Friday, March 26, 2010

ನುಡಿ ಸೇವಕನಿಗೊಂದು ಹಿಡಿ ನಮನ...

ವ್ಯಕ್ತಿಯೊಬ್ಬ ಹಾಗೆ ನಿಮ್ಮೆದುರು ಬಂದು ಮಾತಿಗೆ ಶುರುವಿಟ್ಟನೆಂದರೆ, ಗೊತ್ತಿಲ್ಲದೆಯೇ ಆತನ ವ್ಯಕ್ತಿತ್ವದ ಫೋಲ್ಡರೊಂದು ನಿಮ್ಮ ಮೆದುಳಿನ ಒಳ ಕೋಶದಲ್ಲೆಲ್ಲೋ ಛಾಪಿಸತೊಡಗುತ್ತದೆ., ಆಲ್ಲಿ ಆತನ ನಗೆ ಯಿಂದ ತೊಡಗಿ, ನಿಲ್ಲುವ ನಿಲುವು, ಅಂಗಿಯ ಇಸ್ತ್ರಿ, ಆಡುವ ಮಾತಿನ ಭಂಗಿ, ನೊಡುವ ನೋಟ, ಮುಖದ ಕಣ್ಣ ಪಾಪೆಯಿಂದ ಹೊರ ಸೂಸುವ ಕಾಂತಿ ಹೀಗೆ ಹತ್ತಾರು ಅಂಶಗಳು ದಾಖಲಾಗಿ ಬಿಡುತ್ತವೆ. ಬಹುಷ ಇದಕ್ಕೇ ನಾವು ಆಂಗ್ಲ ಭಾಷೆಯಲ್ಲಿ "ಫಸ್ಟ್ ಇಂಪ್ರೆಶನ್ " ಅನ್ನುತ್ತೇವೆ. ಬಹುತೇಕ ಈ ಫೋಲ್ದರ್ ರೂಪದಲ್ಲಿ ದೊರೆವ "ವ್ಯಕ್ತಿ ಚಿತ್ರ" ನಂಬುವಂತಾದ್ದೇ ಆದರೂ ಕೆಲವೊಂದು ಬಾರಿ ಇದನ್ನೇ ನಂಬಿ ಬೆಸ್ತು ನಾವು ಬೀಳುವುದೂ ಇದೆ.

""..ಹೌದೇ, ಅವರು ಹೋದರೇ, ಇಷ್ಟು ಬೇಗ.. ಏನಾಗಿತ್ತು ಅವರಿಗೆ .."" ಎಂದು ಜನ ಕೇಳುವಂತಾ 62ರ ವಯಸ್ಸಿನಲ್ಲಿ , ನಿನ್ನೆ ನಿರ್ಗಮಿಸಿದ ಉಳ್ಳೂರುಗುತ್ತು ವಾಮನ ಶೆಟ್ಟರ ಕುರಿತಾಗಿ ಯೋಚಿಸುವಾಗ , ಸರಿ ಸುಮಾರು ಒಂದೂವರೆ ದಶಕದ ಹಿಂದೆ ಮೊದಲಾಗಿ ವೇದಿಕೆಯ ಮೇಲಿಂದ ಭಾಷಣವೊಂದನ್ನು ನೀಡುತ್ತಾ ಪರಿಚಯವಾದಾಗ ಮೊದಲ ನೋಟದ ವ್ಯಕ್ತಿತ್ವ ನಂಬಲೇಬೇಕಾದ್ದೇನು ಅಲ್ಲ ಎಂಬ ವಿಚಾರ ನಿಚ್ಚಳವಾಯಿತು.

ಪತ್ರಿಕೆಗಳು ತಮ್ಮ ವರದಿಗಳಲ್ಲಿ ಅವರಿಗೆ ಶಿಕ್ಷಣ ತಜ್ಞ ವಿಜ್ಞಾನಿ ಎಂಬ ವಿಶೇಷಣಗಳನ್ನು ನೀಡುತ್ತಿದ್ದವು. ಹಾಗೆ ನೋಡಿದರೆ, ಅವರೇನೂ ಶಿಕ್ಷಣ ಕ್ಷೇತ್ರದಲ್ಲೋ , ಪರಿಸರ ಅಥವಾ ವಿಜ್ಞಾನದ ವಿಷಯದಲ್ಲೋ ಅಂಥಾ ಪರಿಣತರಾಗಿರಲಿಲ್ಲ. ಆದರೆ ತಿಳಿದವರನ್ನು ಗೌರವಿಸುವ ಸರಳತೆ, ವಿನಯ ಇವರಲ್ಲಿತ್ತು. ಎಲ್ಲ ವಿಚಾರಗಳಲ್ಲೂ ಸಾಮಾನ್ಯ ಜ್ಞಾನವನ್ನು ರೂಢಿಸಿಟ್ಟುವ ಕೊಳ್ಳುವ ಜಾಯಮಾನ ಅವರಲ್ಲಿತ್ತು. ಹಾಗಾಗಿ ಅವರಿಗೆ ವಿಜ್ಞಾನದ ಒಗಟುಗಳ ಬಗೆಗೆ, ಸುತ್ತಲ ಪರಿಸರದ ಬಗೆಗೆ, ಶಿಕ್ಷಣದ ಬಗೆಗೆ ತನ್ನದಾದ ಸ್ಪಷ್ಟ ನಿಲುವೊಂದಿತ್ತು. ಕಾರ್ಖಾನೆಗಳ ಮಾಲೀಕರಾಗಿ "ಧಣಿ"ಯ ಅಂತಸ್ತಿದ್ದರೂ ತನ್ನ ಶಾಲೆಯಲ್ಲಿ ಗುಮಾಸ್ತರಾಗಿ, ಮಾಸ್ತರರಾಗಿ ದುಡಿವ ಸಿಬ್ಬಂದಿಯ ಸಾಹಿತ್ಯ ಪ್ರೀತಿಯನ್ನು ಗುರುತಿಸಿ ಪ್ರೋತ್ಸಾಹಿಸುವ, ಗೌರವಿಸುವ ಸಂಸ್ಕಾರ ವಿತ್ತು. ಮಹಾರಾಷ್ಟ್ರದ ಮುಖ್ಯ ಜಿಲ್ಲೆಗಳಲ್ಲೊಂದಾದ ಥಾಣೆಯ ಮಾಜಿವಾಡದಲ್ಲಿ ಕನ್ನಡಿಗರ ಶಾಲೆಯೊಂದನ್ನು ""ಕನ್ನಡ ಶಿಕ್ಷಣ ಕೊಡುವ ಶಾಲೆ "" ಯನ್ನಾಗಿಯೇ ಉಳಿಸಿಕೊಳ್ಳುವ ಹಟ, ಉಳಿಸಿಕೊಂಡ ಕೆಚ್ಚು ಅವರಲ್ಲಿತ್ತು.

ರಾಸಾಯನಿಕ ಪದಾರ್ಥಗಳನ್ನು ತಯಾರಿಸುವ ಉದ್ಯಮದಿಂದ ಕನ್ನಡದ ಕೈಂಕರ್ಯಕ್ಕಿಳಿದ ನುಡಿ ಸೇವೆಯ ಆರಂಭದ ದಿನಗಳ ಅವರ ಮಾತುಗಳಲ್ಲಿ ಕೌಶಲ್ಯಕ್ಕಿಂತಲೂ ಹೆಚ್ಚು ಉದ್ವೇಗವಿರುತ್ತಿತ್ತು... 90 ರ ದಶಕದ ಕೊನೇ ಭಾಗದಲ್ಲಿ, ಡೊಂಬಿವಲಿಯ ಕರ್ನಾಟಕ ಸಂಘದ ಆಶ್ರಯದಲ್ಲಿ ನಡೆದ ಮುಂಬಯಿ ಕನ್ನಡದ ಕುರಿತಾದ ಅವರ ಮಾತಿನ ಕೊನೆಯಲ್ಲಿ , ಕಿವಿಯಲ್ಲಿ . "" ನಿಮಗೆ ಕಟ್ಟುವ ಹಟ, ಉಮೇದು, ಉತ್ಸಾಹವಿದೆ.. ಆದರೆ ಮಾತಿನಲ್ಲಿ ಉದ್ವೇಗ ವಿರದಂತೆ ನೋಡಿಕೊಳ್ಳಿ.ಹಾಗಾಗದಿದ್ದರೆ , ವಿಚಾರಗಳು ಆವೇಶದ ಒಯ್ಲಿನಲ್ಲಿ ಕೊಚ್ಚಿ ಹೋಗುತ್ತದೆ.." ಅಂದಿದ್ದೆ. ಅವರು ನಕ್ಕು ತಲೆಯಾಡಿಸಿದ್ದರು. ಕನ್ನಡದಲ್ಲಿ ಪತ್ರಿಕೆಗಳಿಗೆ ಬರೆಯುವ ಪ್ರಯತ್ನ ಅವರು ಮಾಡಿದ್ದರು . ಉದ್ವೇಗ , ಆವೇಶಗಳಿಂದ ಕನ್ನ್ನಡದ ವೇದಿಕೆಗಳಲ್ಲಿ ಆಗಾಗ ಮಾತಾಡುತ್ತಿದ್ದರು. ಆದರೆ, ಅಲ್ಲಿ ಸಿಗದ ಪ್ರಭುತ್ವವನ್ನು ಕನ್ನಡ ಭಾಷಾ ಶಿಕ್ಷಣದ ಮೇಲಿನ ಅದಮ್ಯ ಪ್ರೀತಿ, ಅಭಿಮಾನಗಳ ಮೂಲಕ ಸರಿದೂಗಿಸಿದ್ದರು. ಒಳ್ಳೆಯ , "ಆಡಳಿತದ ಚುಕ್ಕಾಣಿ ಹಿಡಿದ ಮಂದಿಯೂ"" ತಲೆದೂಗುವಂತಾ ಮರಾಠಿಯಲ್ಲಿ ಮಾತಾಡಿ, ತಾನು ಅಧ್ಯಕ್ಷನಾಗಿದ್ದ ಮಾಜಿವಾಡದ ಆದಿ ಶಕ್ತಿ ಕನ್ನಡ ಪ್ರಾಥಮಿಕ -ಪ್ರೌಢ ಶಾಲೆಗಳೆರಡಕ್ಕೂ ಸರಕಾರದ ಗ್ರಾಂಟು (ಅನುದಾನ) ದೊರಕಿಸಿಕೊಟ್ಟಿದ್ದ್ದರು. ರಾಷ್ಟ್ರೀಯ ನಾಯಕರ ದಿನಗಳು, ನಾಯಕರ ಜಯಂತಿ ಉತ್ಸವಗಳು, ಹಬ್ಬ , ಇತ್ಯಾದಿಗಳನ್ನ್ನು ಸದಾ ತನ್ನ ಅವಳಿ ಶಾಲೆಗಳಲ್ಲಿ ಆಚರಿಸುವ ಮೂಲಕ ವಾಮನ ಶೆಟ್ಟರು ಥಾಣೆಯ ಈ ಭಾಗದಲ್ಲಿ ಕನ್ನಡಿಗರ ಒಗ್ಗಟ್ಟಿಗೆ, ನಾಡು ನುಡಿಯ ಜೀವಂತಿಕೆಗೆ ಕಾರಣರಾಗಿದ್ದರು.ಕೆಡುತ್ತಿದ್ದ ಆರೋಗ್ಯದ ನಡುವೆಯೂ ಶಾಲೆಯ ಎಲ್ಲ ಕಾರ್ಯಕ್ರಮಗಳಲ್ಲಿ ಸ್ವತಹಾ ತಪ್ಪದೆ ಭಾಗವಹಿಸಿ, ಹುದ್ದೆಯನ್ನೇರಿದ ಕಾಟಾಚಾರಕ್ಕೆ ಕನ್ನಡದ ಮಾತಾಡುವ ಮಂದಿಗೆ ಮೇಲ್ಪಂಕ್ತಿಯಾಗಿದ್ದರು.

ಅವರ ನಿಲುವುಗಳನ್ನು ಆಕ್ಷೇಪಿಸುವುದು ಸುಲಭವಿರಬಹುದು . ಸಾರ್ವಜನಿಕ ಬದುಕಿಗೆ ತೋರಿದ ಬದ್ದತೆ, ತೋರಿದ ಛಲ, ನಡೆಸಿದ ನಾಡ ಸೇವೆಯ ಮಾದರಿಯನ್ನನುಸರಿಸುವುದು ಕಷ್ಟ. ತನ್ನ ನಿಲುವು ತಪ್ಪೆಂದು ತಿಳಿದಾಗ ಹಿಂಜರಿಕೆ ಇಲ್ಲದೆ ಅದನ್ನು ಬದಲಿಸಿಕೊಳ್ಳುತ್ತಿದ್ದ , ವಾಮನ ಶೆಟ್ಟರದು, ವ್ಯಕ್ತಿತ್ವ, ಯೋಚನೆ , ಕೊನೆಗೆ ಸಾಂಸಾರಿಕ ಬದುಕಲ್ಲೂ ಸ್ವಲ್ಪ ಭಿನ್ನ ರೂಪ . ಅದು ಅವರ ಸಾವಲ್ಲೂ ಪ್ರತಿಫಲಿಸಿದಂತಿದೆ. ಒಂದೊಮ್ಮೆ ತಾವು ತೀರ ಭಿನ್ನಾಭಿಪ್ರಾಯ ಹೊಂದಿದ್ದ , ದ.ಕ.ಜಿಲ್ಲೆಯ ಅಭಿವೃದ್ದ್ದಿಯ ಕಾರಣ ಹೊತ್ತು ಹುಟ್ಟಿದ ಜಯಶ್ರೀ ಕೃಷ್ಣ ಪರಿಸರ ಪ್ರೇಮೀ ಸಮಿತಿಯ ಜೊತೆಗೆ ಬಳಿಕ ಸಹಮತಕ್ಕೆ ಬಂದ ಅವರು ಅದೇ ವೇದಿಕೆಯಲ್ಲಿ ಅಂತ್ಯ ಕಂಡದ್ದು ... ಸಮಿತಿಯ ವಾರ್ಷಿಕ ಮಹಾಸಭೆಯಲ್ಲಿ ಮಾತಾಡುತ್ತಲೇ ಕುಸಿದ ಅವರ ದೇಹಕ್ಕೆ ಕರ್ನಾಟಕದ ಕರಾವಳಿಯನ್ನು ಪ್ರತಿನಿ-ಸುವ ಕ್ರಿಶ್ಚಿಯನ್, ಮುಸ್ಲಿಮ್, ಕೊಂಕಣಿ, ಬಂಟ ಬಿಲ್ಲವ , ಮೊಗವೀರ ಹೀಗೆ ಎಲ್ಲ ಜಾತಿ ಧರ್ಮಗಳ ಸಂಘದ ಪ್ರತಿನಿ-ಗಳ ಕೈಗಳು ಆಧಾರವಾದವು . ಅಪರೂಪಕ್ಕೆ ದೇಶದ ನಾಯಕರುಗಳಿಗೆ ಸಿಗುವಂತಾ ಗೌರವವಿದು.
*****
ನೇರಾ ನೇರ ಹೇಳುವುದಾದರೆ , ಮಹಾನ್ ಶಿಕ್ಷಣ ತಜ್ಞರೆಂದು ಬಿರುದುಕೊಟ್ಟು , ಮರೆತು ಬಿಡುವುದಕ್ಕಿಂತ , ಮಹಾರಾಷ್ಟ್ರದ ಮಣ್ಣಲ್ಲಿ ಕನ್ನಡ ನುಡಿಯ ಶಿಕ್ಷಣಕ್ಕಾಗಿ ತನ್ನ ಛಲ, ಶ್ರಮ, ಸಮಯ ,ಜ್ಞಾನ ಮತ್ತು ಹಣವನ್ನು ಮೀಸಲಿಟ್ಟ ಶಿಕ್ಷಣ ಪ್ರೇಮಿ , ನುಡಿ ಸೇವಕನೆಂದು ಸರಳವಾಗಿ ಕರೆದು ಅವರನ್ನು ನೆನಪಿಟ್ಟುಕೊಳ್ಳುವುದು ನನಗಿಷ್ಟ.
*************** *

No comments:

Post a Comment