಚೋರ್ ಬಜಾರ್ ನಲ್ಲಿ ಬಹಳಷ್ಟು "ಚೌಕಾಶಿ" ಮಾಡಿ, ಅತಿ "ಅಗ್ಗ"ಕ್ಕೆ ಖರೀದಿಸಿದ ಒಂದು ಚೆಂದದ ಬೆಳ್ಳಿಯ ಫೋಟೋ ಪ್ರೇಮ್ ನ್ನು ಒಬ್ಬರು ಹೆಂಡತಿಗೆ ತೋರಿಸಿ ಕೇಳಿದರು, ಹೇಗಿದೆ ಕಣೇ? "" ಅಬ್ಬಾ, ..ಎಲ್ಲ್ಲಿ ಸಿಕ್ತು ರೀ..ಎಷ್ಟು ವರ್ಷ ಆಯ್ತಲ್ಲಾ ನಮ್ಮ ಮದುವೆ ಫೋಟೋದ ಬೆಳ್ಳಿ ಫ್ರೇಮು ಕಳೆದು ಹೋಗಿ... ಮನೆಯಿಂದಲೇ ಕಳ್ಳರು ಕದ್ದೊಯ್ದರಲ್ಲಾ.. ಕಳ್ಳನೂ ಸಿಕ್ಕಿದ್ನೇನ್ರೀ..? ಅಂದಳಂತೆ ಹೆಂಡತಿ! ಇದು ಚೋರ್ ಬಜಾರ್ ಮಹಿಮೆ ! ಮುಂಬಯಿಯ ವಿಟಿ ಸಮೀಪ ಶಾಫಿ ಮಸ್ಜಿದ್ ಬಳಿ ಈ ಚೋರ್ ಬಜಾರ್ ಇದೆ. "ಹಳೆಯ ಸಾಮಾನುಗಳ ತಿಜೋರಿ" ಎಂದು ಕರೆಯಲ್ಪಡುವ ಈ ಬಜಾರಿಗೊಮ್ಮೆ ಭೇಟಿಕೊಡಲೇ ಬೇಕು, ನಿಮ್ಮ ಬ್ಯಾಗು , ಮೈ ಕೈಗಳ ಆಭರಣಗಳ ಮೇಲೆ "ನಿಗಾ" ಇರಿಸಿ !

ಯಕ್ಷಕಲಾವಿದರ 'ಮನಿ ಬ್ಯಾಂಕ್"..

ಈ ಮುಂಬಯಿ ಯಕ್ಷಗಾನ ಮೇಳಗಳ "ತಿರುಗಾಟ "ಕ್ಕೆ ಶತಮಾನೋತ್ತರ ಇತಿಹಾಸವಿದ್ದ್ದರೂ ನಮ್ಮ ಕರಾವಳಿಯ ಯಕ್ಷ ಕಲಾವಿದರ ಅರ್ಥಿಕ ಬದುಕು ತವರಲ್ಲಿ ಎಂದೂ ಸಮೃದ್ದಿಯನ್ನು ಕಂಡದ್ದಿಲ್ಲ. ಬೇಸಿಗೆ ಪೂರ್ತಿ ಊರು - ಹಳ್ಳಿ ಸುತ್ತಿ , ರಾತ್ರಿ ಪೂರ್ತಿ ಕುಣಿದ ಯಕ್ಷ ಕಲಾವಿದರ ನಿಜದ ದಣಿವಾರಿದ್ದು , ಆರೇಳು ದಶಕಗಳಿಂದ ಮುಂಬಯಿ ಕನ್ನಡಿಗನ ಅಕ್ಕರೆ - ಅಭಿಮಾನ , ಆದರ ದೊರೆತ ಮೇಲೆಯೇ.. ಮಳೆಗಾಲ ಪೂರ್ತಿ ಊರಿನ ಬಹುತೇಕ ಎಲ್ಲ ಮೇಳಗಳನ್ನು ಬರಮಾಡಿಕೊಂಡು, ಇಲ್ಲಿ ನ ಹವಾ ನಿಯಂತ್ರಿತ ಹಾಲುಗಳಲ್ಲಿ ಪ್ರದರ್ಶನ ಏರ್ಪಡಿಸಿದ ಮುಂಬಯಿ ಕನ್ನಡಿಗರು, ನಿಜಕ್ಕೂ ಯಕ್ಷಗಾನದ ಉಳಿವಿಗೆ, ಬೆಳೆವಿಗೆ , ಮುಖ್ಯವಾಗಿ ಕಲಾವಿದರ ಉಳಿವಿಗೆ ಕಾರಣ ಕರ್ತರು. ಪ್ರದರ್ಶನದ ವೀಳ್ಯ ಕೊಟ್ಟು , ಕಲಾವಿದ ಪ್ರತಿಭೆ ಗುರುತಿಸಿ ,ಸನ್ಮಾನದ ಶಾಲುತೊಡಿಸಿ, ಕೈಗೆ ಚಿನ್ನದುಂಗುರ ಕೊಡಿಸಿ ತಾವೂ ಧನ್ಯತಾಭಾವ ಪಡೆದುಕೊಂಡ , ಕಲಾವಿದರ ಮಕ್ಕಳ ಮದುವೆ ಮುಂಜಿಗೆ ಲಕ್ಷಗಟ್ಟಳೆ ನೀಡಿದ ಹೊಟೇಲು ಉದ್ಯಮಿಗಳೆಷ್ಟೋ ...ಎಲ್ಲ ಸಂಶೋಧನೆಗೆ ಆಹಾರವಾಗಬಲ್ಲ ಸಂಗತಿಗಳು. ಸಂಶೋಧನಾತ್ಮಕವಾಗಿಯೂ ಯಕ್ಷಗಾನದ ಕುರಿತಾಗಿ ಘನ ಸಮ್ಮೇಳನಗಳು, ವಿಚಾರ ಮಂಥನಗಳು , ಇಲ್ಲಿ ನಿರಂತರ ನಡೆಯುತ್ತಲೇ ಇವೆ.ಪ್ರಸಂಗ, ಪೀಠಿಕೆ ಸಾಹಿತ್ಯಗಳು ಬೆಳಕು ಕಾಣುತ್ತಲೇ ಇವೆ. ಕನ್ನಡ ಸ್ನಾತಕೋತ್ತ್ತರ ಶಿಕ್ಷಣಕ್ಕೆ ಸಂಬಂ-ಸಿ ಅರ್ಧ ಶತಮಾನಕ್ಕೂ ಮಿಕ್ಕಿದ ಇತಿಹಾಸ ಹೊಂದಿರುವ ಮುಂಬಯಿ ವಿಶ್ವ ವಿದ್ಯಾಲಯವೂ ಕನ್ನಡದ ಕೈಂಕರ್ಯದಲ್ಲಿ ಹಿಂದೆ ಬಿದ್ದಿಲ್ಲ. ಕನ್ನಡ ಚಿಂತನ , ಸಂಶೋಧನ, ಪುಸ್ತಕ ಪ್ರಕಾಶನ ಇಲ್ಲಿ ನಡೆದೇ ಇದೆ.

ಬದಲಾಗುತ್ತಿದೆ ಧಾರಾವಿ ...!

ಎಲ್ಲೆಂದರಲ್ಲಿ ಹರಿವ ಕೊಳಚೆ ... ಮಾಂಸಕ್ಕಾಗಿ ಕಡಿದ ಅಡು, ದನಗಳ ಕಿವಿ , ಮೂಗು , ಅವಯವಗಳ ಹೊತ್ತು ರಸ್ತೆಯಲ್ಲೇ ಸಾಗುವ ರಾಡಿ ಕರಿ ನೀರು...ಮುಖಕ್ಕೆ ರಾಚುವ ಧೂಳು... ಕಣ್ಣಿಗೆ ಕವಿಯುವ ಹೊಗೆ "ರಸ್ತೆ "ಎಂಬ ತೋಡುಗಳ ಬದಿಯಲ್ಲೇ ಎಮ್ಮೆ ಯ ಚರ್ಬಿಯನ್ನು ಕಬ್ಬಿಣದ ಸಲಿಕೆಗೆ ಸುತ್ತಿ ಬೆಂಕಿಯಲ್ಲಿ ಕಾಯಿಸಿ ಮಾರುವ ತಮಿಳು ಹುಡುಗರು...ಅವರ ಮೈ ಮುತ್ತುವ ಸೊಳ್ಳೆಗಳ ಸೈನ್ಯ...ಮೈಗೆ ಚೊಣ್ಣದ ಹಂಗೂ ಇಲ್ಲದೆ ಓಡಾಡುವ ಗುಡಿಸಲ ಮಕ್ಕಳು....ಹೀಗೆ ಧಾರಾವಿಯೊಳಗೊಂದು ಮನೆಯನು ಮಾಡಿ ಕೊಳಚೆಗಂಜಿದೊಡೆಂತಯ್ಯ...ಇದು ದಶಕದ ಹಿಂದಿನ ಮಾತು. ಹೌದು, ಏಶ್ಯಾದಲ್ಲೇ ಅತಿ ದೊಡ್ಡ ಕೊಳೆಗೇರಿ ಎಂಬ ಕುಖ್ಯಾತಿ ಪಡೆದಿದ್ದ ಮುಂಬಯಿಯ ಕರುಳ ಬಳ್ಳಿ ಧಾರಾವಿ ಬದಲಾಗುತ್ತಿದೆ. ಪ್ರಧಾನಿಯಾಗಿದ್ದ ಕಾಲಕ್ಕೆ ರಾಜೀವ್ ಗಾಂ- ಘೋಷಿಸಿದ್ದ ಎಂಟುನೂರು ಕೋಟಿ ಗಳ ಧಾರಾವಿ ಡೆವೆಲೊಪ್ ಮೆಂಟ್ ಪ್ಲಾನ್ ಮೂಲೆ ಸೇರಿದರೂ , ಇದೀಗ ಸ್ಥಳೀಯ ಸರಕಾರ ಮತ್ತೆ ಹೊಸದಾಗಿ ಧಾರಾವಿಯ ಮುಖ ಬದಲಿಸುವ ಯೋಜನೆಯಲ್ಲಿ ಕೆಲಸ ಮುಂದುವರಿಸಿದೆ. ಸಯನ್ , ಮಾಟುಂಗಾ ಮಾಹಿಮ್ ಮತ್ತು ಬಾಂದ್ರಾ ಎಂಬ ಮುಂಬಯಿಯ ಎದೆಬಡಿತವಿರುವ ನಾಲ್ಕು ನಗರ ಸಮುಚ್ಚಯದ ನಡುವೆ ಹಲವು ವರ್ಷ ತಣ್ಣಗೆ ಕೊಳಚೆಯಾಗಿ ಮಲಗಿದ ಧಾರಾವಿ ಯತ್ತ ಹೊಸ ಬೆಳಕು ಹರಿದಿದೆ. ಈಗ ಬಿಲ್ಡರುಗಳ ಪಡೆ ಅತ್ತ ಸಾಗಿದೆ. ಬೆಂಕಿ ಪೊಟ್ಟಣದಾಕಾರದ ಕೊಳಚೆಗಳೂ ಹತ್ತು ಲಕ್ಷಕ್ಕೆ ಕಮ್ಮಿ ಇಲ್ಲದಂತೆ ಬಿಕರಿಯಾಗುತ್ತಿವೆ. ಒಮ್ಮೆ "ಬಿಲ್ಡಿಂಗ್" ಎದ್ದು ನಿಂತರೆ ಅವುಗಳ ಬೆಲೆ ಕೋಟಿಯ ಲೆಕ್ಕಕ್ಕೇರಿ ಬಿಡುತ್ತದೆ.

ಮುಂಬಯಿ ಕೇವಲ ಮರಾಠಿಗನಿಗಾದರೆ....

1930 -40 ರ ದಶಕದ ವರೆಗೂ ಭಾಕ್ರಿ , ಉಸಳ್ ಪಾವ್, ಮಿಸಳ್ ಪಾವ್, ಪೂರಣ್ ಪೋಳಿ ಗೆ ಸೀಮಿತವಾಗಿದ್ದ ಮುಂಬಯಿ ಹೊಟೇಲು ಉದ್ಯಮಕ್ಕೆ ಬಗೆ ಬಗೆಯ ದಕ್ಷಿಣ - ಉತ್ತರದ ಖಾದ್ಯ , ವೈವಿದ್ಯವಾದ ಖಾರ , ಸಿಹಿ ತಿಂಡಿ ತಿನ್ನಿಸುಗಳು,ದೋಸೆ, ಇಡ್ಳಿ, ಎಲ್ಲಕ್ಕೂ ಮಿಗಿಲಾದ ಸ್ವಚ್ಚ -ನಿರ್ಮಲವಾದ ಉಪಾಹಾರ ಪದ್ದತಿಯನ್ನು ಪರಿಚಯಿಸಿದವರೇ ಕರಾವಳಿಯ ಕನ್ನಡಿಗರು ! ಇವತ್ತು ಮಹಾರಾಷ್ಟ್ರದ ಬಹುತೇಕ ಮರಾಠಿ ಮಂದಿಯ ಆಹಾರ ಇದೇ ನಮ್ಮ ಹೊಟೇಲಿನ ಆಹಾರ ವೈವಿದ್ಯಗಳು.

ಇನ್ನು ಸರಕಾರದ ಬೊಕ್ಕಸ ನಿಂತಿರುವುದೇ ಈ ಹೊಟೇಲಿಗರು , ಬಾರು , ಫಾಸ್ಟ್ ಫುಡ್ ಮಾಲಕರು ಪಾವತಿಸುವ ವಿವಿಧ ರೀತಿಯ ಭಾರೀ ಮೊತ್ತದ ತೆರಿಗೆಯಲ್ಲಿ. ಲೈಸೆನ್ಸ್ ದರ ಹೆಚ್ಚಾಗುವ ಭೀತಿಯಲ್ಲಿ ತನ್ನನ್ನು ಭೇಟಿಯಾದ ಹೊಟೇಲಿಗರ ನಿಯೋಗಕ್ಕೆ ಅಂದಿನ ಮುಖ್ಯ ಮಂತ್ರಿ ಮನೋಹರ್ ಜೋಷಿಯವರೊಮ್ಮೆ, ಹೇಳೇ ಬಿಟ್ಟಿದ್ದರು, "ನೀವು ಹೆದರದೆ ವ್ಯಾಪಾರ ಮುಂದುವರಿಸಿ, ಹೊಟೇಲುಗಳು ಮುಚ್ಚಿದರೆ ನಾನೇ ಮುಖ್ಯಮಂತ್ರಿಯಾಗಿರುವುದು ಸಾಧ್ಯವಿಲ್ಲ, ಸಾಲದ ಹೊರೆಯಲ್ಲಿರುವ ರಾಜ್ಯದ ಬೊಕ್ಕಸಕ್ಕೆ ನೀವು ಕೊಡುವ ಮೂವತ್ತು ಸಾವಿರ ಕೋಟಿಗೂ ಮಿಕ್ಕಿದ ತೆರಿಗೆಯೇ ಆಧಾರ". ಮುಂಬಯಿಯಲ್ಲಿ ನಡೆಯುವ ಪ್ರತಿ ನೂರಕ್ಕೆ 98 ಹೊಟೇಲುಗಳೂ ಕನ್ನಡಿಗರದ್ದು ಅರ್ಥಾ ಕರಾವಳಿಯ ತುಳು ಕನ್ನಡಿಗರದ್ದು! ಪ್ರತಿ ಉಪನಗರಕ್ಕೆ ಆರರಿಂದ -ಏಳು ನೂರಕ್ಕೆ ಕಡಿಮೆ ಇಲ್ಲದ ಹೊಟೇಲುಗಳಿವೆ ಎಂದಾದರೆ, ಅಂತಾ ಉಪ ನಗರಗಳು, ಸಾವಿರಾರು ಹೊಟೇಲುಗಳು, ರೆಸ್ಟೋರೆಂಟುಗಳು ನಡೆಯುವ ಮುಖ್ಯ ಮುಂಬಯಿ ಪಟ್ಟಣ...ಅನ್ಯ ಭಾಷಿಕರು ಮುಂಬಯಿ ಬಿಡುವ ಮಾತಂಟಿರಲಿ, ಒಂದು ವಾರ ಕನ್ನಡಿಗರ ಹೊಟೇಲುಗಳು ಬಾಗಿಲು ಮುಚ್ಚಿಕೊಂಡರೂ ಮುಂಬಯಿ ಉಪವಾಸ ಮಲಗಬೇಕಾದೀತು!

***
ಮಹಾರಾಷ್ಟ್ರಕ್ಕೆ ಅಲ್ಲ, ಇಡಿಯ ರಾಷ್ಟ್ರದ ಬೊಕ್ಕಸಕ್ಕೆ ಗರಿಷ್ಟ ತೆರಿಗೆ ಸಂಗ್ರಹಿಸಿ ಕೊಡುವ ನಗರ ಮುಂಬಯಿ. ಉದ್ಯಮಗಳಿಗೆ ಮುಂಬಯಿ ಹೆಸರಾಗಿದ್ದರೂ ಅತಿ ಹೆಚ್ಚು ವ್ಯಾಪಾರ ವಹಿವಾಟು ತೆರಿಗೆ ಸಂಗ್ರಹವಾಗುವುದು ಲಕ್ಷೋಪಲಕ್ಷ ಸಂಖ್ಯೆಯ ಹೊಟೇಲುಗಳಿಂದ! ಒಂದೊಮ್ಮೆ , ಮುಂಬಯಿ ಕೇವಲ ಮರಾಠಿಗ ಮುಂಬಯಿಗನಿಗೆ ಮಾತ್ರ "ಅನ್ಯರು ಸಲ್ಲ" ಎಂದಾದರೆ ಉಳಿಯುವುದು ಬರಿದೆ ಸೊನ್ನೆ , ಅದು "ಎಕ್ಕ "ಎದ್ದು ಹೋದ ಇಸ್ಪೀಟೆಲೆಗಳಂತೆ!!
ಈಗ ಯೋಚಿಸಿ, ಮುಂಬಯಿ ಮರಾಠಿ ಮಾತಾಡುವ , ಮಹಾರಾಷ್ಟ್ರದಲ್ಲೇ ಜನಿಸಿದ ಪ್ರಜೆಗೆಂದಾದರೆ .. .
ಅದು,
ಚಿತ್ರ ಕಳಚಿ ಬಿದ್ದ್ದ ಚೌಕಟ್ಟು!!
*******

Tuesday, March 30, 2010

ಸಂತನೆಂಬವನೊಬ್ಬ , ಸಂತತ್ವದಿಂದಾದನೇ...

"ಯಾಕೋ ಗೊತ್ತಿಲ್ಲ, ನನಗೆ ಸಂತರ -ಸ್ವಾಮಿಗಳ ಮೇಲಿನ ನಂಬಿಕೆ -ವಿಶ್ವಾಸವೇ ಕಳೆದು ಹೋಯಿತು, ಭಾರತದಲ್ಲಿ ಇನ್ಯಾರೂ ಸಂತರ ಮೇಲೆ ವಿಶ್ವಾಸವಿಡಲಾರರು... ' ಗೆಳೆಯನೊಬ್ಬ ಹಲುಬುತ್ತಲೇ ಇದ್ದ. ಅವನ ಮಾತು ಹುಟ್ಟಿದ ಹಿನ್ನಲೆ, ವಿಶ್ವಾಸ ನಷ್ಟದ ಕಾರಣ ಗೊತ್ತಿತ್ತು...
***
ಸಂತತ್ವವದೇನು..? ಸಂತ ನೆಂಬವನಾರು ... ಕಾಮ ಕ್ರೋಧ ಗಳ ಗೆಲುವುದೆಂದರೇನು?... ಅವುಗಳನ್ನು ನಮ್ಮ 'ನಿಯಂತ್ರಣ'ದೊಳಿರಿಸುವುದು..ಹಾಗಂದರೇನು ..?


ಇನ್ನು,..ದೇಹದೊಳಗೇ ದೇಹವಾಗಿ ಹೋಗಿರುವ ಅವುಗಳನ್ನಷ್ಜ್ಟೇ 'ಇಲ್ಲ'ವಾಗಿಸುವಾಗ ಉಳಿದ 'ಭಾವ ' ಗಳೆಲ್ಲ ತಮ್ಮ ಯಥಾಗುಣದಲ್ಲೇ ಉಳಿದು ಮುಂದುವರಿಯುವವೇ...? ಇಷ್ಟಕ್ಕೂ ನಮ್ಮ 'ವೈರಿ'ಗಳೆಂದು ಪರಿಗಣಿಸಿದ ಯಾವುದೇ ಆದರೂ 'ನಮ್ಮನ್ನು ಬಿಟ್ಟು ಹೋದ್ದದ್ದು' ಇದೆಯೇ? ವೈರವಿದ್ದಷ್ಜ್ಟೂ ದಿನ ಅವು ನಮ್ಮೊಳಗೆ , ನಮ್ಮ ಅಣು ಅಣುವಿನೊಳಗೆ ಹಾಸು -ಹೊಕ್ಕು!
ಬಾಹ್ಯ ಲೋಕಕ್ಕೆ , 'ನಾನು ದೀಕ್ಷೆ ಪಡೆದೆ...ಮುಂದೆ ಸ್ವಾಮಿಯಾಗಿರುವೆ.. ' ಎಂಬಿತ್ಯಾದಿ ಹೇಳಿಕೆ, ಪ್ರಕಟಣೆಯಷ್ಟೇ -ದೇಹದ 'ಒಳಗಣ ಪ್ರಕೃತಿ' ಯೊಳಗೂ ಬದಲಾವಣೆಗಳ ತರುವುದೇ ? ಅಥವಾ ಸಂತತ್ವ- ಸ್ವಾಮಿತ್ವದ ಘೋಷಣೆಯೊಂದಿಗೆ 'ಸಂತನೆಂದುಕೊಂಡವನು' ತಾನು ಅಂತಾ 'ಒಳಗಣ ಪ್ರಕೃತಿ'ಯ ಮೀರಿದೆನೆಂದುಕೊಳ್ಳುವುದೇ?

ಹೀಗೆ, ಮೀರಿ ನಿಂತ ಹಂತದೊಳಗೂ ಮತ್ತೆ ಲೌಕಿಕದೊಳಗಣ ವ್ಯಾಪಾರದೊಳಗಿಣುಕುವ 'ಕಿಂಡಿ' ಯನ್ನೊಂದು ಮಾತ್ರ ತೆರೆದು ಇರಿಸಿಕೊಳ್ಳಲು ಸಾಧ್ಯವಾಗುತ್ತದೆಯೇ, ಸ್ವಾಮಿಗೆ , ಸಂತನಿಗೆ ?ಹೋಗಲಿ, ಇದ್ಯಾವುದೂ ಅಲ್ಲ, ಅಲೌಖಿಕವನ್ನು ಅರಗಿಸಿಕೊಳ್ಳುವುದು, ಪಾರಮಾರ್ಥದ 'ಜಿಜ್ಞಾಸು'ವಾಗಿ ಅಧ್ಯಾತ್ಮವನ್ನು ಉಸಿರಾಡುವುದು ....ಸಂತತ್ವವೇ ?ಹಾಗೊಮ್ಮೆ ಅದರೂ, ಜನರ ನಡುವೆ, ಸಂಸಾರದೊಳಿದ್ದೂ , ಇದನ್ನೆಲ್ಲಾ ಮಾಡುವ ಜೀವಗಳಿಲ್ಲವೇ...?

ಹೊರಗಿನ ಸಂತತ್ವದಿಂದೇನು ..ನಮ್ಮ ನಮ್ಮೊಳಗಿನ ಸಂತನ ಕಾಣುವ ಮನವಾದರೆ...

ಒಂದೊಮ್ಮೆ , ನೌಕರಿ ಮಾಡುತ್ತಿದ್ದ ಕಂಪೆನಿಯಲ್ಲಿ ಸಹೋದ್ಯೋಗಿಯೊಬ್ಬಳು, ನಿತ್ಯ ಮನೆಯಿಂದ ಎರಡು ಬುತ್ತಿ ಕಟ್ಟಿ ತರುತ್ತಿದ್ದಳು...ಒಂದು ಅವಳಿಗೇ, ಮಧ್ಯಾಹ್ನದ ಊಟಕ್ಕೆ. ಇನ್ನೊಂದು ಕೆಲಸ ಹಿಡಿಯಲು ತಾನು ಹೋಗುವ ರೈಲು ನಿಲ್ದಾಣದ ಮೂಲೆಯಲಿ ಕಣ್ಣಿಲ್ಲದೆ , ಕುಟುಂಬ ಸಂಸಾರದಿಂದ ಪರಿತ್ಯಕ್ತಳಾಗಿ ಬಿದ್ದ ವೃದ್ದೆಗೆ....

. . . ಅಚ್ಚರಿ ಎಂದರೆ , ಅವಳಿಗೂ ಒಬ್ಬ ಸಂಗಾತಿ.ಅದೆಷ್ಟೋ ಸಂಜೆಗಳಲ್ಲಿ ಅವರಿಬ್ಬರೂ ಜೊತೆಯಾಗಿ, ಅದೇ ರೈಲು ನಿಲ್ದಾಣದ ಬೆಂಚಿನ ಮೇಲೆ ಮಾತಿನ ಮಂಟಪ ಕಟ್ಟಿ ಜಗದ ಪರಿವೆ ಇಲ್ಲದೆ ಹಗುರಾದದ್ದನ್ನು ಕಂಡು ' ಇದೇ ನೋಡು ಬದುಕಿನ ಮಾಯೆ' ಎಂದು ಒಳ ಮನಸ್ಸು ಹೇಳುತ್ತಿತ್ತು.! ಅವಳಿಗಾಗಿಯೂ ತರುವ ಬುತ್ತಿ, ಮತ್ತು ಆ ಒಬ್ಬ ಸಂಗಾತಿ, ಆಕೆ ನನ್ನ -ನಿಮ್ಮಂತೇ , ಹಸಿವು - ನೀರಡಿಕೆ ಇರುವ, ದೇಹ ಸಹಜ ಬಯಕೆಗಳ ಗೆಲ್ಲಲಾರದ, ಅಥವಾ ಗೆಲ್ಲಬೇಕೆಂಬ ಹಟವಿಲ್ಲದ (ಯಾಕಾಗಿ ಗೆಲ್ಲಬೇಕು?) ಮನುಷ್ಯ ಮಾತ್ರಳು.. ಎಂಬುದನ್ನು ತಿಳಿಸುತಿತ್ತು. . ಹೀಗೆ ಇದು ಬಹುಕಾಲ ನಡೆಯುತ್ತಿತ್ತು...ವೃದ್ದೆ ತೀರಿಕೊಂಡಾದ ಬಳಿಕ ಆಕೆಗೆ ಇನ್ಯಾರೋ ಅಶಕ್ತ ಜೀವ ಕಂಡಿತು.. ತನ್ನೊಳಗಿನ 'ಸಂತ' ನ ಕಾಯಕ ಮುಂದುವರಿಸಲು.... ಆದರೆ ತನ್ನಂತೆ ದುಡಿಯಲಾಗದ ಅಶಕ್ತೆಗಾಗಿ ಕಟ್ಟಿ ತರುತ್ತಿದ್ದ ಬುತ್ತಿ ಆಕೆಯೊಳಗಿನ ಶುದ್ದ 'ಜೀವ ಪ್ರೇಮ' ವಲ್ಲದೆ , ಸಂತತ್ವವಲ್ಲದೆ ಮತ್ತೇನು ?

ನೆನೆದಾಗಲೆಲ್ಲ ನನ್ನ ಕಣ್ಣ ಪಾಪೆಯೊಳಗೆ ನೀರು ತರಿಸುವ, ಪಾನಿ ವಾಲ ರಾಜೂಭಾಯಿ ಇವತ್ತಿಗೂ ಮುಂಬಯಿ ಲೋಕಲ್ ರೈಲಿನ ತನ್ನ ನಿತ್ಯ ಯಾನದ ನಡುವೆ ಐವತ್ತಕ್ಕೂ ಹೆಚ್ಚು ಲೀಟರ್ ನೀರು ಹೊತ್ತು ಸಾಗುತ್ತಿದ್ದಾನೆ...ಅರುವತ್ತು ದಾಟಿ ಸಾಗಿದ ವಯಸ್ಸಿನಲ್ಲಿ ಬೋಗಿಯಿಂದ ಬೋಗಿಗೆ ದಾಟುತ್ತಾ ಮುಖದ ತುಂಬ ಮಲ್ಲಿಗೆ ನಗು ಬೀರುತ್ತಾ ಬಸವಳಿದ ಪಯಣಿಕರ ಬಳಿ ಸಾಗಿ ನೀರ ಬಾಟಲು ನೀಡಿ ಮನದ ಬೇಗೆಯ, ದೇಹದ ಧಗೆಯ ಕ್ಷಣ ಹೊತ್ತಿಗಾದರೂ ಮರೆವಂತೆ ಮಾಡುವ ಈತನ ಸಂತನೆನ್ನಲು ನನಗೆ ಹಿಂಜರಿಕೆಯೇ ...?
***
ವಾತ್ಸಲ್ಯ ಧಾರೆಯ ಸುರಿಸಿ ಬೆಳೆಸಿ, ದುಡಿದು ಬೆವರಿಳಿಸಿ ಪೊರೆದ ಅವ್ವ, ಕೈ - ಕಾಲು ಮಾತು ಕೇಳುವ ತನಕವೂ ದುಡಿದು ಸಜ್ಜನಿಕೆಯಿಂದ ಬಾಳಿ, ತಾನು ಬದುಕಿದ ರೀತಿಯಲ್ಲೇ ನೀತಿಯ 'ಪಠ್ಯ' ವಾಗುವ ಒಬ್ಬ ಅಪ್ಪ , ಯಾವ ಆಧುನಿಕ ತರಬೇತಿಗಳ ನೆರವಿಲ್ಲದೆಯೂ ಬರೆವ 'ಕೈ' , ಆಡುವ 'ಬಾಯಿ' ಗೆ ಚೈತನ್ಯ ಬರುವಂತಾ ರೀತಿಯಲಿ 'ಆ ಆ , ಈ .. ' ಕಲಿಸಿ ನಿವೃತ್ತನಾದೊಬ್ಬ ಅಧ್ಯಾಪಕ , ...ಇವರಷ್ಟೇ ಸಾಕು, ಸದಾ ನನ್ನೊಳಗಿನ 'ಸಂತ' ನ ಜಾಗೃತಿ ಯಲ್ಲಿಡಲು ...ಹೊರಗಿನ ನೂರು ಸಾವಿರ ಸ್ವಾಮಿಗಳ ಹಂಗೇಕೆ...?
ಸುರಿವ ಬಡತನದಿಂದ , ಕಲಿವ ವಯಸ್ಸು ಮೀರಿದ ಮಗನ ಕೈ ಹಿಡಿದು ಬಂದ ಬಡಪಾಯಿ ಅಪ್ಪನಿಗಾಗಿ 'ನಿಯಮಗಳಲ್ಲೇನೋ ಹೊಂದಾಣಿಕೆ ಮಾಡಿ' ಶಾಲೆ ಕಲಿಯಲವಕಾಶ ಮಾಡಿಕೊಟ್ಟ ಒಬ್ಬ ಅಧ್ಯಾಪಕನ ಕರುಣೆಯ ಕಣ್ಣುಗಳಲ್ಲೊಂದು ಸ೦ತತ್ವವಿಲ್ಲವೇ ...ಅದ ಕಾಣುವ ಕಣ್ಣು ಬೇಕು...!


ನನ್ನೊಳಗೆ ನಾನು ಕಾಣಲಾಗದ ಸಂತನನ್ನು ಇನ್ಯಾರೋ 'ಸಂತನೆಂದವನಲ್ಲಿ' ಕಾಣಹೊರಟ ಕಾರಣ,. . ನಾನು ಇತರರಿಗೆ ತೋರಲಾಗದ ವಿವೇಕವ ಅವನಿಂದ ತೋರಿಸ ಹೊರಟ ಕಾರಣ,. . ನಾನು ಬದುಕಲಾಗದ ರೀತಿಯ ಬದುಕ ಅವನಿಂದ ಕಾಣಿಸ ಹೊರಟ ಕಾರಣ ... ನನ್ನ ದುಡಿಮೆಯ ಫಲದೊಳಗೆ 'ಇಲ್ಲ ' ದವರಿಗೊಂದಂಶ ನೀಡಲಾಗದ ಕಾರಣವೇ . . , ಈ ತುಮುಲ , ಈ ತಲ್ಲಣ..!


ನನ್ನ ಸಂತ ಕಾವಿಯೊಳಗಿಲ್ಲ ..ನನ್ನ ಸಂತ ನೀಳ ಜಟೆಯೊಳಗೆ ಅವಿತಿಲ್ಲ, ನನ್ನ ಸಂತ, ಬಿಟ್ಟ ನಿಡು ದಾಡಿಯೊಳಗಿಲ್ಲ, ನನ್ನ ಸಂತನಿಗೆ ಅಶ್ರಮದ ಹಂಗಿಲ್ಲ, ನನ್ನ ಸಂತನಿಗೆ ಬ್ರಹ್ಮ ಚರ್ಯದ ಕಟ್ಟುಪಾಡುಗಳಿಲ್ಲ ...ನನ್ನ ಸಂತನಿಗೆ, ಕೈ - ಕಾಲುಗಳ ಅಕರಾಳ ವಿಕರಾಳ ತಿರುಗಿಸಿ, ಪಾದದ ನೀರ ಕುಡಿಸಿ, ನಾನು ಇಂತಾ ದೇವರು ಎಂದು 'ಅಪ್ಪಣಿಸಿ' ಆಶೀರ್ವಚನದ ಭಂಗಿಯಲಿ ನಿಲ್ಲುವ ಕಷ್ಟಗಳಿಲ್ಲ ..ನನ್ನ ಸಂತನಿಗೆ, ' ಹಣವಲ್ಲವೇ ಮನುಷ್ಯನ ಶತ್ರು ' ಎನ್ನುತ್ತಲೇ , ಮುಂದಿನ ಭೇಟಿಗೆ ' ನಿಮ್ಮಿಂದ ಬರಬಹುದಾದ ನಿಧಿ ಎಷ್ಟು ' ಎಂದು ಪರೋಕ್ಷವಾಗಿ ಕಾ೦ಚಾಣ ಸ೦ಗ್ರಹಿಸಲು ಸೂಚಿಸುವ ಅಗತ್ಯಗಳಿಲ್ಲ.

ಕಲಿತ ಶಾಲೆಗೊಂದು ಹಿಡಿ ಪುಸ್ತಕವ ದಾನವನಿತ್ತ ಘಳಿಗೆ, ಬೈಕು ಕೊಳ್ಳಲೆಂದು ಸಂಗ್ರಹಿಸಿದ ಹಣದಲ್ಲಿ ಒಂದಿಷ್ಟು ಭಾಗವನ್ನು , ಪತ್ರಿಕೆಯಲ್ಲಿ ಪ್ರಕಟವಾದ ಕ್ಯಾನ್ಸರ್ ಪೀಡಿತ ಮಗುವಿನ ಬಡ ತಾಯಿಯೊಬ್ಬಳ ಕೈಗಿತ್ತ ಘಳಿಗೆ .. , ನಾಷ್ಟಾ ಮಾಡುವ ಹೊಟೇಲಲ್ಲಿ ನಿತ್ಯ ತಿಂಡಿ ಸಪ್ಲಯಿ ಮಾಡುವ ವೈಟರ್ ಹುಡುಗನ ಬಾಡಿದ ಮುಖ ನೋಡಿ, ಅವನ ತಂಗಿಯ ಮದುವೆಗೆಂದು ಒಂದಿಷ್ಟು ಮೊತ್ತ ವನ್ನಿತ್ತ ಹೊತ್ತು, .. ಓಡುವ ಬಸ್ಸಿ೦ದ ಬಿದ್ದ ಅಪರಿಚಿತ ವ್ಯಕ್ತಿಯನ್ನು ಸಾಗಿಸಲು ಸ್ಟ್ರೆಚರ್ ಬರುವ ತನಕ ಆಫೀಸಿನ ತುರ್ತು ಮರೆತು, ರಕ್ತ ಒಸರುವ ಕೈಗೆ ನಿಮ್ಮ ಟವೆಲು ಕಟ್ಟಿದ ಆ ಕ್ಷಣ..., ಸುತರಾಂ ಅರ್ಥವೇ ಆಗದಿದ್ದ 'ಲೆಕ್ಕ' ವನ್ನು ಮೆತ್ತಿ , ಒತ್ತಿ ತಲೆಗೆ ಹತ್ತಿಸಿದ ಆ ಹೈಸ್ಕೂಲು ಅಧ್ಯಾಪಕರನ್ನು , ಅವರ ಎಂಭತ್ತರ ಇಳಿಜಾರಲ್ಲಿ ಕಂಡು ಕಾಲಿಗೆರಗಿ 'ಸಾರ್.. ' ಎಂದು ಕಣ್ಣು ಮಂಜಾಗಿಸಿಕೊಂಡ ಆ ಸಂಜೆ .., ನಿಮ್ಮೊಳಗೊಬ್ಬ ಸಂತನಿದ್ದ.

ಆಗಾಗ ಈ ಸಂತನ ಇರವನ್ನು ನೆನಪಿಸಿಕೊಳ್ಳಿ, ಅವ ಮರೆಯಾಗದಂತೆ ನೋಡಿಕೊಳ್ಳಿ, ಅಷ್ಟು ಸಾಕು!
***
ಈಗ , ಹಲುಬುವ ನನ್ನ ಗೆಳೆಯನಿಗೆ ಹೇಳಬೇಕು ....


ನನ್ನ ದೇವರು, ಇದ್ದರೆ , ನಾ ಹುಟ್ಟುವ ಮೊದಲೇ ಇದ್ದ.. ನಾನಿದ್ದಾಗಲೂ, ನಾನಿಲ್ಲದಿರುವಾಗಲೂ ಇರುವ...ಮಧ್ಯೆ ನನ್ನ -ಅವನ ನಡುವೆ 'ಇನ್ನೊಬ್ಬನ' ನೇಮಿಸುವ ಜರೂರು ನನಗಿಲ್ಲ. ...ಹಾಗಾಗಿಯೇ, ಮತ್ತು ಹಾಗಾಗಿಯೇ ಎಲ್ಲೋ, ನಿತ್ಯಾನಂದನೆಂಬವನೊಬ್ಬ ಕಾಮಾನಂದನಾದಾಗ ನನ್ನ 'ದೇವರ ಜಗತ್ತು ' ಬಿದ್ದು ಹೋಗಿಲ್ಲ..ಯಾಕಂದರೆ , ನನ್ನ ದೇವರು ಅವನ ಹೆಗಲ ಮೇಲಿರಲಿಲ್ಲ.....!!
***


ಮುಂಬಯಿ ಕನ್ನಡಕ್ಕೆ ಹೆಮ್ಮೆ ತ೦ದ ಹುಡುಗ...

" ಳನೇ ಕ್ಲಾಸನ್ನು ಒಳ್ಳೆಯ ಅಂಕ ತೆಗೆದು ಪಾಸಾಗಬೇಕು...ಈ ವರ್ಷ ನಿನಗೆ ಹೊಸ ಸೈಕಲ್ ಕೊಡಿಸುವೆ...ಹತ್ತನೆಯ ತರಗತಿಯಲ್ಲಿ ತೆಗೆವ ಮಾರ್ಕು, ಪಡೆವ ದರ್ಜೆ ಬಹಳ ಮುಖ್ಯ ಮಗೂ..ಮುಂದೆ ನಿನಗೆ ಒಳ್ಳೆಯ ವಿಭಾಗಕ್ಕೆ ಸೇರಿ ವಿದ್ಯಾಭ್ಯಾಸ ಮುಂದುವರಿಸಬಹುದು..'ದೊಡ್ಡ ಜಾಬ್'ಸಿಕ್ಕಿ , ಬಹಳ ದೊಡ್ಡ ಮನುಷ್ಯನಾಗಬಹುದು...ಅಮ್ಮ ನ 'ಕೊಂಡಾಟ' ದ ಮುಂಗೈ ಬೆಣ್ಣೆ ...
ಪಿ .ಯೂ.ಸಿ ಅಂದರೆ ನಿನ್ನ ಜೀವನದ ಗುರಿ ನಿರ್ಧರಿಸುವ ಹಂತ...ಕ್ಲಾಸಲ್ಲಿ ಎರಡು ಅಥವಾ ಮೂರನೇ ಗ್ರೇಡಿಗಾದರೂ ಏರ ಬೇಕು..ಈ ಸಮ್ಮರ್ ನಲ್ಲಿ ಕ್ರಿಕೆಟ್ ಟೂರ್ನಿ, ಸ್ವಿಮ್ಮಿಂಗ್ ಕ್ಯಾಂಪ್ ಬೇಡ..ಮುಂದೆ ಎಲ್ಲಕ್ಕೂ ಸಮಯ ಬರುತ್ತದೆ.. ಸಣ್ಣಗೆ ಅಪ್ಪನ ಗದರಿಕೆ...
ಒಳ್ಳೆಯ ಕಾಲೇಜೊಂದರಲ್ಲಿ ಇಂಜಿಯನಿರಿಂಗ್ ಪ್ರವೇಶ ದೊರೆತ ಖುಷಿಯನ್ನು ಹಂಚಿಕೊಂಡರೆ... ' ಮುಂದಿನ ನಾಲ್ಕು ವರ್ಷ ಬಹಳ ಮಹತ್ವದ್ದು...ಕಾಲೇಜಿನ ಆ ಸಂಘ , ಈ ಕ್ಲಬ್ ಅಂತಾ ಎಲ್ಲಾ ಹಚ್ಚಿಕೊಳ್ಳೋದು ಬೇಡ.... ' ಅಣ್ಣನ ಹಿತವಚನ...
ಒಮ್ಮೆ ಕಾಲೇಜು ಮುಗಿದು, ಕ್ಯಾಂಪಸ್ ಸೆಲೆಕ್ಷನ್ ನಲ್ಲೋ, ಅಪ್ಲಿಕೇಶನ್ ಹಾಕಿಯೋ ಒಳ್ಳೆಯ ಕಂಪನಿ ಕೈ ಹಿಡಿದರೆ , ...ಮತ್ತೆ , ಬೆನ್ನ ಹಿಂದಿಂದ ಅಪ್ಪನ ಮಾತು...ಸಂಬಳ ಜೋಪಾನ...ಹೊಸ ಜೀನ್ಸು , ಸಿನಿಮಾ ಟಿಕೇಟು ಅಂತಾ ಪೋಲು ಮಾಡೋದು ಬೇಡ..ನಿನ್ನದೇ ಒಂದು ಮನೆ ಅಂತಾ ಆದರೆ...
ಮುಂದೆ, ಮದುವೆ , ಮಕ್ಕಳು... !

ಹೀಗೆ ,ಅದೇ ಚಕ್ರ..ಅದೇ ತಾಳ ..ಅದೇ ಆಟ.ಪಾತ್ರಧಾರಿಗಳಷ್ಟೇ ಬದಲು...! ಇಲ್ಲಿ ಮಕ್ಕಳೋ ಅಂ ಕದ ಹುಂಜಗಳು.. ಇನ್ನು , ಹೆತ್ತವರು, " ಅಗೋ, ಕಾಣಿಸ್ತಿದೆಯಲ್ಲಾ...ಅದೇ ಫಿನಿಶಿಂಗ್ ಲೈನ್ ...ಗೆಲುವಿನ ಗೆರೆ...ಅದಕ್ಕೆ ಕಾಲಿಟ್ಟು ಬಿಡು..ಮುಟ್ಟಿಬಿಡು..''ಎಂದು ಅವರ ಹುರಿದುಂಬಿಸುವವರು... ಸ್ಪರ್ಧೆಗೆ ಬಿಟ್ಟ ಹುಂಜಗಳ ಗೆಲುವಿನ ವಾರಸುದಾರರು. ಟ್ಯೂಷನ್ ಕ್ಲಾಸುಗಳಿರಬಹುದು, ಬರಿದೇ , ಪರೀಕ್ಷೆಗೆ ಬರುವ ಪ್ರಶ್ನೆಗಳನ್ನಷ್ಟೇ ಉರು ಹೊಡೆಸಿ ಕಲಿಸುವ 'ಸ್ಪೆಶಲ್ ಟ್ಯೂಟರ್ ' ಗಳ ನೇಮಕವಿರಬಹುದು.. ಇಲ್ಲಿ, ಗೆಲುವೊಂದೇ ಮಂತ್ರ, ಅದಕ್ಕಾಗಿಯೇ ಎಲ್ಲ ತಂತ್ರ. !
***
ಈ ಹುಡುಗನನ್ನು ಕಂಡದ್ದು , ಮುಂಬೈ ಮಹಾನಗರದಲ್ಲಿ ಮನೆ ಮಾತಾಗಿರುವ , ಎಳೆಯ ಮಕ್ಕಳ ಪ್ರತಿಭಾ ಚೈತನ್ಯವನ್ನೂ ಅರಳಿಸ ಹೊರಟ ಮಕ್ಕಳ ಸಂಸ್ಥೆ , "ಚಿಣ್ಣರ ಬಿಂಬ' ದ ಶಿಬಿರದ ಕಾರ್ಯಕ್ರಮವೊಂದರಲ್ಲಿ. ಹದಿನಾರರ ಪ್ರಾಯದ ಆತ ವೇದಿಕೆಯಲ್ಲಿ ಹಾಡುತ್ತಿದ್ದ , ತಾಳಬದ್ದವಾದ , ಶಾಸ್ತ್ರೀಯ ನೃತ್ಯ ದ ಹೆಜ್ಜೆಗಳನ್ನಿಡುತ್ತಿದ್ದ.ಅದೇ ಉಸಿರಿನಲ್ಲಿ, "ವೆಸ್ಟರ್ನ್' ಡ್ಯಾನ್ಸ್ ಕೂಡಾ ಮಾಡಬಲ್ಲವನಾಗಿದ್ದ. ಕನ್ನಡದ ಸುಮಧುರ ಭಾವಗೀತೆಗಳನ್ನು ರಾಗ -ತಾಳ -ಭಾವಕ್ಕೆ ಭಂಗವುಂಟಾಗದಂತೆ ಹಾಡುತ್ತಿದ್ದ .. ಹಿಂದಿ ಸಿನಿಮಾಗಳ ಹಳೆಯ ಹಾಡು , ಈ ಹುಡುಗನ ಕಂಠದಲ್ಲಿ ಹುಡುಗುತನವನ್ನು ಮೀರಿಯೇ ಜೀವ ತಳೆಯುತ್ತಿದ್ದರೆ, ಶಾಸ್ತ್ರೀಯ ಭರತನಾಟ್ಯಕ್ಕೆ , ಕಲಿಸಿದ ಗುರುಗಳೇ ಭಾವುಕರಾಗಿ ಬಿಡುತ್ತಿದ್ದರು. ಭರತನಾಟ್ಯ, ನಾಟಕ , ಕ್ವಿಜ್, ಡ್ರಾಯಿಂಗ್, ಹಾಡುಗಾರಿಕೆ , ಕೋರಿಯೋ ಗ್ರಾಫಿ, ನಿರ್ದೇಶನ , ಕೊನೆಗೆ ಪ್ಯಾಶನ್ ...ಹೀಗೆ, ಹುಡುಗ ಮಹಾರಾಷ್ಟ್ರವಲ್ಲದೆ, ಅಂಧ್ರಪ್ರದೇಶ, ತಮಿಳ್ನಾಡು ಅಂತ, ರಾಜ್ಯ -ಅಂತಾರಾಜ್ಯ ಪ್ರಶಸ್ತಿ ಪುರಸ್ಕಾರಗಳನ್ನು ತರುತ್ತಲೇ ಇದ್ದ. ಈತ ಕಲಿವ ಶಾಲೆ -ಕಾಲೇಜು ಗಳ ಅಧ್ಯಾಪಕರೇ,ಈ ಹುಡುಗನ ಜೊತೆ ಮಾತಾಡಲು, ಒಂದಷ್ಟು ಹೊತ್ತು ಕಳೆಯಲು ಸ್ಪರ್ಧೆಗೆ ಬಿದ್ದದ್ದುಂಟು. ಮುಂಬಯಿಯಲ್ಲಿ, ನಾಟಕ ಸಂಸ್ಥೆ ಕಟ್ಟಿ ಹತ್ತಾರು ನಾಟಕಗಳನ್ನು ಕೊಟ್ಟ ಗಟ್ಟಿ ನಿರ್ದೇಶಕರೇ ತಮ್ಮ ಹೊಸ ನಾಟಕಗಳಿಗೆ ಈ ಹದಿನೇಳರ ಹುಡುಗನ ನಿರ್ದೇಶನ, ಕೋರಿಯೋಗ್ರಾಫಿಗಾಗಿ ಡೇಟ್ ಕೇಳಿದ್ದುಂಟು.ಹಿರಿಯ ಹಾಡುಗಾರರನ್ನೊಳಗೊಂಡ ಕಲಾ ಸಂಸ್ಥೆಗಳು ಈ ಹುಡುಗನ 'ಕಂಠ' ವನ್ನೂ ತಮ್ಮೊಂದಿಗೆ ಸೇರಿಸಿಕೊಳ್ಳಲು ಕಾಲೇಜಿನ ಬಿಡುವಿಗಾಗಿ ಕಾಯ್ದದ್ದುಂಟು.

ಅಚ್ಚರಿ ಎಂದರೆ, ಆರಡಿಗೂ ಮೀರಿದ ಎತ್ತರದ, ಎಂಭತ್ತೈದಕ್ಕೂ ಮೀರಿದ ತೂಕದ ಈ ಹುಡುಗ , ಮನವನ್ನೊಪ್ಪಿಸಿ, ದೇಹ ಬಗ್ಗಿಸಿ, 'ಭರತ ನಾಟ್ಯ' ದಲ್ಲಿ ರಾಜ್ಯ ಮಟ್ಟಕ್ಕೆ ಬೆಳೆದದ್ದು. ಮರಾಠಿ ಮಣ್ಣಲ್ಲಿ ಹುಟ್ಟಿ, ಕರಾವಳಿಯ ಬದುಕಿನ ಚಿತ್ರಗಳನ್ನೂ ಲೀಲಾ ಜಾಲವಾಗಿ 'ಕ್ಯಾನ್ ವಾಸ್' ನಲ್ಲಿ ಬಿಂಬಿಸಿ, ಹೈದರಾಬಾದಿನ ವರೆಗೂ ಹೋಗಿ ಪ್ರಥಮ ಪುರಸ್ಕಾರ ಪಡೆದದ್ದು.

ಟ್ಯುಟೋರಿಯಲ್ ಗಳ ' ಮುಖ ' ನೋಡದೆ, " ಡೊನೇಶನ್ ಶುಲ್ಕಗಳ ಹಂಗಿಲ್ಲದೀ, ಎಲ್ಲ ಪರೀಕ್ಷೆಗಳಲ್ಲಿ ಕಾಲೇಜಿಗೆ, ಪ್ರಥಮ ನಾಗಿ ಪ್ರವೇಶ ಗಿಟ್ಟಿಸಿ, ಇಂಜಿಯನಿರಿಂಗ್ ಮುಗಿಸಿದ ಈ ಹುಡುಗ, ಆರು ತಿಂಗಳ ಹಿಂದೆ, ಮೈಸೂರಿನ ಇನ್ ಪೋಸಿಸ್ ಗೆ ನೌಕರಿ ತರಬೇತಿಗೆ ಹೊರಟಾಗ ಮುಂಬೈ ವಿಟಿಯ ರೈಲು ನಿಲ್ದಾಣದ ತುಂಬಾ ಬೀಳ್ಕೊಡುವ ಜನ ಜಾತ್ರೆ ನೆರೆದಿತ್ತು. ಅವರಲ್ಲಿ ಬಹುತೇಕ ಮಾತಾಪಿತರು, ಪ್ರೀತಿ, ಕೃತಜ್ಞತೆಗೆ ಅಲ್ಲಿ ಸೇರಿದ್ದರು, ಕಾರಣ ಇಷ್ಟೇ , ಅವರಲ್ಲೆಷ್ಟೊ ಮಂದಿಯ ಮಕ್ಕಳು ಈ ಹುಡುಗನ ಸ್ಪೂರ್ತಿಯಿಂದ ಭರತನಾಟ್ಯ ಕ್ಕಿಳಿದು ಮಿಂಚಿದ್ದರು. ಹಾಡುಗಾರಿಕೆಯಲ್ಲಿ ಪಳಗಿದ್ದರು. ನಾಟಕ ಆಡಿದ್ದರು. ಅವರಲ್ಲೆಷ್ಟೊ ಮಂದಿ , ತುಪ್ಪದ ಅನ್ನ ಬಡಿಸಿ ಬೆಳೆಸಿದರೂ ತಪ್ಪು ಹಾದಿ ಹಿಡಿದ, ಕಾರಲ್ಲಿ ಶಾಲೆಗೆ ಕಳುಹಿಸಿ ಕೊಟ್ಟರೂ ಕಲಿಯದ ತಮ್ಮ ಮಕ್ಕಳು ಕಲಿವಂತೆ ಮಾಡಲು , ಈ ಹುಡುಗನನ್ನು ಅವರು ಬಳಸಿಕೊಂಡಿದ್ದರು. ಟ್ಯೂಷನ್ ಇನ್ಸ್ ಟ್ಯೂಟುಗಳ ಹಂಗಿಲ್ಲದೇ , ತಾನೇ ತಯಾರಿಸಿದ ನೋಟ್ಸ್ ಗಳಿಂದ ಈ ಹುಡುಗ ಹಲವು ಮಕ್ಕಳಿಗೆ ಪರೀಕ್ಷೆಯಲ್ಲಿ ಗೆಲ್ಲುವ ಸೂತ್ರ ಕಲಿಸಿದ್ದ.
***
ಮುಂಬಯಿ ಕನ್ನಡಕ್ಕೆ ಹೆಮ್ಮೆಯಾದ, ಸ್ಪೂರ್ತಿಯಾದ ಈ ಹುಡುಗ ಆಶೀಷ್ ಹಾಲುಂಡು -ಕೆನೆಯುಂಡು ಬೆಳೆದವನಲ್ಲ. ಮುಂಬಯಿಗೆ ಬಹುತೇಕ ಕನ್ನಡದ ಬಹುತೇಕ ಮಂದಿಯಂತೇ ದುಡಿದು-ಕಲಿತು ನೆಲೆ ಕಾಣಲೆತ್ನಿಸುವ ಅಪ್ಪನ, ಬೇಸಾಯ --ಸಾಗುವಳಿಯಲ್ಲಿ ಮುಳುಗಿ, ಮದುವೆ ಎಂಬೊಂದು ಸೇತುವೆ ಏರಿ ಊರು ಬಿಟ್ಟು ಮುಂಬಯಿಗೆ ಸೇರಿದ ಅಮ್ಮನ ಮಗ. ವ್ಯಾಪಾರದ ಏರಿಳಿತದಲ್ಲಿ ಇದ್ದ ಮನೆಯನ್ನೂ ಮಾರಬೇಕಾಗಿ ಬಂದ ಅಪ್ಪ ನಿಗೆ, "ನನಗಿಂತ ಮೊದಲು ಜನಿಸಿದ ಹೆಣ್ಣುಮಗಳೊಬ್ಬಳಿದ್ದಳು. ಅವಳ ಮದುವೆಗೆ ಅದು ಖರ್ಚಾಯಿತೆಂದುಕೊಂಡು, ಮರೆತು ಬಿಡು," ಎಂದು ಸಾಂತ್ವನ ಹೇಳಿದ ಮಗ , ಆ ವರ್ಷ ಕಾಲೇಜಿಗೆ ಪ್ರಥಮನಾಗಿ ತೇರ್ಗಡೆಯಾಗಿದ್ದ.
***
ತನ್ನ ಬಾಲ್ಯಕ್ಕೆ ದಕ್ಕದೆ ಹೋದದ್ದೆಲ್ಲವನ್ನೂ ಮಗನ ಮೂಲಕ ದಕ್ಕಿಸಿಕೊಂಡ , ಯಕ್ಷಗಾನ ಭಾಗವತಿಕೆಗಿಳಿದ ಮುಂಬಯಿಯ ಪ್ರಥಮ ಮಹಿಳೆ , ತಾಯಿ ಸುಮಂಗಲಾ ಇಚ್ಚೆಯಂತೆ ಐ ಎ ಎಸ್ ಕಲಿಕೆ - ಆಶೀಶ್ ನ ಮೊದಲ ಪ್ರಾಶಸ್ತ್ಯ. ಇನ್ ಫೋ ಸಿಸ್ ನೌಕರಿಯ ಗರಿ ಹೊತ್ತು ಮರಳಿದ ಪ್ರತಿಭಾವಂತ ಆಶೀಷ್ ಮತ್ತೆ ಮುಂಬಯಿಯ ಮಕ್ಕಳ -ರಂಗದ ,ಹೊಸ ಪೀಳಿಗೆಗೆ ತನ್ನ ಪ್ರತಿಭೆ -ಸಾಧನೆಯ ಬೆಳಕಲ್ಲಿ ಹೊಸ ಚೈತನ್ಯ ನೀಡುವಂತಾದರೆ...ಇದು ಇಲ್ಲಿನ ಕನ್ನಡಿಗರ ಬಯಕೆ.

. . . ಮಧ್ಯೆ, ಯಾವ ಚಟುವಟಿಕೆಯ ನಾದ - ನಿನಾದವೂ ಇಲ್ಲದೆ ಕಳೆದು ಹೋಗುವ ನಮ್ಮ ಹುಡುಗರ ಬಾಲ್ಯ ...ತುಂಟಾಟಿಕೆಯ ಒಗರಿಲ್ಲದೆ ಗೆಜ್ಜೆಯ ಜಣ ಜಣವಿಲ್ಲದೆ ಒಣಗುವ ಹುಡುಗಿಯರ ಕೌಮಾರ್ಯ...'ಗುರುತಿಸುವಿಕೆ' ಯ ನೆರವಿಲ್ಲದೆ, ಪ್ರೋತ್ಸಾಹದ, ನೀರಿಲ್ಲದೆ ಒಳಗೇ ಇಂಗಿ ಬಿಡುವ ಮಕ್ಕಳ ಪ್ರತಿಭಾ ಚೈತನ್ಯ..ಎಲ್ಲ , ಬದುಕಿನ ತುರುಸಿಗೆ, ಸ್ಪರ್ಧೆಗೆ ಬಲಿ. ತಮ್ಮ ಮಕ್ಕಳು ಶಾಲೆ ಕಾಲೇಜುಗಳ ಪರೀಕ್ಷೆ ಗೆಲ್ಲುವ , ಗ್ರೇಡು ದೊರಕಿಸಿಕೊಳ್ಳುವಂತೆ ಮಾಡುವ ಹುರುಪಿನಲ್ಲಿ, ಹಪಾಹಪಿಯಲ್ಲಿ ಅವರೊಳಗಿರುವುದನ್ನೆಲ್ಲ ಚಿವುಟುವ , ಬತ್ತಿಸಿ ಬಿಡುವ ಅಪ್ಪ -ಅಮ್ಮಂದಿರಿಗೆಲ್ಲ ಉತ್ತರ ಆಶೀಷ್ ಮತ್ತು ಆತನ ಹೆತ್ತವರು!
***

ಏರಿ ಇಳಿಯುವ ಹೊತ್ತು...


ಬ್ಯಾಂಕಿನ ಸರತಿ ಸಾಲಲ್ಲಿ ನಿಂತಿದ್ದ ಹೊತ್ತು.ಅರುವತ್ತರ ಗಡಿ ಸಮೀಪಿಸಿರಬಹುದಾದ ಅವರೂ ಸಾಲಲ್ಲಿದ್ದರು.ನಿಂತಲ್ಲಿನ "ಬೋರು" ಕಳೆಯಲು ಮಾತು ಶುರುವಿಟ್ಟಿತು.ಅವರು ತಿಂಗಳ "ಪೆನ್ಷನ್" ಹಣ ವಿದ್ಡ್ರಾ ಮಾಡಿಕೊಳ್ಳಲು ಬಂದಿದ್ದರು.ಹೇಳುವುದಕ್ಕಿದ್ದ ನಾಲಗೆಗೆ ಕೇಳುವ ಕಿವಿ ಸಿಕ್ಕರೆ ಸಾಕೆಂಬಂತೆ, ಅವರ ಮಾತು, ಕುಟುಂಬ , ಮಕ್ಕಳು ಎಂಬಂತೆ ಸಾಗಿತು. ನಡುವೆ ಎಲ್ಲೋ ಮಾತು ನಿಲ್ಲಿಸಿ ಆ ಹಿರಿಯರು ಉಗುಳು ನುಂಗಿದರು."ನನ್ನ ಈ ಪೆನ್ಶನ್ ಮೊತ್ತ್ತ ಏನೇನೂ ಅಲ್ಲ, ಮಗಳು ಮನೆಗೆ ತರುತ್ತ್ತಿರುವ ಆರಂಕಿ ಸಂಬಳದ ಮುಂದೆ, ಇದು ಜುಜುಬಿ ಎಂದು ಮ್ಲಾನವದನರಾದರು. ವಿಚಾರಿಸಿದಾಗ , ನಿವೃತ್ತಿಗೆ ಮುಂಚೆ ಸರ್ಕಾರದ ಸೇವೆಯಲ್ಲಿದ್ದು, ಒಳ್ಳೆಯ ಮೊತ್ತವನ್ನೇ, ಸಂಬಳವಾಗಿ ಪಡೆಯುತ್ತ್ತಿದ್ದವರು. ಮಕ್ಕಳ ವಿದ್ಯಾಭ್ಯಾಸ , ಸ್ವಂತ ಮನೆ ಎಲ್ಲ ಅದರಲ್ಲೇ ಸಾಧ್ಯವಾಗಿತ್ತು . ಆದರೆ ಈಗಿನ ಐಟಿ/ಕಾರ್ಪೋರೇಟ್ ನೌಕರಿ ತರುವ ಪ್ಯಾಕೇಜ್ ಸಂಬಳದ ಮುಂದೆ ಅದು ಸಣ್ಣ ಮೊತ್ತ್ತವಾಗಿತ್ತು ಅಷ್ಟೇ.ಅವರದೀಗ ಬದುಕಿನ ಇಳಿ ಹೊತ್ತು. ಏರಿ - ಇಳಿದ ಹೊತ್ತು..ಅವರಿಗೆ ತಮ್ಮದೇ ಮಗಳ ಜೊತೆಗೊಂದು ಸ್ಪರ್ಧೆ, ಈರ್ಷೆ ಹುಟ್ಟಿತ್ತು!

***

ಬದುಕು ನಿರಂತರ ಒಂದಲ್ಲ ಒಂದು ರೀತಿಯಲ್ಲಿ ಏರುವ ಯತ್ನ, ಬೆಳಗಾತ ಮೂಡುವ ನೇಸರಿನ ಹಾಗೆ !ಹುಡುಗ, ವಿವಿಧ ತರಗತಿಗಳನ್ನೇರುತ್ತಾ ಸಾಗುವುದು, ಪದವಿಗಳನ್ನು ಹುದ್ದೆಗಳನ್ನು ಏರುತ್ತಾ ಸಾಗುವುದು. ರಾಜ್ಯ ಸರ್ಕ್ಯೂಟಿನಲ್ಲಿ ಆಡಿದ ಅಥ್ಲೆಟ್ ರಾಷ್ಟ್ರಿಯ ಹಂತಕ್ಕೇರುವುದು, ರಣಜಿಯಲ್ಲಿ ಆಡಿದ "ಸ್ಥಿರತೆಯ' ಆಟಗಾರ, ಮುಂದೆ ಟೆಸ್ಟ್ ತಂಡದ ನಂಬರ್ ವನ್ ದಾಂಡಿಗನ ಸ್ಥಾನಕ್ಕ್ಕೇರುವುದು, ಮೊದಲನೆಯ ಕವನ ಸಂಕಲನದಲ್ಲಿ ಭರವಸೆ ಹುಟ್ಟಿಸಿದ ಕವಯಿತ್ರಿ ರಾಜ್ಯ ಅಕಾಡೆಮಿ ಪುರಸ್ಕಾರಕ್ಕೆ ದಿಟ್ಟಿ ನೆಡುವುದು, ಅಥವಾ ವೇಟರ್ ಆಗಿರುವ ಹೊಟೇಲು ಮಾಣಿ, ಮ್ಯಾನೇಜರ್ ಆಗಿ ಮುಂದೆ ಹೊಟೇಲು "ಮಾಲಕ'ನ ಸ್ದ್ತಾನಕ್ಕೇರುವುದು, ವ್ಯಕ್ತಿಯ ಪ್ರಯತ್ನ -ಸಾಮರ್ಥ್ಯ, ಕೌಶಲ್ಯ , ಪ್ರತಿಭೆ ವ್ಯಕ್ತಗೊಳ್ಳುವ ಎಲ್ಲ ವಿಭಾಗಗಳು ಇಲ್ಲಿ ಸೇರುತ್ತವೆ. ಸ್ಪರ್ಧೆ, ಪೈಪೋಟಿ , ಪರೀಕ್ಷೆ ಎಲ್ಲ ಈ "ಏರುವಿಕೆ" ಗಾಗಿ ಬಳಸುವ ಏಣಿಗಳು. ಏರಿ ನಿಂತಲ್ಲಿ ಸ್ಥಾಪಿತರಾಗಿರಬೇಕೆಂಬ ಮತ್ತೊಂದು ಹಂಬಲದಲ್ಲಿ ಮಗದೊಂದಷ್ಟು ಸ್ಪರ್ಧೆಗಳು.

ಏರುವ ಯತ್ನ, ಎಷ್ಟು ಶಕ್ತಿಯುತವಾಗಿ, ಕೌಶಲ್ಯಪೂರ್ಣವಾಗಿ, ಪರಿಶ್ರಮಪೂರ್ವಕವಾಗಿದ್ದರೂ ಅದು ಇಳಿವ ಹೊತ್ತಿಗೆ ಕಟ್ಟುವ ಸುಂಕವಾಗುವುದಿಲ್ಲ.ಸೇಫ್ ಡೆಪಾಸಿಟ್ಟೂ ಆಗುವುದಿಲ್ಲ.ಆದ್ದರಿಂದಲೆ, ಇಳಿವ ಹೊತ್ತಿಗೆ ಪರ್ಯಾಯವಿರುವುದಿಲ್ಲ! ಹಾಗೇ, ಈ ಏರುವ ಬಯಕೆ ಇದೆಯಲ್ಲ್ಲಾ , ಅದಕ್ಕೆ ಫುಲ್ ಸ್ಟಾಪು ಗಳೇ ಇರುವುದಿಲ್ಲ.ಆದರೆ ವ್ಯಕ್ತಿಯ ಕೌಶಲ್ಯ , ಪಕ್ವತೆ ಗೆ ಪರೀಕ್ಷೆ ಒದಗುವುದು ಏರುವುದರಲ್ಲರಲ್ಲ, ಏರಿ ನಿಲ್ಲುವ ಸ್ಥಿತಿ ಮತ್ತು ಏರಿ ಇಳಿವ ಅನಿವಾರ್ಯವನ್ನು ಸಮಭಾವದಿಂದ ನಿಭಾಯಿಸುವುದರಲ್ಲಿ.

ಸಾಧನೆಯ ನಿರಂತರತೆಯನ್ನು ಕಾಪಾಡಿಕೊಳ್ಳುವುದು, ಕೆಲವೊಮ್ಮೆ ಮುಂದಿನ ಪೀಳಿಗೆಗೆ ಅದನ್ನು ದಾಟಿಸುವುದೂ ಕೂಡಾ ಏರಿ ನಿಂತವನ, ಗೆದ್ದು ನಗೆಬೀರಿದವನ ಮಂದಿರುವ ಸವಾಲಾಗಿರುತ್ತದೆ. ಅಥವಾ ಹಾಗೆಂದು ಆತ ಭಾವಿಸಿರುತ್ತ್ತಾನೆ.ಅದರಲ್ಲೂ, ಗುರಿ ಸಾಧಿಸಿ , ಇನ್ನು ಸಾಕೆಂದು ವಿರಮಿಸ ಹೊರಟಾಗ, ನಿಜವಾದ ಕಷ್ಟ ಎದುರಾಗುತ್ತದೆ. ಸ್ಟಾರ್ ಪಟ್ಟಕೇರಿ , ಜನಪ್ರಿಯತೆಯ ತುತ್ತತುದಿಯಲ್ಲಿ ನಿವೃತ್ತನಾಗ ಹೊರಡುವ ಕ್ರೀಡಾಪಟು, ಓರ್ವ ನಟ, ನಿರ್ದೇಶಕ ಎಷ್ಟೋ ಬಾರಿ, "ಶತಾಯಗತಾಯ' ಅಲ್ಲಿ ಉಳಿಯಲು ಯತ್ನಿಸುತ್ತಾನೆ.ಅದಾಗದೆ ಹೋದಾಗ ಮಕ್ಕಳಿಗೆ ಅವಕಾಶ ಕಲ್ಪಿಸಿ, ಅವರ ಮೂಲಕ ತಾನು ಮುಂದುವರಿಯ ಬಯಸುತ್ತಾನೆ. ಬಹುಶಹಾ ಇದೂ ,"ಐಡೆಂಟಿಟಿ ಕ್ರೈಸಿಸ್' ನ ನಿರುವಹಣೆಯ ಭಾಗವಿರಬಹುದೇನೋ ? ಇದೆರಡೂ ಸಾಧ್ಯವಾಗದ ಬಹುತೇಕ ಮಂದಿ " ಇಳಿವ' ಸ್ಥಿತಿಯನ್ನು ಬಹಳ ಕೆಟ್ಟದಾಗಿ ನಿರುವಹಿಸಿ ಬಿಡುತ್ತಾರೆ. ಕೆಲ ವರ್ಷಗಳ ಹಿಂದೆ, ಮಹಾರಾಷ್ಟ್ರದಲ್ಲಿ ವಿಶ್ವ ವಿದ್ಯಾಲಯಗಳು, ಸುಧಾರಣಾ ಕ್ರಮವೊಂದನ್ನು ಕೈಗೊಂಡವು.ಇದರತೆ ವಿಭಾಗ ಮುಖ್ಯಸ್ಥರ "ಹುದ್ದೆ' ಆ ವಿಭಾಗದ ಎಲ್ಲ ಪ್ರಾಧ್ಯಾಪಕ ಸಿಬ್ಬಂದಿಯ ಮಧ್ಯೆ ಸೀನಿಯರ್, ಜ್ಯೂನಿಯರ್ ಭೇದವಿಲ್ಲದೆ, "ಪರ್ಯಾಯ' ಕ್ಕೊಳಪಟ್ಟಿತು.ನಿನ್ನೆಯ ವರೆಗೆ ತಾವಿದ್ದ ಮುಖ್ಯಸ್ಥ ಹುದ್ದೆಯಿಂದ ಕೆಳಗಿಳಿದು, ತನ್ನದೇ ವಿಭಾಗದ ಕಿರಿಯನ ಕೈ ಕೆಳಗೆ ಕೆಲಸ ಮಾಡಲಾಗದೆ,"ಕಿರಿಕಿರಿ'ಗೊಳಗಾದ ಬಹಳಷ್ಟು ಹಿರಿಯ ಪ್ರಾಧ್ಯಾಪಕರು ಹುದ್ದೆ ಬಿಟ್ಟು ನಡೆದ ಪ್ರಸಂಗವೂ ಎದುರಾಯಿತು. ವೃತ್ತಿ ಜೀವನದ "ಇಳಿತ'ವನ್ನು ನಿಭಾಯಿಸುವುದು ಅಷ್ಟು ಸುಲಭದ ಮಾತಲ್ಲ.

ಇದು ಶೈಕ್ಷಣಿಕ ವಲಯದ ಮಾತಾಯಿತು. ಇನ್ನು, ದೇಶದೆಲ್ಲೆಡೆ ಭೂ ಸುಧಾರಣೆಯ "ಸಮಾಜ ಮಥನ ' ನಡೆದಾಗ, ನಿನ್ನೆಯವರೆಗೆ ಧಣಿಗಳಾಗಿದ್ದವರನೇಕರು, ನಿರ್ಗತಿಕರೂ ಆದದ್ದುಂಟು. ಊರಿಗೇ ಬಂದ ಕಾನೂನಿನ ಕತ್ತಿಯಲುಗಿಗೆ ಸಿಲುಕಿ, ಅರ್ಥಿಕವಾಗಿ, ಸಾಮಾಜಿಕವಾಗಿ ಇಳಿದು ಹೋದ ಅವರಲ್ಲನೇಕರಿಗೆ ಈ ಸ್ಥಿತಿಯಿಂದ ಹೊರಬರುವುದು ಸಾಧ್ಯವಾಗದೆ , ಸಾವಿನ ದಾರಿ ತುಳಿದದ್ದೂ ಇತ್ತು. ಇಂತಹಾ ಸ್ಥಿತಿಯಲ್ಲಿ ಬಾಳಲಾರದೆ, ದಕ ಜಿಲ್ಲೆಯ ಬಂಟ್ವಾಳದ ಬ್ರಾಹ್ಮಣರ ಕುಟುಂಬವೊಂದು, ಸಂಪೂರ್ಣ ಆತ್ಮಹತ್ಯೆಗೆ ಶರಣಾಯಿತು. ಇದೇ ರೀತಿ, ಮಹಾರಾಷ್ಟ್ರದ ಹೊಟೇಲು ವ್ಯವಸಾಯದಲ್ಲೂ ಒಮ್ಮೆ ನಡೆದು ಹೋಯಿತು. ಯಾವ ಹಂಗೂ ಇಲ್ಲದೆ, ಮುಕ್ತವಾಗಿ ನಡೆಯುತ್ತಿದ್ದ "ಲೇಡೀಸ್ ಬಾರು" ಗಳಿಗೆ ಸರಕಾರ ನಿಷೇಧ ಹೇರಿದಾಗ, ಅಲ್ಲಿ ಹುಟ್ಟುತ್ತಿದ್ದ ವಿಪುಲ ಆದಾಯದಲ್ಲೇ, ಕೈಯ ಎಂಟು ಬೆರಳಿಗೆ ಉಂಗುರ ತೊಡುತ್ತಿದ್ದ ಅನೇಕ ಕನ್ನಡಿಗ ಯುವ ಹೋಟೇಲಿಗರಿಗೆ ಮೊಗೆವ ಕೆರೆಯಲ್ಲೇ, ನೀರು ಬತ್ತಿ ಹೋದ ಅನುಭವ! ಮಾನಸಿಕ ಜರ್ಜರಿತ , ಆರ್ಥಿಕ ಕುಸಿತದಿಂದಾಗಿ, ಹಲವು ಯುವ ಉದ್ಯಮಿಗಳು ಹೇಳಹೆಸರಿಲ್ಲದಾಗಿ ಹೋದರು.ಇಂತದ್ದೊಂದು ಸ್ಥಿತಿಯನ್ನು ನಿಭಾಯಿಸಲು ಅವರೆಂದೂ ಅಣಿಯಾಗೇ ಇರಲಿಲ್ಲ.

ಇಪ್ಪತ್ತೈದು, ಮೂವತ್ತು ವರ್ಷಗಳ ಹಿಂದಿನ ಕ್ರಿಕೆಟ್ ಪಂದ್ಯಾವಳಿಗಳಿಗೆ ಇವತ್ತಿನ ಗ್ಲಾಮರ್ ಇರಲಿಲ್ಲ. ಆದರೆ ಹೆಚ್ಚಿನ ಸಭ್ಯತೆ ಇತ್ತು. ಆಟಗಾರನೊಬ್ಬ ತನ್ನ "ಫಾರ್ಮ್' ನಿಂದ ಇಳಿದ ಬಳಿಕ ತಂಡದ ಆಯ್ಕೆ ಸಮಿತಿಯ"ಲಾತ್" ಗಾಗಿ ಕಾಯದೆ , ತಾನಾಗಿಯೇ ವಿರಮಿಸುತ್ತಿದ್ದ ದಿನಗಳವು.ಅಂತಾ ಎಪ್ಪತ್ತು -ಎಂಭತ್ತರ ದಶಕದ ಮಧ್ಯೆ ಭಾರತೀಯ ಕ್ರಿಕೆಟ್ಟಿಟ್ಟನ್ನು ಆಧರಿಸುತ್ತಿದ್ದ ಒಬ್ಬ ಆಟಗಾರ ಕರ್ಸನ್ ಘಾವ್ರಿ. ಎಡಗೈಯಿಂದ ಮಧ್ಯಮ ವೇಗದಲ್ಲಿ ಬೌಲಿಂಗ್ ನಡೆಸಿ ಒಳ್ಳೆಯ "ವಿಕೆಟ್ ಫಸಲು' ತೆಗೆಯುತ್ತಿದ್ದ .ಜೊತೆಗೆ,ಬಾಲಂಗೋಚಿ ಸರದಿಯಲ್ಲಿ ಉತ್ತಮ ಬ್ಯಾಟಿಂಗ್ ನಡೆಸುತ್ತಿದ್ದುದರಿಂದ , ತಂಡ ಆತನ "ಸವ್ಯಸಾಚಿತ್ವ'ದ ಲಾಭ ಪಡೆದಿತ್ತು.ಪಂದ್ಯವೊಂದರ ನಡುವೆ, ರನ್ನಿಂಗ್ ಕಾಮೆಂಟರಿ ನೀಡುತ್ತಿದ್ದ ವಿವರಣೆಕಾರ,"ಘಾವ್ರಿಯವರಿಗೆ ಇದೇ ಕೊನೆಯ ಪಂದ್ಯ' ವೆಂದು ಘೋಷಿಸಿ ಬಿಟ್ಟರು.. ಒಳ್ಳೆಯ ಫಾರ್ಮ್ ನಲ್ಲಿದ್ದ, ಘಾವ್ರಿ ಹೀಗೇಕೆ ಮಾಡಿದರು ? ಇದು ಆ ದಿನಗಳ ಕ್ರಿಕೆಟ್ ಪ್ರಿಯರ ಕಳವಳದ ಪ್ರಶ್ನೆಯಾಗಿತ್ತು. ಮರುದಿನದ ಸುದ್ದಿಗೋಷ್ಟಿಯಲ್ಲಿ, ಘಾವ್ರಿ ನುಡಿದ ಮಾತು ಎಲ್ಲ ಕಾಲಕ್ಕೆ, ಎಲ್ಲ ರಂಗಗಳಿಗೆ ಅನ್ವಯಿಸುವಂತಾದ್ದು . " ನಾನು ಫಾರ್ಮ್ ನಲ್ಲಿ ಸಾಗುತ್ತಿದ್ದೇನೆ ನಿಜ, ಫಾರ್ಮ್ ಕಳಕೊಂಡು ಇಳಿದು ಬಿಡುವುದಕ್ಕಿಂತ, ನೀವೆಲ್ಲಾ, "ಯಾಕೆ, ಈಗ ಯಾಕೆ, ಎಂದು ಕೇಳುವ ಈ ಕಾಲವೇ ನಿವೃತ್ತಿಗೆ ಸಕಾಲವೆಂದು ಭಾವಿಸುವೆ...''.ಇದು ಘಾವ್ರಿಯಂತವರಷ್ಟೇ ಹೇಳಬಲ್ಲ ಮಾತು.

***

ವಿಶ್ವ ಟೆನ್ನಿಸ್ ಕ್ಷಿತಿಜದ ಮಹಾನ್ ಆಟಗಾರ ಪೀಟ್ ಸಾಂಪ್ರಾಸ್. ಹದಿನೈದು ವರ್ಷಗಳ ಟೆನ್ನಿಸ್ ಬಾಳ್ವೆಯಲ್ಲಿ ಹದಿನಾಲ್ಕು ಬಾರಿ ಗ್ರಾಂಡ್ ಸ್ಲಾಮ್ ಚಾಂಪ್ಯನ್ ಶಿಪ್ ಗೆದ್ದು ವಿಶ್ವದ ಟೆನ್ನಿಸ್ ಅಚ್ಚರಿಗಳ ಸಾಲಿಗೆ ಸೇರಿ ದಂತಕಥೆಯಾದ -ಈರ.ಅದರಲ್ಲೂ, ಸತತ ಎಂಟು ಬಾರಿ ಗ್ರಾಂಡ್ ಸ್ಲಾಮ್ , ಸತತ ಏಳು ಬಾರಿಯ ವಿಂಬಲ್ಡನ್ ಗೆದ್ದ "ಏಕಚಕ್ರಾ-ಪತಿ'ಯ ಈ ಎರಡು ವಿಭಾಗಗಳ ಗೆಲುವನ್ನು ಇನ್ನೂ ಯಾರೂ ಸರಿ ಗಟ್ಟಿಲ್ಲ. ಸತತ ಎಂಟು ವರ್ಷ ವಿಶ್ವ ಟೆನಿಸ್ ರ್ಯಾಂಕಿಂಗ್ ನ ತುತ್ತ ತುದಿಯಾದ ನಂಬರ್ 1 ಸ್ಥಾನದಲ್ಲಿದ್ದ ಪೀಟ್ ಗೆ ಬಿಬಿಸಿ ಸುದ್ದಿಗಾರ್ತಿಯೊಬ್ಬಳು ಕೇಳಿದ ಪ್ರಶ್ನೆ., "ಪೀಟ್, ಯೂ ಆರ್ ನಂಬರ್ ವನ್, ವಾಟ್ ನೆಕ್ಸ್ ಟ್ ? '(ನೀವು ನಂಬರ್ ವನ್ ಆಟಗಾರ, ಮುಂದೇನು?) "ವೆನ್ ಯೂ ಆರ್ ಇನ್ ದ ಪೀಕ್ , ದಿ ಓನ್ಲಿ ಪಾಸಿಬಲ್ ಮೂವ್ ಮೆಂಟ್ ಈಸ್ ಫಾಲಿಂಗ್ ಡೌನ್....!! (ತುತ್ತ ತುದಿಗೇರಿದ ಬಳಿಕ , ಇನ್ನೊಂದೇ ಸಾಧ್ಯತೆ..ಕೆಳಕ್ಕೆ ಜಾರುವುದು) ಇದು ಪೀಟ್ ಕೊಟ್ಟ ಉತ್ತರ. ಎತ್ತರಕ್ಕೆ ಏರಿದವರೆಲ್ಲ ಮನನ ಮಾಡಬೇಕಾದ ವಿಚಾರ.

***

ಬಂದೆಷ್ಟು ಕಾಲವಾಯಿತು ಕೇಳಿಕೊಳ್ಳಿ.....!


ಆಧುನಿಕ ಸಮಾಜ ಜೀವನ ಪ್ರವಾಹ ಎರಡು ಪ್ರಮುಖ ನೆಲೆಗಳಲ್ಲಿ ಹರಿಯುತ್ತಿದೆ. ಒಂದೆಡೆ ಸಾರ್ವಜನಿಕ ಆಡಳಿತದಲ್ಲಿ ಪ್ರಜೆ -ಪ್ರಭು ಎಂಬುದಕ್ಕಿಂತಲೂ ಸಂಘ ಸಂಸ್ಥೆಗಳ ಪಾತ್ರ ಹೆಚ್ಚಾಗತೊಡಗಿದೆ.ಕಾನೂನಿನ ನೇರ ದಾರಿಗೆ ಒಲಿಯದ ಆಡಳಿತ ಯಂತ್ರ, ಪ್ರತಿಭಟನೆ, ಮುಷ್ಕರ ಮತ್ತು ಪ್ರತಿಕ್ರಿಯೆಗಳಿಗೆ ಬಾಗುತ್ತಿದೆ. ಒಲಿಯುತ್ತಿದೆ.ಇನ್ನೊಂದೆಡೆ ಸರಕಾರೇತರ ಸ್ವಯಂ ಸೇವಾ ಸಂಸ್ಥೆಗಳು ನೀತಿ ರೂಪಣೆಯಲ್ಲಿ, ಜನಾಭಿಪ್ರಾಯ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸತೊಡಗಿವೆ..

"ಈ ಒಂದು ಅವಧಿಗೆ ನಾನು ಸಂಸ್ಥೆಯ ನೇತೃತ್ವ ವಹಿಸಲೇಬೇಕು, ..ಇಲ್ಲವಾದರೆ, ಇದು ತನಕ ಮಾಡಿದ ಕೆಲಸಗಳು ಅಪೂರ್ಣವಾಗುಳಿದು ಬಿಡುತ್ತವೆ.... ಏನೇ ಆದರೂ ಅಧ್ಯಕ್ಷನಾಗದೆ ಕೆಳಗಿಳಿಯಲಾರೆ..'' ಇದು ಸಂಘ -ಸಂಸ್ಥೆಗಳ ಆಡಳಿತದಲ್ಲಿ ಆಗಾಗ ಕೇಳಿ ಬರುವ ಮಾತು .. ಹಾಗಾಗಿ ಎದುರು ಪಂಗಡದವರನ್ನು ಒಲಿಸಿಯೋ ಇಳಿಸಿಯೋ ಅಳಿಸಿಯೋ..ಶತಾಯ ಗತಾಯ ಕುರ್ಚಿ ಉಳಿಸಿಕೊಳ್ಳುವ "ಆಟ' ಕ್ಕೆ ಹಾಗನ್ನುವವರು ಇಳಿದು ಬಿಡುತ್ತಾರೆ.! ಅವರು ಗೆದ್ದು ಬಿಡುತ್ತಾರೆ, ಕುರ್ಚಿ ಅವರೆದುರೇ ಸಣ್ಣದಾಗಿ ಬಿಡುತ್ತ್ತದೆ!

ಒಂದು ಸಂಸ್ಥೆಯ ಆಡಳಿತ ವ್ಯವಸ್ಥೆಯಲ್ಲೋ, ಸಂಘಟನೆಯ ಸಮಿತಿಯಲ್ಲೋ ಇದ್ದೀರೆಂದಾದರೆ, ಅಲ್ಲಿ ಆ ಸಮಿತಿಯ ಎಲ್ಲರಿಗೂ ಒಂದು ಸಹಜ, ಪ್ರಜಾಸತ್ತಾತ್ಮಕ ಧ್ವನಿ ಇರುತ್ತದೆ.. ಅಭಿಪ್ರಾಯ ವ್ಯಕ್ತ ಪಡಿಸಲು, ಸಾಧಕ ಬಾಧಕಗಳ ಸಲಹೆ ಯಾ ಸೂಚನೆ ನೀಡುವುದಕ್ಕಿರುವ ವ್ಯಕ್ತಿಗೆ ಇದು ಸಾಕಾಗುತ್ತದೆ. ಹತ್ತ್ತು ವರ್ಷ ಸಮಿತಿಯಲ್ಲಿದ್ದು ಯಾವ ಬದಲಾವಣೆಯನ್ನೂ ತರಲಾಗದ ವ್ಯಕ್ತಿ , ತಾನು ನಾಯಕತ್ವದ ಮುಂಚೂಣೆಗೆ ಬಂದ ಮಾತ್ರಕ್ಕೆ ಎಲ್ಲ ಬದಲಾವಣೆಗಳಿಗೆ ಕಾರಣನಾಗುತ್ತಾನೆಂದು ನಂಬಬೇಕಾಗಿಲ್ಲ. ಅಧ್ಯಕ್ಷನೋ, ಕಾರ್ಯದರ್ಶಿಯೋ ಉಪಾಧ್ಯಕ್ಷನೋ ಹೀಗೆ ಬಗೆ ಬಗೆ ಹುದ್ದೆಯಲ್ಲಿ ದಶಕಗಳನ್ನೇ ಕಳೆದ ಬಳಿಕವೂ ಸಂಘಟನೆಯ ಒಳಗೇ ಇದ್ದು ಬಿಡುವುದು ,, ಜಾತಿ ಪಂಗಡಗಳ ಓಟ್ ಬ್ಯಾಂಕ್ ಗಳ "ಲೆಕ್ಕಾಚಾರ" ಮಾಡಿ ಟ್ರಸ್ಟಿಯೋ, ಇನ್ನೇನೋ ಆಗಿ ಸಂಸ್ಥೆಯ ಆಡಳಿತದ ಮೇಲೆ ತಮ್ಮ "ಪ್ರಭಾವ' ಬೀರುತ್ತಲೇ ಇರುವುದು , ತಮ್ಮ ಭಾರಕ್ಕೆ ಸಂಸ್ಥೆಯನ್ನು ಜಗ್ಗುತ್ತಲೇ ಇರುವುದು, ಇನ್ನು ಕೆಲವರ ಜಾಯಮಾನ! ಇದು ಎಲ್ಲೆಡೆ, ಬಹುತೇಕ ಸಂಸ್ಥೆಗಳ"ಒಳ' ನೋಟ!

ಹೇಗಾದರೂ ಮುಂಚೂಣಿಗೆ ಬರಲು, ಹಾಗೊಮ್ಮೆ ಕುರ್ಚಿ ಹಿಡಿದ ಬಳಿಕ ಅದನ್ನು ಉಳಿಸಿಕೊಳ್ಳಲು ಹೆಣಗುವ ವರ್ಗ ಒಂದಾದರೆ, ಸಹಜ ಅವ-ಯನ್ನು ಕುರ್ಚಿಯಲ್ಲಿ ಕೂತು "ಕಾರುಬಾರು"ನಡೆಸಿ , ಇಳಿದ ಬಳಿಕವೂ ಸಂಸ್ಥೆಯ ಪಡಸಾಲೆಯಲ್ಲೇ, ಬಿಡಾರ ಹೂಡುವ ನಾಯಕಮಣಿಗಳದ್ದು ಇನ್ನೊಂದು ವರ್ಗ. ತಾವಿಳಿದ ಬಳಿಕ , ತಮ್ಮವರನ್ನು , ತಾವು ಬಯಸುವವರನ್ನು ಅಥವಾ ತಮಗೆ ಬೇಕಾದಂತೆ ನಡೆದುಕೊಳ್ಳುವವರು "ಕುರ್ಚಿ'ಯಲ್ಲಿರುವಂತೆ ನೋಡಿಕೊಳ್ಳುವವರಿವರು! ಒಟ್ಟಾರೆಯಾಗಿ, ಕಾಂಚಾಣದ ಉಸ್ತುವಾರಿ , ಪ್ರಚಾರದ ಬಿಡು ಬೆಳಕು ಅ-ಕಾರದ ಕುರ್ಚಿ ಇವರ ಪಕ್ಕದಲ್ಲೇ ಇರಬೇಕು , ಇದೂ ಒಂದು ರೀತಿಯ ತುರಿಕೆ. ಇವೆಲ್ಲಾ ಕೊನೆಯಲ್ಲಿ ಪರ್ಯವಸನಗೊಳ್ಳುವುದು, ಸಂಘಟನೆಯ ಸೋಲಿನಲ್ಲಿ!

ಈ ಹಿನ್ನಲೆಯಲ್ಲಿ ನೋಡಿದಾಗ, ಸಣ್ಣ ಊರಿನ ಯುವಕ ಮಂಡಲವೊಂದು ಉಂಡು ಎಲೆ ಮಡಿಸಿ ಏಳುವಂತೆ ತನ್ನ ಚಟುವಟಿಕೆಗಳನ್ನು ನಡೆಸುವ ಪರಿಗೆ ಹೆಮ್ಮೆ ಪಟ್ಟಿದ್ದೇನೆ. ವಾರ್ಷಿಕೋತ್ಸವಕ್ಕೆರಡು ತಿಂಗಳಿರುವಂತೆ ಸಭೆ ಸೇರಿ, ಇಡೀ ವರ್ಷ, ಗ್ರಾಮದ ಸಮಸ್ತ ಆಗು ಹೋಗು, ಏರಿಳಿತವನ್ನು ಗಮನಿಸಿ ಆ ನೆಲೆಯಲ್ಲೇ, ಸಮಿತಿ ಸದಸ್ಯರು ಈ ಬಾರಿ ತಾವು ಮಾಡಬೇಕಾದ ವಿಧಾಯಕ ಕಾರ್ಯಗಳದೊಂದು ಯಾದಿ ತಯಾರಿಸುತ್ತಾರೆ. . ಅಲ್ಲಿ ಒಂದಷ್ಟು ಸ್ಪರ್ಧೆಗಳು, ಹಳ್ಳಿಯ ಎಲ್ಲ ವಯೋಮಾನದವರಿಗನ್ವಯವಾಗುವಂತಿರುತ್ತದೆ.ವರ್ಷದುದ್ದಕ್ಕೆ ಪ್ರತಿಭೆ ಮೆರೆದ ಹಳ್ಳಿಯ ಹತ್ತು ಮಕ್ಕಳಿಗೆ ಪ್ರೋತ್ಸಾಹದ ಗರಿ ಯಾಗಬಲ್ಲ ಒಂದಿಷ್ಟು ಬಹುಮಾನಗಳು...ಜೊತೆಗೆ, ಬೆಂಕಿ ಅವಘಡದಲ್ಲಿ ಮನೆ ಕಳಕೊಂಡ ಕುಟುಂಬಕ್ಕೋ, ತೆಂಗು ಅಥವಾ ಕಂಗಿನ ಮರದಿಂದಲೋ ಬಿದ್ದ್ದು ಅಂಗ ವೈಕಲ್ಯಕ್ಕೊಳಗಾದ ಕೂಲಿಯ ಆರೈಕೆಗೋ,, ಆತನ ಅವಲಂಬಿತ ಸಂಸಾರಕ್ಕೆ ಸ್ವಲ್ಪ ಸಾಂತ್ವನ ತರಬಲ್ಲ ಅಗತ್ಯ ವಸ್ತುಗಳ ವಿತರಣೆಗೋ ...ಹೀಗೆ ಕೆಲವು ವಿಚಾರಗಳು ಎಜೆಂಡಾ ದಲ್ಲಿರುತ್ತವೆ. ಮನರಂಜನೆಯ ವಿಭಾಗ ಊರ ಮನೆಯ ಮಕ್ಕಳಿಗೇ ಸೇರಿದ್ದು, ಅದಕ್ಕೊಂದಿಷ್ಟು ಹಣ ಸುರಿವ ಪ್ರಮೇಯವೇ ಬರುವುದಿಲ್ಲ.

ಒಟ್ಟು ಬಜೆಟ್ಟನ್ನೂ , ಅಲ್ಲೇ, ಆ ಕ್ಷಣದಲ್ಲೇ ಯೋಜಿಸಲಾಗುತ್ತದೆ.ಮುಂದೆ, ಗ್ರಾಮದ ಹತ್ತಾರು ಅಂಗಡಿ ಮುಂಗಟ್ಟುಗಳವರು, ತಮ್ಮ ವ್ಯವಹಾರ ಸ್ವರೂಪಕ್ಕನುಗುಣವಾಗಿ, ಬಹುಮಾನವನ್ನು ಪ್ರಯೋಜಿಸಿದರೆ, ಬೇಕಾಗುವ ನಗದನ್ನು, ಸಮಿತಿಯಲ್ಲೇ ಇರುವ ಬೆರಳೆಣಿಕೆಯ ಮಂದಿ , ಸ್ವಲ್ಪ ಧಣಿಕರು ತಮ್ಮ ಪಾಲಿನದೆಂದು ವಹಿಸಿಕೊಳ್ಳುತ್ತಾರೆ. ಹಾಗಂತ ಒಂದು ನಿರ್ದಿಷ್ಟ ಮೊತ್ತಕ್ಕಿಂತ ಹೆಚ್ಚು ದೇಣಿಗೆಯನ್ನು ಯಾರಿಂದಲೂ ಸ್ವೀಕರಿಸುವುದಿಲ್ಲ. ಒಟ್ಟು ದೇಣಿಗೆ ಸಂಗ್ರಹ , ಹಾಕಿಕೊಂಡ ಕಾರ್ಯಕ್ರಮಗಳ ವೆಚ್ಚಕ್ಕಿಂತ ದಾಟಿ ಸಾಗದಂತೆ ನಿಗಾ ವಹಿಸಲಾಗುತ್ತದೆ.ಅರ್ಥಾತ್,ದಾನಿಗಳಾದರೂ ಹೆಚ್ಚು ಉದಾರಿಗಳಾಗದಂತೆ ನೋಡಿಕೊಳ್ಳುವ ಸಂಸ್ಥೆ ಇದೊಂದೇ ಇರಬೇಕು!
ಹೀಗೆ ಕಾರ್ಯಕ್ರಮ ಮುಗಿದಾಗ , ಆಯ ಮತ್ತ್ತು ವ್ಯಯ ಸಮ ಸಮ ಗೊಂಡು ಕೋಶವೆನ್ನುವುದು ಖಾಲಿಯಾಗಿಯೇ ಉಳಿಯುವುದರಿಂದ ಅದನ್ನು ಕಾಯುವುದಕ್ಕಿರುವ ಕೋಶಾ-ಕಾರಿಗೆ, , "ಅಧ್ಯಕ್ಷತೆ' ಯ ಪಟ್ಟದಲ್ಲಿರುವವನಿಗೆ , ಹೇಗಾದರೂ ತಾನೇ ಮುಂದುವರಿಯಬೇಕೆಂಬ ಹಂಬಲ ಉಳಿದಿರುವುದಿಲ್ಲ. ಮತ್ತೆ ಮರು ವರ್ಷ ಹೊಸದೇ ಒಂದು ಸಮಿತಿ.ಹೊಸದಾಗಿಯೇ ಕೋಶ ರಚನೆ. ಹೀಗೆ ಸಂಸ್ಥೆಯೊಂದು ಸ್ಥಾವರವಾಗಿದ್ದೇ ಜಂಗಮವಾಗುಳಿವ ಈ ಪರಿ ನಿಜಕ್ಕೂ ಒಂದು ಮಾದರಿಯಾಗಬಹುದೇನೋ..! ಅಂದ ಹಾಗೆ ಈ ಯುವಕಮಂಡಲವಿರುವುದು ಕಾಸರಗೋಡಿನ ಮಂಜೇಶ್ವರದಲ್ಲಿ.
***
ಕಾಲ ತನ್ನ ಅವಶ್ಯಕತೆಯನ್ನು ಪೂರೈಸಿಕೊಳ್ಳುತ್ತ್ತದೆ. ಮಹಾನ್ ಸೃಜನಶೀಲ, ಕ್ರಿಯಾಶೀಲನೆಂದು ಕೊಂಡವನಿಗೂ , ತನಗೆ ಸರಿಸಮನಾಗಿ ದುಡಿವ ನಾಯಕನ್ಯಾರು ಎಂದು ಕೊಂಡವನಿಗೂ ಬರುವ ನಾಳೆಗಳಲ್ಲಿ ಪರ್ಯಾಯವಿರುತ್ತ್ತದೆ. ಬಹಳಷ್ಟು ಕ್ರಿಯಾಶೀಲತೆಯಿಂದ ಸೇವೆ ಸಲ್ಲಿಸಿದವನಿರಬಹುದು , ತನ್ನ ತನು ಮನ ಧನ ಕೌಶಲ್ಯದಿಂದ ಸಂಸ್ಥೆಯ ಉಛ್ರಾಯಕ್ಕೆ, ಅಭಿವೃದ್ದಿಗೆ ಕಾರಣನಾದವನೇ ಇರಬಹುದು..ತಾನು ಬಂದೆಷ್ಟು ಕಾಲವಾಯಿತೆಂದು ಕೇಳುತ್ತಿರಬೇಕು.! ಇದು ಸಂಘದ , ಸಂಸ್ಥೆಯ , ವ್ಯಕ್ತಿಯ ಆರೋಗ್ಯಕ್ಕೆ ಒಳ್ಳೆಯದು!
***
" ಅಯ್ಯಯ್ಯ ಎಂಚ ಪೊರ್ಲಾಂಡ್ . . .

ಇದೊದು ಅಪವಾದ ಬಹುಕಾಲದಿಂದ ಕರ್ನಾಟಕ ರಾಜ್ಯದ ""ಆಡಳಿತದಲ್ಲಿ ಒಳಗೊಂಡ'' ತುಳುವ ಮಂದಿಯ ಮೇಲಿತ್ತು...ಅದು ಕಟ್ಟಕಡೆಗೂ ನಿವಾರಣೆಯಾಗಿದೆ, ಅವರು ಶಾಪಮುಕ್ತರಾಗಿದ್ದಾರೆ..ಪ್ರಯತ್ನ ಯಾರದೇ ಇರಲಿ..! ತುಳುವ ಮಂದಿಯ ಬಾಹುಳ್ಯವಿರುವ ದ.ಕ . ಮತ್ತು ಉಡುಪಿ ಜಿಲ್ಲಾ ವ್ಯಾಪ್ತಿಯ ಶಾಲಾ ಕಲಿಕೆಯಲ್ಲಿ ಮೂರನೆಯ ಭಾಷೆಯಾಗಿ ತುಳುವನ್ನೂ ಕಲಿವ ಅವಕಾಶವನ್ನು ಕೊನೆಗೂ ಕರ್ನಾಟಕ ಸರಕಾರ ಕರುಣಿಸಿದೆ.ಮೊನ್ನೆ ಮೊನ್ನೆ ವಿಶ್ವ ಮಟ್ಟದ ತುಳು ಸಮ್ಮೇಳನ, ಅದಕ್ಕೂ ಸ್ವಲ್ಪ ಹಿಂದೆ ಕೇರಳ ಸರಕಾರದಿಂದಲೂ ತುಳು ಅಕಾಡೆಮಿ, .ಈಗ ಅ-ಕೃತವಾಗಿ ಮೂರನೆಯ ಕಲಿಕಾ ಭಾಷೆ ..ಹೀಗೆ ಅನ್ನದ ಭಾಷೆಯಾದ, "ಅಣ್ಣ"ನ ಭಾಷೆಯಾದ ತುಳುವಿಗೆ ತಡವಾಗಿಯಾದರೂ "ಶುಕ್ರದೆಸೆ' ಪ್ರಾಪ್ತಿಯಾಗಿದೆ..

ರಾಷ್ಟ್ರ ಮಟ್ಟದ ಶಿಕ್ಷಣ ಸಂಸ್ಥೆಗಳು, ಬ್ಯಾಂಕುಗಳು, ಮಠ ಮಂದಿರಗಳಿದ್ದು...ಆಡಳಿತದ ನೈಪುಣ್ಯಕ್ಕೂ ಖ್ಯಾತಿವೆತ್ತ ಅವಳಿ ಜಿಲ್ಲೆಯಲ್ಲಿ ಶತಮಾನದ ಹಿಂದೆಯೇ ಬಾಸೆಲ್ ಮಿಶನ್ ನಂತಾ ವಿದೇಶೀ ಮಿಶನರಿಯೇ ತುಳುವನ್ನು ಅ-ಕೃತವಾಗಿ ಜನರಿಗೆ ಕಲಿಸಲು ಮುಂದಾಗಿತ್ತೆನ್ನುವಾಗ, ನಾವು , ಬಹಳೇ ಸಮಯ ವ್ಯರ್ಥಮಾಡಿದ್ದ್ದು ಗೋಚರಕ್ಕೆ ಬರುತ್ತದೆ. ಕೊನೆಗಾದರೂ , "ಭರತೇಶ ವೈಭವ" ದ ಕವಿ ರತ್ನಾಕರ ವರ್ಣಿಯ ಆತ್ಮ ಮತ್ತೊಮ್ಮೆ, " ಅಯ್ಯಯ್ಯ ಎಂಚ ಪೊರ್ಲಾ ಂ ಡ್ ..." ಎಂದು ಸಂತಸ ಪಡುತ್ತಿರಬಹುದು.

*******************

Friday, March 26, 2010

ರುಚಿಯೊಂದಿದ್ದರೆ..ಬದುಕಿಗೆ...!

ಒಂದೊಮ್ಮೆ , ಹಸಿದ ಹೊಟ್ಟೆಯನ್ನು ಉಣಿಸಲು, ದೇಹದ ದಣಿವು ತಣಿಸಲು ಹುಟ್ಟಿಕೊಂಡ ಹೊಟೇಲುಗಳು, ಉಪಹಾರ -ವಿಶ್ರಾಂತಿ ಗೃಹಗಳು , ಮುಂದೆ ರಾತ್ರಿ ಹಗಲು ಲತಾಂಗಿಯರು ಮದ್ಯ ಉಣಿಸುವ ಬಾರುಗಳಾಗಿ ರೆಸ್ಟೋರಾಗಳಾಗಿ ಬದಲಾದಾಗ, ಅದನ್ನು ನಮ್ಮ ಪ್ರಗತಿಗೆ ಭಾಷ್ಯವೆದು ತಿಳಿಯಲಾಯಿತು. ಹಳೆಯ ಮಿಲ್ಲುಗಳ ಜಾಗವನ್ನೆಲ್ಲಾ ಮಾಲ್ ಗಳು "ಸಾಮ್ರಾಜ್ಯ"ದಂತೆ ವ್ಯಾಪಿಸಿಕೊಂಡಾಗ ಅದು ಅಭಿವೃದ್ದಿಗೆ ಹೊಚ್ಚ ಹೊಸಾ ವ್ಯಾಖ್ಯಾನವಾಯಿತು. ಮನುಷ್ಯನ ಕೊಳ್ಳುವ ತಾಕತ್ತು ಹೆಚ್ಚಾದಂತೆಲ್ಲಾ "ರುಚಿ"ಯೂ ಬದಲಾಯಿತು. ನಾಲಗೆಯದ್ದಷ್ಟೇ ಅಲ್ಲ, ಬದುಕಿನದ್ದೂ ಕೂಡ ! ನೂರಾರು ಮಹಡಿಗಳ ಕಾಂಕ್ರೀಟು ಕಟ್ಟಡಗಳನ್ನು, ಮೇಲ್ಸೇತುವೆಗಳನ್ನು ನಿರ್ಮಿಸುವುದು , ವಿಶೇಷ ಕಾರಿಡಾರ್ ಗಳನ್ನು ರಚಿಸುವುದು , ಅಥವಾ ಹೊಳೆವ ಗಾಜುಗಳ ಬಿಗ್ ಬಜಾರುಗಳು , ಮಾಲುಗಳನ್ನು ಬಹು ಪರದೆಗಳ ಸಿನಿಮಾ ಥಿಯೇಟರುಗಳನ್ನು ಅಲ್ಲಲ್ಲಿ ಕಟ್ಟಿ ಬಿಡುವುದು ಇವು ಪ್ರಗತಿಯ ಮಾನದಂಡವಾಗುತ್ತಿರುವುದು ಕಂಡು ಬರುತ್ತಿದೆ.

ನಮ್ಮ ಹಳ್ಳಿಗಳ ಕಡೆಗೆ ಹೊರಳಿದರೂ , ಮಠ ಮಂದಿರಗಳೂ ನೆಲದಿಂದ ತಲೆಯ ವರೆಗೆ ಸಿಮೆಂಟಿನಚ್ಚಿನಲ್ಲಿ ಎರಕಗೊಂಡು ಒಂದರ ತದ್ರೂಪ ಇನ್ನೊಂದಾಗಿ ಗೋಚರಿಸುತ್ತಿವೆ. ಅಚ್ಚರಿಯೆಂದರೆ ಹತ್ತಾರು ಕೋಟಿ ವೆಚ್ಚದಲ್ಲಿ ಮೂಲ ಸ್ವರೂಪವನ್ನು ವಿರೂಪಗೊಳಿಸಿ ನಿರ್ಮಾಣಗೊಳ್ಳುವ ಇಂತಾ ಸಿಮೆಂಟು ಸಂಕೀರ್ಣಗಳೂ "ವಾಸ್ತು ಶಾಸ್ತ್ರದ ಪ್ರಗತಿ"ಯಲ್ಲಿ ದಾಖಲಾದವು.. ಎಲ್ಲೋ ಊರ ನಡುವಣ ಪ್ರಶಾಂತ ಜಾಗದಲ್ಲಿದ್ದ ದೇವಸ್ಥಾನಗಳು ಇಗರ್ಜಿ ಗಳು ಹಳ್ಳಿಗಳ ಸಂಜೆಗೊಂದು ವಿಶೇಷ ಅಲೌಖಿಕ ಪರಿಸರವನ್ನು ನಿರ್ಮಾಣ ಮಾಡಿ ಕೊಡುತ್ತಿದ್ದವು . ಕಾರಣ ಅಲ್ಲಿದ್ದ ಮೌನ ಮತ್ತು ಸರಳತೆ . ಕಾಣದ ದೇವರ ಬಗೆಗೆ ಅಷ್ಟಾಗಿ ಚಿಂತಿಸದೆ , ಕಣ್ಣ ಮುಂದಿನ ಬದುಕಿನ ಮೌಲ್ಯ ವರ್ಧನೆಗೇ ಶತಮಾನ ಶ್ರಮಿಸಿದ ಶಿವರಾಮ ಕಾರಂತರು ದೇವಾಲಯಗಳ ಆವರಣಗಳನ್ನು ಇಷ್ಟಪಡುತ್ತಿದ್ದರು . ಪುತ್ತೂರು, ಉಡುಪಿ, ಕುಂದಾಪುರ ಪರಿಸರದ ಅವರ ಚಟುವಟಿಕೆಯ ದಿನಗಳಲ್ಲಿ ಅಲ್ಲಿನ ದೇವಸ್ಥಾನಗಳ ಬಳಿಯೇ ಹೆಚ್ಚಾಗಿ ಮಕ್ಕಳೊಡನೆ ಅವರ ಒಡನಾಟವಿರುತ್ತಿತ್ತು . ಅದೇ ಮಂದಿರ ಮಂದಿರ ಪರಿಸರಗಳೀಗ ವಾಣಿಜ್ಯ ಮಳಿಗೆಗಳಂತೆ ಕಾಣುತ್ತಿವೆ. ಸ್ವಲ್ಪ ಸೂಕ್ಷ್ಮವಾಗಿ ನೋಡಿದರೆ ಅಲ್ಲಿ ನಡೆದ "ಪ್ರಗತಿ" ಕಾರ್ಯಗಳಿಂದ ಮೂಲ ಸೌಂದರ್ಯ ನಷ್ಟವಾಗಿರು ವುದು ಸ್ಪಷ್ಟವಾಗಿ ಗೋಚರಿಸುತ್ತದೆ. ರಫಿ, ಮುಖೇಶ ರ ಹಳೆಯ ಹಾಡುಗಳ ಮೇಲೆ ಇಂಡಿಪಾಪ್ ನ ಸುರುಳಿ ಸುತ್ತಿದ ಹಾಗೆ !
ಒಳಗಿನ ರುಚಿ ಕೆಟ್ಟಾಗ ನಾವು ಈ ರೀತಿಯ ಬದಲಾವಣೆಗೆ ಒಗ್ಗಿಕೊಳ್ಳುತ್ತೇವೆ . ಪ್ರಗತಿಯ ಪಥದಲ್ಲಿ ಎಲ್ಲವೂ ಸರಿ ಎನ್ನತೊಡಗುತ್ತೇವೆ. ಇಷ್ಟಕ್ಕೂ ಕಾರಣ ನಮ್ಮ 'ರುಚಿ" . ರುಚಿ ಕೆಟ್ಟಾಗ ಅಭಿರುಚಿಯೂ ಬದಲಾಗುತ್ತದೆ. ಇಷ್ಟಗಳು ಬದಲಾಗುತ್ತವೆ. ಇದರಿಂದ ನಮ್ಮ ಎಲ್ಲ ರೀತಿಯ ಯೋಚನೆ ಮತ್ತು ಯೋಜನೆಗಳು ಪ್ರಭಾವಗೊಳ್ಳುತ್ತವೆ. ಸಣ್ಣದೊಂದು ಮನೆಯನ್ನು ಕಟ್ಟಿ , ಅದಕ್ಕೊಪ್ಪುವ ಪೀಠೋಪಕರಣಗಳನ್ನು ಆಯ್ಕೆ ಮಾಡುವುದಕ್ಕೂ ಒಂದು ಒಳ್ಳೆಯ ರುಚಿ ಬೇಕಾಗುತ್ತದೆ. ಅದಿಲ್ಲವಾದಾಗ ಆ ಮನೆ ನಮ್ಮ ಸಂಪತ್ತು -ಆಡಂಬರ -ಅಬ್ಬರಗಳ ಪ್ರತಿಫಲನವಾಗಿ ಕಣ್ಣಿಗೆ ರಾಚುವ "ಶೋಕೇಸು"ಗಳಾಗಿ ಬಿಡುತ್ತವೆ. ತರಹೇವಾರಿ ವಸ್ತುಗಳನ್ನೆಲ್ಲಾ ತಂದು ರಾಶಿ ಹಾಕುವ ಉಗ್ರಾಣಗಳಾಗುತ್ತವೆ.

ಇನ್ನು ಮನೆಯ ಒಳ ಹೂರಣವಾನ್ನಾದರೂ ನೋಡಿ.... ಹೆಚ್ಚು ಬೇಡ , ನೀವು ಮಧ್ಯ ವಯಸ್ಕರಾದರೆ, ಮೂವತ್ತು - ನಲವತ್ತು ವರ್ಷ ಗಳ ಹಿಂದಕ್ಕೆ ಹೋಗಿ ನೋಡಿ ಮನೆಯ ಹಜಾರದ ಗೋಡೆಗಂಟಿದ ಚಿತ್ರಗಳಲ್ಲಿ ಅಮ್ಮ ಇರುತ್ತಿದ್ದಳು.. ಜೊತೆಗೆ ಮುಖದ ಪ್ರತಿ ನೆರಿಗೆಯಲ್ಲೂ ಸಂಸಾರದ ರಥವೆಳೆದ ಕಥೆಯನ್ನೇ ಕೆತ್ತಿದ ಅಜ್ಜಿ -ಅಜ್ಜ ಇರುತ್ತಿದ್ದರು...ಕೆಲವೊಮ್ಮೆ ಕಾಲಕ್ಕೂ ಮುನ್ನ ಕಾಲವಶಳಾದ ಅಮ್ಮನ ಜಾಗ ತುಂಬಿ, ಸಲಹಿದ ದೊಡ್ಡಮ್ಮನೋ ಅತ್ತೇಯೋ ಇರುತ್ತಿದ್ದರು.. ಮನೆಯೊಳಗೆ ಬೆಳೆವ ಮಗು ಬಂದವರಿಗೆ " ಗೊತ್ತಾ ಇದು ನಮ್ಮಜ್ಜಿ" ಅಂತ ಗೋಡೆ ತೋರಿಸಿ ತೊದಲಿದಾಗ ಮನೆ ಕಲರವದ ಗುಬ್ಬಿಯ ಗೂಡಾಗುತ್ತಿತ್ತು . ಜೊತೆಗೆ ಇಡೀ ಸಂಸಾರದ ಒಂದಾದರೂ ಫೋಟೋ ಇರುತ್ತಿತ್ತ್ತು . ರುಚಿ ಬದಲಾಗಿದೆ. ಮನೆಯ ತುಂಬ ಮೈಖೆಲ್ ಜಾಕ್ಸನ್ ರಾಕ್ ತಂಡದ , ಸಿಡ್ನಿಗೆ ಹೋದ ಮಹೇಂದ್ರ ದೋಣಿ ತಂಡದ , ಅನಾಮಿಕ ಚಿತ್ರಕಾರನ ಸೆರಾಮಿಕ್ ಚಿತ್ರಗಳಿದ್ದರೂ ಎಲ್ಲೂ ಬದುಕಿಗೊಂದು ರೂಪ ಕೊಟ್ಟ ಅಮ್ಮನ ಸುಳಿವಿಲ್ಲ. ಮಕ್ಕಳೂ ಹಾಗೆಯೇ ಬಿ ಇ , ಎಂಬಿಎ ನಂತರ ಮೈಖೇಲ್ ನ ಅಮೆರಿಕಾಕ್ಕೆ ಮಾರು ಹೋದಷ್ಟು ಅಮ್ಮನ ಭಾರತಕ್ಕೆ ಒಪ್ಪುವುದಿಲ್ಲ. ಆಗ ಅದಕ್ಕೆ "ಬ್ರೈನ್ ಡ್ರೈನ್ " (ಪ್ರತಿಭಾ ಪಲಾಯನ) ಎಂದು ಹೆಸರಿಟ್ಟು ನಾವು ಮಾಡಿದ ತಪ್ಪುಗಳನ್ನು ಮರೆ ಮಾಚಿ ಬಿಡುತ್ತೇವೆ.

ಕೊಳ್ಳುವ ತಾಕತ್ತು ಹೆಚ್ಚಾದಂತೆಲ್ಲಾ "ರುಚಿ" ಯೂ ಬದಲಾಯಿತು. ರುಚಿಯನ್ನನುಸರಿಸಿ ನಮ್ಮ ಆಯ್ಕೆಗಳು ಬದಲಾದವು. ಆಯ್ಕೆಗಳನ್ನನುಸರಿಸಿದ ಜೀವನ ಶೈಲಿಯೇ ಬದಲಾಯಿತು. ನಿಧಾನವಾಗಿ ಅದು ಸುತ್ತಲ ಜಗತ್ತಿನ ಮತ್ತು ಸಹಜೀವಿಗಳ ಕುರಿತಾದ ನಮ್ಮ ಚಿಂತನೆಯ ಮೇಲೂ ಪರಿಣಾಮ ಬೀರಿತು.ಒಂದೊಮ್ಮೆ, ನಾವು ತಿನ್ನುವ ಬಹುತೇಕ ಹಸಿರು -ಹಣ್ಣು ವಸ್ತುಗಳು ನೇರವಾಗಿ ತೋಟ , ಗದ್ದೆಗಳಿಂದ ಮನೆ ಸೇರುತ್ತಿದ್ದವು. ಯಾವ ರಸಾಯನಿಕಗಳ, ತಂಗಳ ಕಾಯ್ದಿರಿಸುವ ಪೆಟ್ಟಿಗೆಯ (ಫ್ರಿಜ್ಜು) ಹಂಗಿಲ್ಲದೆ ನಾವು ಅವುಗಳನ್ನು ತಾಜಾ ತಾಜಾ ಬಳಸುತ್ತಿದ್ದೆವು. ಕನಿಷ್ಟ, ಬೀದಿಯ ಕೊನೆಯ ಅಂಗಡಿಯಿಂದ ಮನೆಯ ನಿತ್ಯ ಬಳಕೆಯ ತರಕಾರಿಗಳನ್ನು ಖರೀದಿಸುತ್ತಿದ್ದಷ್ಟು ಕಾಲ ನಮಗೂ ಭೂಮಿಗೂ ಏನೋ ಸಂಬಂಧವಿರುವುದು ಅರಿವಿಗೆ ಬರುತ್ತಿತ್ತು. ಮೊನ್ನೆ, ಮೊನ್ನೆಯ ವರೆಗೂ ಮನೆಯ ಮಕ್ಕಳು ದಂಟು ಹೆಚ್ಚುವಲ್ಲಿ, ಬೆಂಡೆಯ ತೊಟ್ಟು ತರಿಯುವಲ್ಲಿ ಕೋಡು ಬಿಡಿಸಿ ಕಾಳು ಆಯುವಲ್ಲಿ ಅಮ್ಮನ ಜೊತೆಗೂಡುತ್ತಿದ್ದವು. ಜೊತೆಗೆ ಒಂದು ಪ್ರಶ್ನೆ ಹುಟ್ಟು ತ್ತಿತ್ತು .ಉತ್ತರವಾಗಿ ಒಂದು ಮಾಹಿತಿ ಮಿದುಳಿನ ಕೋಶ ಸೇರುತ್ತಿತ್ತು. ಬದುಕಿನ ರುಚಿ , ಸಹನೆ ಹೆಚ್ಚುತ್ತಿತ್ತು. ದೂರದ ಹಳ್ಳಿಗಾಡಿನ ಕೆಸರು ಗದ್ದೆಯಲ್ಲಿ ದುಡಿದು ತನಗಾಗಿ ಮಾತ್ರವಲ್ಲದೆ ಎಲ್ಲರ ಹೊಟ್ಟೆಗೆ ತಕ್ಕ ಅಹಾರವನ್ನು ಬೆಳೆದ , ಮಣ್ಣಲ್ಲಿ ಜೀವದ ಉಸಿರುಕ್ಕಿಸಿದ ವ್ಯಕ್ತಿಯ ಬಗೆಗೆ ತನ್ನಿಂತ್ತಾನೇ ಮನದಾಳದಲ್ಲೊಂದು ಸಮ್ಮಾನ ಭಾವ ಮೂಡಿ ಘನವಾಗುತ್ತಿತ್ತು .

ಇವೆಲ್ಲಾ ಯಾವ ಟ್ಯೂಶನ್ ಗಳಿಲ್ಲದೆ ನಿತ್ಯ ಬದುಕಿನ ಜೊತೆಗೇ ನಡೆದುಹೋಗುತ್ತಿದ್ದವು.ಆದರೆ ಮಾಲುಗಳು , ಮಾರ್ಟುಗಳಿಂದಲೋ ಆಯ್ದು ತಂದ ನಿರ್ವಾತ ಪ್ಲಾಸ್ಟಿಕ್ ಚೀಲದೊಳಗಿನ ರಾಜ್ಮಾ ಬೀಜಗಳನ್ನು ತಿನ್ನುವ ಮಕ್ಕಳಿಗೆ ಅವು ಫ್ಯಾಕ್ಟರಿಯಲ್ಲಿ ತಯಾರಾದ ಸಿಂಥೆಟಿಕ್ ಪದಾರ್ಥಗಳೋ ಅಥವಾ ನೆಲದಲ್ಲಿ ಬೆಳೆದವುಗಳೋ ಎಂದು ತಿಳಿಯುವುದಕ್ಕಾಗಿಯೂ ಡಿಕ್ಷನರಿಯಲ್ಲೋ, ಕಂಪ್ಯೂಟರ್ ತೆರೆದು "ಗೂಗಲ್" ನಲ್ಲೋ ಹುಡುಕುವ ಸಂದರ್ಭ ಸೃಷ್ಟಿಯಾಗುತ್ತಿದೆ. ನಿಧಾನವಾಗಿ ಅಕ್ಕರೆಯ ಮನೆಯೂಟ ಸವಿಯಲು ಕಷ್ಟವಾಗುತ್ತದೆ, ಮೆಕ್ ಡೊನಾಲ್ಡ್ ಗಳ ಪಿಜ್ಜಾ, ಬರ್ಗರುಗಳೇ ಇಷ್ಟವಾಗು ತ್ತದೆ ಮನೆಗೆ ಬರುವ , ತೆರಳುವ ಹಿರಿಯರ ಕಾಲಿಗೆರಗುವುದಾದರೂ ಅಷ್ಟೇ...ಮೇಲ್ನೋಟಕ್ಕೆ ತೀರಾ ಸಾಂಪ್ರದಾಯಿಕ ಬಳುವಳಿಯೆಂದು ಗೋಚರಿಸಬಹುದು, ಆದರೆ ಅಲ್ಲಿ ಉತ್ಪನ್ನವಾಗುವ ಭಾವದ ಧನಾತ್ಮಕ ಕಂಪನ (ಪೊಸಿಟಿವ್ ವೈಬ್ರೇಶನ್) , ಸದಾಶಯ ಮತ್ತು ಸಂಸ್ಕೃತಿ ವೈಶಿಷ್ಟ್ಯ ನಿಜಕ್ಕೂ ಉದ್ದಾತ್ತವಾದುದು. ಬಗ್ಗಿ ಎರಗುವ ಎಳೆಯನ ವಿಧೇಯತೆ , ಗೌರವ , ಬೆನ್ನು ಪೂಸಿ ಮೇಲೆತ್ತುವ ಹಿರಿಯನ ಸಜ್ಜನಿಕೆ ಸಾತ್ವಿಕ ಭಾವ ಆ ಸಂದರ್ಭಕ್ಕೇ ಒಂದು ಹಿರಿಮೆಯನ್ನು, ಸಂಸ್ಕಾರವನ್ನು ಕೊಟ್ಟು ಬಿಡುತ್ತದೆ.ಎಲ್ಲ ನಾಗರಿಕತೆಗಳಲ್ಲೂ ಇದು ಇದ್ದರೂ ಇದರ ವ್ಯಕ್ತ ಸ್ವರೂಪ (Form) ಮಾತ್ರ ಭಾರತಕ್ಕೇ ವಿಶೇಷವಾದುದು.

ಬೆಳೆವ ಮಗುವೊಂದು ತನ್ನ ಮೊದಲ ಭೌದ್ದಿಕ ಆವರಣವನ್ನು ರೂಪಿಸುವುದು ತಾನು ಬೆಳೆವ ಮನೆಯಿಂದಲೇ.ತನ್ನ ಅಮ್ಮ, ಅಪ್ಪ , ಅಜ್ಜಿ, ಅಜ್ಜ ಹೀಗೆ ತನ್ನ ಬಳಗ , ಕುಟುಂಬದ ಪರಿಚಯದಿಂದಲೇ ಆದರ ಸಹಜೀವನದ , ಸಮಾಜ ಕಲ್ಪನೆಯ ಹಂದರ ಮೈದಳೆಯುತ್ತದೆ. ಅಜ್ಜ -ಆಜ್ಜಿಯರ ಮಾಗಿದ ವಯಸ್ಸು , ಅನುಭವದ ಮಾತು , ವರ್ತನೆ ಜೊತೆಗೆ ಅವರ ವೃದ್ದಾಪ್ಯವನ್ನು ತನ್ನ ಅರಳು ಕಣ್ಣುಗಳಲ್ಲಿ ಕಂಡ ಮಗು ನಿಜವಾಗಿ ಮಾಗುತ್ತದೆ. ಅವರನ್ನು ಆರೈಕೆ ಮಾಡಿದ ತನ್ನ ಅಪ್ಪ - ಅಮ್ಮನ ಬಗೆಗೊಂದು ಗೌರವ ಭಾವ ಬೆಳೆಸಿಕೊಳ್ಳುತದೆ. ವ್ಯಕ್ತಿತ್ವದ ನಿರ್ಮಾಣಕ್ಕೆ ರುಚಿ ಮತ್ತು ಸದಭಿರುಚಿಯೇ ಪಂಚಾಂಗ.
ಬದುಕಿನ ರೀತಿ - ಬದುಕುವ ರೀತಿ, -ಸಂದರ್ಭ- ಪರಿಸರ , ಸವಲತ್ತು - ಅಂತಸ್ತು ಬದಲಾಗಬಹುದು. ಆದರೆ ರುಚಿ ಯೊಂದು ಕೆಟ್ಟು ಹೋಗದಂತೆ ನೋಡಿಕೊಳ್ಳಬೇಕು. ಅದಕ್ಕೇ ಇರಬೇಕು ಹಳೆಯ ತಲೆಮಾರಿಗರ ಮಾತಲ್ಲಿ ಆಗಾಗ "ರುಚಿ" ನಸುಳುತ್ತಿತ್ತು .. ಅವರು ಯರಾದರೊಬ್ಬ ವ್ಯಕ್ತಿಯ ಕುರಿತಾಗಿ, " ಅವನ ಸಂಪತ್ತು - ಅಂತಸ್ತು ಎಲ್ಲ ಸರಿ, ಆದರೆ ಮಾತಿಗೊಂದು ರುಚಿಯಿಲ್ಲ" ಎಂದರೆ ಮತ್ತೆ ಆ ವ್ಯಕಿಯನ್ನು ಭೇಟಿಯಾಗುವ ಮನ ವಾಗುತ್ತಿರಲಿಲ್ಲ.!
********