Showing posts with label .ಏರಿ ನಿಂತವನ ಇಳಿತ..ಹದ ತಪ್ಪಿದರೆ ಪ್ರಪಾತ.... Show all posts
Showing posts with label .ಏರಿ ನಿಂತವನ ಇಳಿತ..ಹದ ತಪ್ಪಿದರೆ ಪ್ರಪಾತ.... Show all posts

Tuesday, March 30, 2010

ಏರಿ ಇಳಿಯುವ ಹೊತ್ತು...


ಬ್ಯಾಂಕಿನ ಸರತಿ ಸಾಲಲ್ಲಿ ನಿಂತಿದ್ದ ಹೊತ್ತು.ಅರುವತ್ತರ ಗಡಿ ಸಮೀಪಿಸಿರಬಹುದಾದ ಅವರೂ ಸಾಲಲ್ಲಿದ್ದರು.ನಿಂತಲ್ಲಿನ "ಬೋರು" ಕಳೆಯಲು ಮಾತು ಶುರುವಿಟ್ಟಿತು.ಅವರು ತಿಂಗಳ "ಪೆನ್ಷನ್" ಹಣ ವಿದ್ಡ್ರಾ ಮಾಡಿಕೊಳ್ಳಲು ಬಂದಿದ್ದರು.ಹೇಳುವುದಕ್ಕಿದ್ದ ನಾಲಗೆಗೆ ಕೇಳುವ ಕಿವಿ ಸಿಕ್ಕರೆ ಸಾಕೆಂಬಂತೆ, ಅವರ ಮಾತು, ಕುಟುಂಬ , ಮಕ್ಕಳು ಎಂಬಂತೆ ಸಾಗಿತು. ನಡುವೆ ಎಲ್ಲೋ ಮಾತು ನಿಲ್ಲಿಸಿ ಆ ಹಿರಿಯರು ಉಗುಳು ನುಂಗಿದರು."ನನ್ನ ಈ ಪೆನ್ಶನ್ ಮೊತ್ತ್ತ ಏನೇನೂ ಅಲ್ಲ, ಮಗಳು ಮನೆಗೆ ತರುತ್ತ್ತಿರುವ ಆರಂಕಿ ಸಂಬಳದ ಮುಂದೆ, ಇದು ಜುಜುಬಿ ಎಂದು ಮ್ಲಾನವದನರಾದರು. ವಿಚಾರಿಸಿದಾಗ , ನಿವೃತ್ತಿಗೆ ಮುಂಚೆ ಸರ್ಕಾರದ ಸೇವೆಯಲ್ಲಿದ್ದು, ಒಳ್ಳೆಯ ಮೊತ್ತವನ್ನೇ, ಸಂಬಳವಾಗಿ ಪಡೆಯುತ್ತ್ತಿದ್ದವರು. ಮಕ್ಕಳ ವಿದ್ಯಾಭ್ಯಾಸ , ಸ್ವಂತ ಮನೆ ಎಲ್ಲ ಅದರಲ್ಲೇ ಸಾಧ್ಯವಾಗಿತ್ತು . ಆದರೆ ಈಗಿನ ಐಟಿ/ಕಾರ್ಪೋರೇಟ್ ನೌಕರಿ ತರುವ ಪ್ಯಾಕೇಜ್ ಸಂಬಳದ ಮುಂದೆ ಅದು ಸಣ್ಣ ಮೊತ್ತ್ತವಾಗಿತ್ತು ಅಷ್ಟೇ.ಅವರದೀಗ ಬದುಕಿನ ಇಳಿ ಹೊತ್ತು. ಏರಿ - ಇಳಿದ ಹೊತ್ತು..ಅವರಿಗೆ ತಮ್ಮದೇ ಮಗಳ ಜೊತೆಗೊಂದು ಸ್ಪರ್ಧೆ, ಈರ್ಷೆ ಹುಟ್ಟಿತ್ತು!

***

ಬದುಕು ನಿರಂತರ ಒಂದಲ್ಲ ಒಂದು ರೀತಿಯಲ್ಲಿ ಏರುವ ಯತ್ನ, ಬೆಳಗಾತ ಮೂಡುವ ನೇಸರಿನ ಹಾಗೆ !ಹುಡುಗ, ವಿವಿಧ ತರಗತಿಗಳನ್ನೇರುತ್ತಾ ಸಾಗುವುದು, ಪದವಿಗಳನ್ನು ಹುದ್ದೆಗಳನ್ನು ಏರುತ್ತಾ ಸಾಗುವುದು. ರಾಜ್ಯ ಸರ್ಕ್ಯೂಟಿನಲ್ಲಿ ಆಡಿದ ಅಥ್ಲೆಟ್ ರಾಷ್ಟ್ರಿಯ ಹಂತಕ್ಕೇರುವುದು, ರಣಜಿಯಲ್ಲಿ ಆಡಿದ "ಸ್ಥಿರತೆಯ' ಆಟಗಾರ, ಮುಂದೆ ಟೆಸ್ಟ್ ತಂಡದ ನಂಬರ್ ವನ್ ದಾಂಡಿಗನ ಸ್ಥಾನಕ್ಕ್ಕೇರುವುದು, ಮೊದಲನೆಯ ಕವನ ಸಂಕಲನದಲ್ಲಿ ಭರವಸೆ ಹುಟ್ಟಿಸಿದ ಕವಯಿತ್ರಿ ರಾಜ್ಯ ಅಕಾಡೆಮಿ ಪುರಸ್ಕಾರಕ್ಕೆ ದಿಟ್ಟಿ ನೆಡುವುದು, ಅಥವಾ ವೇಟರ್ ಆಗಿರುವ ಹೊಟೇಲು ಮಾಣಿ, ಮ್ಯಾನೇಜರ್ ಆಗಿ ಮುಂದೆ ಹೊಟೇಲು "ಮಾಲಕ'ನ ಸ್ದ್ತಾನಕ್ಕೇರುವುದು, ವ್ಯಕ್ತಿಯ ಪ್ರಯತ್ನ -ಸಾಮರ್ಥ್ಯ, ಕೌಶಲ್ಯ , ಪ್ರತಿಭೆ ವ್ಯಕ್ತಗೊಳ್ಳುವ ಎಲ್ಲ ವಿಭಾಗಗಳು ಇಲ್ಲಿ ಸೇರುತ್ತವೆ. ಸ್ಪರ್ಧೆ, ಪೈಪೋಟಿ , ಪರೀಕ್ಷೆ ಎಲ್ಲ ಈ "ಏರುವಿಕೆ" ಗಾಗಿ ಬಳಸುವ ಏಣಿಗಳು. ಏರಿ ನಿಂತಲ್ಲಿ ಸ್ಥಾಪಿತರಾಗಿರಬೇಕೆಂಬ ಮತ್ತೊಂದು ಹಂಬಲದಲ್ಲಿ ಮಗದೊಂದಷ್ಟು ಸ್ಪರ್ಧೆಗಳು.

ಏರುವ ಯತ್ನ, ಎಷ್ಟು ಶಕ್ತಿಯುತವಾಗಿ, ಕೌಶಲ್ಯಪೂರ್ಣವಾಗಿ, ಪರಿಶ್ರಮಪೂರ್ವಕವಾಗಿದ್ದರೂ ಅದು ಇಳಿವ ಹೊತ್ತಿಗೆ ಕಟ್ಟುವ ಸುಂಕವಾಗುವುದಿಲ್ಲ.ಸೇಫ್ ಡೆಪಾಸಿಟ್ಟೂ ಆಗುವುದಿಲ್ಲ.ಆದ್ದರಿಂದಲೆ, ಇಳಿವ ಹೊತ್ತಿಗೆ ಪರ್ಯಾಯವಿರುವುದಿಲ್ಲ! ಹಾಗೇ, ಈ ಏರುವ ಬಯಕೆ ಇದೆಯಲ್ಲ್ಲಾ , ಅದಕ್ಕೆ ಫುಲ್ ಸ್ಟಾಪು ಗಳೇ ಇರುವುದಿಲ್ಲ.ಆದರೆ ವ್ಯಕ್ತಿಯ ಕೌಶಲ್ಯ , ಪಕ್ವತೆ ಗೆ ಪರೀಕ್ಷೆ ಒದಗುವುದು ಏರುವುದರಲ್ಲರಲ್ಲ, ಏರಿ ನಿಲ್ಲುವ ಸ್ಥಿತಿ ಮತ್ತು ಏರಿ ಇಳಿವ ಅನಿವಾರ್ಯವನ್ನು ಸಮಭಾವದಿಂದ ನಿಭಾಯಿಸುವುದರಲ್ಲಿ.

ಸಾಧನೆಯ ನಿರಂತರತೆಯನ್ನು ಕಾಪಾಡಿಕೊಳ್ಳುವುದು, ಕೆಲವೊಮ್ಮೆ ಮುಂದಿನ ಪೀಳಿಗೆಗೆ ಅದನ್ನು ದಾಟಿಸುವುದೂ ಕೂಡಾ ಏರಿ ನಿಂತವನ, ಗೆದ್ದು ನಗೆಬೀರಿದವನ ಮಂದಿರುವ ಸವಾಲಾಗಿರುತ್ತದೆ. ಅಥವಾ ಹಾಗೆಂದು ಆತ ಭಾವಿಸಿರುತ್ತ್ತಾನೆ.ಅದರಲ್ಲೂ, ಗುರಿ ಸಾಧಿಸಿ , ಇನ್ನು ಸಾಕೆಂದು ವಿರಮಿಸ ಹೊರಟಾಗ, ನಿಜವಾದ ಕಷ್ಟ ಎದುರಾಗುತ್ತದೆ. ಸ್ಟಾರ್ ಪಟ್ಟಕೇರಿ , ಜನಪ್ರಿಯತೆಯ ತುತ್ತತುದಿಯಲ್ಲಿ ನಿವೃತ್ತನಾಗ ಹೊರಡುವ ಕ್ರೀಡಾಪಟು, ಓರ್ವ ನಟ, ನಿರ್ದೇಶಕ ಎಷ್ಟೋ ಬಾರಿ, "ಶತಾಯಗತಾಯ' ಅಲ್ಲಿ ಉಳಿಯಲು ಯತ್ನಿಸುತ್ತಾನೆ.ಅದಾಗದೆ ಹೋದಾಗ ಮಕ್ಕಳಿಗೆ ಅವಕಾಶ ಕಲ್ಪಿಸಿ, ಅವರ ಮೂಲಕ ತಾನು ಮುಂದುವರಿಯ ಬಯಸುತ್ತಾನೆ. ಬಹುಶಹಾ ಇದೂ ,"ಐಡೆಂಟಿಟಿ ಕ್ರೈಸಿಸ್' ನ ನಿರುವಹಣೆಯ ಭಾಗವಿರಬಹುದೇನೋ ? ಇದೆರಡೂ ಸಾಧ್ಯವಾಗದ ಬಹುತೇಕ ಮಂದಿ " ಇಳಿವ' ಸ್ಥಿತಿಯನ್ನು ಬಹಳ ಕೆಟ್ಟದಾಗಿ ನಿರುವಹಿಸಿ ಬಿಡುತ್ತಾರೆ. ಕೆಲ ವರ್ಷಗಳ ಹಿಂದೆ, ಮಹಾರಾಷ್ಟ್ರದಲ್ಲಿ ವಿಶ್ವ ವಿದ್ಯಾಲಯಗಳು, ಸುಧಾರಣಾ ಕ್ರಮವೊಂದನ್ನು ಕೈಗೊಂಡವು.ಇದರತೆ ವಿಭಾಗ ಮುಖ್ಯಸ್ಥರ "ಹುದ್ದೆ' ಆ ವಿಭಾಗದ ಎಲ್ಲ ಪ್ರಾಧ್ಯಾಪಕ ಸಿಬ್ಬಂದಿಯ ಮಧ್ಯೆ ಸೀನಿಯರ್, ಜ್ಯೂನಿಯರ್ ಭೇದವಿಲ್ಲದೆ, "ಪರ್ಯಾಯ' ಕ್ಕೊಳಪಟ್ಟಿತು.ನಿನ್ನೆಯ ವರೆಗೆ ತಾವಿದ್ದ ಮುಖ್ಯಸ್ಥ ಹುದ್ದೆಯಿಂದ ಕೆಳಗಿಳಿದು, ತನ್ನದೇ ವಿಭಾಗದ ಕಿರಿಯನ ಕೈ ಕೆಳಗೆ ಕೆಲಸ ಮಾಡಲಾಗದೆ,"ಕಿರಿಕಿರಿ'ಗೊಳಗಾದ ಬಹಳಷ್ಟು ಹಿರಿಯ ಪ್ರಾಧ್ಯಾಪಕರು ಹುದ್ದೆ ಬಿಟ್ಟು ನಡೆದ ಪ್ರಸಂಗವೂ ಎದುರಾಯಿತು. ವೃತ್ತಿ ಜೀವನದ "ಇಳಿತ'ವನ್ನು ನಿಭಾಯಿಸುವುದು ಅಷ್ಟು ಸುಲಭದ ಮಾತಲ್ಲ.

ಇದು ಶೈಕ್ಷಣಿಕ ವಲಯದ ಮಾತಾಯಿತು. ಇನ್ನು, ದೇಶದೆಲ್ಲೆಡೆ ಭೂ ಸುಧಾರಣೆಯ "ಸಮಾಜ ಮಥನ ' ನಡೆದಾಗ, ನಿನ್ನೆಯವರೆಗೆ ಧಣಿಗಳಾಗಿದ್ದವರನೇಕರು, ನಿರ್ಗತಿಕರೂ ಆದದ್ದುಂಟು. ಊರಿಗೇ ಬಂದ ಕಾನೂನಿನ ಕತ್ತಿಯಲುಗಿಗೆ ಸಿಲುಕಿ, ಅರ್ಥಿಕವಾಗಿ, ಸಾಮಾಜಿಕವಾಗಿ ಇಳಿದು ಹೋದ ಅವರಲ್ಲನೇಕರಿಗೆ ಈ ಸ್ಥಿತಿಯಿಂದ ಹೊರಬರುವುದು ಸಾಧ್ಯವಾಗದೆ , ಸಾವಿನ ದಾರಿ ತುಳಿದದ್ದೂ ಇತ್ತು. ಇಂತಹಾ ಸ್ಥಿತಿಯಲ್ಲಿ ಬಾಳಲಾರದೆ, ದಕ ಜಿಲ್ಲೆಯ ಬಂಟ್ವಾಳದ ಬ್ರಾಹ್ಮಣರ ಕುಟುಂಬವೊಂದು, ಸಂಪೂರ್ಣ ಆತ್ಮಹತ್ಯೆಗೆ ಶರಣಾಯಿತು. ಇದೇ ರೀತಿ, ಮಹಾರಾಷ್ಟ್ರದ ಹೊಟೇಲು ವ್ಯವಸಾಯದಲ್ಲೂ ಒಮ್ಮೆ ನಡೆದು ಹೋಯಿತು. ಯಾವ ಹಂಗೂ ಇಲ್ಲದೆ, ಮುಕ್ತವಾಗಿ ನಡೆಯುತ್ತಿದ್ದ "ಲೇಡೀಸ್ ಬಾರು" ಗಳಿಗೆ ಸರಕಾರ ನಿಷೇಧ ಹೇರಿದಾಗ, ಅಲ್ಲಿ ಹುಟ್ಟುತ್ತಿದ್ದ ವಿಪುಲ ಆದಾಯದಲ್ಲೇ, ಕೈಯ ಎಂಟು ಬೆರಳಿಗೆ ಉಂಗುರ ತೊಡುತ್ತಿದ್ದ ಅನೇಕ ಕನ್ನಡಿಗ ಯುವ ಹೋಟೇಲಿಗರಿಗೆ ಮೊಗೆವ ಕೆರೆಯಲ್ಲೇ, ನೀರು ಬತ್ತಿ ಹೋದ ಅನುಭವ! ಮಾನಸಿಕ ಜರ್ಜರಿತ , ಆರ್ಥಿಕ ಕುಸಿತದಿಂದಾಗಿ, ಹಲವು ಯುವ ಉದ್ಯಮಿಗಳು ಹೇಳಹೆಸರಿಲ್ಲದಾಗಿ ಹೋದರು.ಇಂತದ್ದೊಂದು ಸ್ಥಿತಿಯನ್ನು ನಿಭಾಯಿಸಲು ಅವರೆಂದೂ ಅಣಿಯಾಗೇ ಇರಲಿಲ್ಲ.

ಇಪ್ಪತ್ತೈದು, ಮೂವತ್ತು ವರ್ಷಗಳ ಹಿಂದಿನ ಕ್ರಿಕೆಟ್ ಪಂದ್ಯಾವಳಿಗಳಿಗೆ ಇವತ್ತಿನ ಗ್ಲಾಮರ್ ಇರಲಿಲ್ಲ. ಆದರೆ ಹೆಚ್ಚಿನ ಸಭ್ಯತೆ ಇತ್ತು. ಆಟಗಾರನೊಬ್ಬ ತನ್ನ "ಫಾರ್ಮ್' ನಿಂದ ಇಳಿದ ಬಳಿಕ ತಂಡದ ಆಯ್ಕೆ ಸಮಿತಿಯ"ಲಾತ್" ಗಾಗಿ ಕಾಯದೆ , ತಾನಾಗಿಯೇ ವಿರಮಿಸುತ್ತಿದ್ದ ದಿನಗಳವು.ಅಂತಾ ಎಪ್ಪತ್ತು -ಎಂಭತ್ತರ ದಶಕದ ಮಧ್ಯೆ ಭಾರತೀಯ ಕ್ರಿಕೆಟ್ಟಿಟ್ಟನ್ನು ಆಧರಿಸುತ್ತಿದ್ದ ಒಬ್ಬ ಆಟಗಾರ ಕರ್ಸನ್ ಘಾವ್ರಿ. ಎಡಗೈಯಿಂದ ಮಧ್ಯಮ ವೇಗದಲ್ಲಿ ಬೌಲಿಂಗ್ ನಡೆಸಿ ಒಳ್ಳೆಯ "ವಿಕೆಟ್ ಫಸಲು' ತೆಗೆಯುತ್ತಿದ್ದ .ಜೊತೆಗೆ,ಬಾಲಂಗೋಚಿ ಸರದಿಯಲ್ಲಿ ಉತ್ತಮ ಬ್ಯಾಟಿಂಗ್ ನಡೆಸುತ್ತಿದ್ದುದರಿಂದ , ತಂಡ ಆತನ "ಸವ್ಯಸಾಚಿತ್ವ'ದ ಲಾಭ ಪಡೆದಿತ್ತು.ಪಂದ್ಯವೊಂದರ ನಡುವೆ, ರನ್ನಿಂಗ್ ಕಾಮೆಂಟರಿ ನೀಡುತ್ತಿದ್ದ ವಿವರಣೆಕಾರ,"ಘಾವ್ರಿಯವರಿಗೆ ಇದೇ ಕೊನೆಯ ಪಂದ್ಯ' ವೆಂದು ಘೋಷಿಸಿ ಬಿಟ್ಟರು.. ಒಳ್ಳೆಯ ಫಾರ್ಮ್ ನಲ್ಲಿದ್ದ, ಘಾವ್ರಿ ಹೀಗೇಕೆ ಮಾಡಿದರು ? ಇದು ಆ ದಿನಗಳ ಕ್ರಿಕೆಟ್ ಪ್ರಿಯರ ಕಳವಳದ ಪ್ರಶ್ನೆಯಾಗಿತ್ತು. ಮರುದಿನದ ಸುದ್ದಿಗೋಷ್ಟಿಯಲ್ಲಿ, ಘಾವ್ರಿ ನುಡಿದ ಮಾತು ಎಲ್ಲ ಕಾಲಕ್ಕೆ, ಎಲ್ಲ ರಂಗಗಳಿಗೆ ಅನ್ವಯಿಸುವಂತಾದ್ದು . " ನಾನು ಫಾರ್ಮ್ ನಲ್ಲಿ ಸಾಗುತ್ತಿದ್ದೇನೆ ನಿಜ, ಫಾರ್ಮ್ ಕಳಕೊಂಡು ಇಳಿದು ಬಿಡುವುದಕ್ಕಿಂತ, ನೀವೆಲ್ಲಾ, "ಯಾಕೆ, ಈಗ ಯಾಕೆ, ಎಂದು ಕೇಳುವ ಈ ಕಾಲವೇ ನಿವೃತ್ತಿಗೆ ಸಕಾಲವೆಂದು ಭಾವಿಸುವೆ...''.ಇದು ಘಾವ್ರಿಯಂತವರಷ್ಟೇ ಹೇಳಬಲ್ಲ ಮಾತು.

***

ವಿಶ್ವ ಟೆನ್ನಿಸ್ ಕ್ಷಿತಿಜದ ಮಹಾನ್ ಆಟಗಾರ ಪೀಟ್ ಸಾಂಪ್ರಾಸ್. ಹದಿನೈದು ವರ್ಷಗಳ ಟೆನ್ನಿಸ್ ಬಾಳ್ವೆಯಲ್ಲಿ ಹದಿನಾಲ್ಕು ಬಾರಿ ಗ್ರಾಂಡ್ ಸ್ಲಾಮ್ ಚಾಂಪ್ಯನ್ ಶಿಪ್ ಗೆದ್ದು ವಿಶ್ವದ ಟೆನ್ನಿಸ್ ಅಚ್ಚರಿಗಳ ಸಾಲಿಗೆ ಸೇರಿ ದಂತಕಥೆಯಾದ -ಈರ.ಅದರಲ್ಲೂ, ಸತತ ಎಂಟು ಬಾರಿ ಗ್ರಾಂಡ್ ಸ್ಲಾಮ್ , ಸತತ ಏಳು ಬಾರಿಯ ವಿಂಬಲ್ಡನ್ ಗೆದ್ದ "ಏಕಚಕ್ರಾ-ಪತಿ'ಯ ಈ ಎರಡು ವಿಭಾಗಗಳ ಗೆಲುವನ್ನು ಇನ್ನೂ ಯಾರೂ ಸರಿ ಗಟ್ಟಿಲ್ಲ. ಸತತ ಎಂಟು ವರ್ಷ ವಿಶ್ವ ಟೆನಿಸ್ ರ್ಯಾಂಕಿಂಗ್ ನ ತುತ್ತ ತುದಿಯಾದ ನಂಬರ್ 1 ಸ್ಥಾನದಲ್ಲಿದ್ದ ಪೀಟ್ ಗೆ ಬಿಬಿಸಿ ಸುದ್ದಿಗಾರ್ತಿಯೊಬ್ಬಳು ಕೇಳಿದ ಪ್ರಶ್ನೆ., "ಪೀಟ್, ಯೂ ಆರ್ ನಂಬರ್ ವನ್, ವಾಟ್ ನೆಕ್ಸ್ ಟ್ ? '(ನೀವು ನಂಬರ್ ವನ್ ಆಟಗಾರ, ಮುಂದೇನು?) "ವೆನ್ ಯೂ ಆರ್ ಇನ್ ದ ಪೀಕ್ , ದಿ ಓನ್ಲಿ ಪಾಸಿಬಲ್ ಮೂವ್ ಮೆಂಟ್ ಈಸ್ ಫಾಲಿಂಗ್ ಡೌನ್....!! (ತುತ್ತ ತುದಿಗೇರಿದ ಬಳಿಕ , ಇನ್ನೊಂದೇ ಸಾಧ್ಯತೆ..ಕೆಳಕ್ಕೆ ಜಾರುವುದು) ಇದು ಪೀಟ್ ಕೊಟ್ಟ ಉತ್ತರ. ಎತ್ತರಕ್ಕೆ ಏರಿದವರೆಲ್ಲ ಮನನ ಮಾಡಬೇಕಾದ ವಿಚಾರ.

***