Tuesday, March 30, 2010

ಸಂತನೆಂಬವನೊಬ್ಬ , ಸಂತತ್ವದಿಂದಾದನೇ...

"ಯಾಕೋ ಗೊತ್ತಿಲ್ಲ, ನನಗೆ ಸಂತರ -ಸ್ವಾಮಿಗಳ ಮೇಲಿನ ನಂಬಿಕೆ -ವಿಶ್ವಾಸವೇ ಕಳೆದು ಹೋಯಿತು, ಭಾರತದಲ್ಲಿ ಇನ್ಯಾರೂ ಸಂತರ ಮೇಲೆ ವಿಶ್ವಾಸವಿಡಲಾರರು... ' ಗೆಳೆಯನೊಬ್ಬ ಹಲುಬುತ್ತಲೇ ಇದ್ದ. ಅವನ ಮಾತು ಹುಟ್ಟಿದ ಹಿನ್ನಲೆ, ವಿಶ್ವಾಸ ನಷ್ಟದ ಕಾರಣ ಗೊತ್ತಿತ್ತು...
***
ಸಂತತ್ವವದೇನು..? ಸಂತ ನೆಂಬವನಾರು ... ಕಾಮ ಕ್ರೋಧ ಗಳ ಗೆಲುವುದೆಂದರೇನು?... ಅವುಗಳನ್ನು ನಮ್ಮ 'ನಿಯಂತ್ರಣ'ದೊಳಿರಿಸುವುದು..ಹಾಗಂದರೇನು ..?


ಇನ್ನು,..ದೇಹದೊಳಗೇ ದೇಹವಾಗಿ ಹೋಗಿರುವ ಅವುಗಳನ್ನಷ್ಜ್ಟೇ 'ಇಲ್ಲ'ವಾಗಿಸುವಾಗ ಉಳಿದ 'ಭಾವ ' ಗಳೆಲ್ಲ ತಮ್ಮ ಯಥಾಗುಣದಲ್ಲೇ ಉಳಿದು ಮುಂದುವರಿಯುವವೇ...? ಇಷ್ಟಕ್ಕೂ ನಮ್ಮ 'ವೈರಿ'ಗಳೆಂದು ಪರಿಗಣಿಸಿದ ಯಾವುದೇ ಆದರೂ 'ನಮ್ಮನ್ನು ಬಿಟ್ಟು ಹೋದ್ದದ್ದು' ಇದೆಯೇ? ವೈರವಿದ್ದಷ್ಜ್ಟೂ ದಿನ ಅವು ನಮ್ಮೊಳಗೆ , ನಮ್ಮ ಅಣು ಅಣುವಿನೊಳಗೆ ಹಾಸು -ಹೊಕ್ಕು!
ಬಾಹ್ಯ ಲೋಕಕ್ಕೆ , 'ನಾನು ದೀಕ್ಷೆ ಪಡೆದೆ...ಮುಂದೆ ಸ್ವಾಮಿಯಾಗಿರುವೆ.. ' ಎಂಬಿತ್ಯಾದಿ ಹೇಳಿಕೆ, ಪ್ರಕಟಣೆಯಷ್ಟೇ -ದೇಹದ 'ಒಳಗಣ ಪ್ರಕೃತಿ' ಯೊಳಗೂ ಬದಲಾವಣೆಗಳ ತರುವುದೇ ? ಅಥವಾ ಸಂತತ್ವ- ಸ್ವಾಮಿತ್ವದ ಘೋಷಣೆಯೊಂದಿಗೆ 'ಸಂತನೆಂದುಕೊಂಡವನು' ತಾನು ಅಂತಾ 'ಒಳಗಣ ಪ್ರಕೃತಿ'ಯ ಮೀರಿದೆನೆಂದುಕೊಳ್ಳುವುದೇ?

ಹೀಗೆ, ಮೀರಿ ನಿಂತ ಹಂತದೊಳಗೂ ಮತ್ತೆ ಲೌಕಿಕದೊಳಗಣ ವ್ಯಾಪಾರದೊಳಗಿಣುಕುವ 'ಕಿಂಡಿ' ಯನ್ನೊಂದು ಮಾತ್ರ ತೆರೆದು ಇರಿಸಿಕೊಳ್ಳಲು ಸಾಧ್ಯವಾಗುತ್ತದೆಯೇ, ಸ್ವಾಮಿಗೆ , ಸಂತನಿಗೆ ?ಹೋಗಲಿ, ಇದ್ಯಾವುದೂ ಅಲ್ಲ, ಅಲೌಖಿಕವನ್ನು ಅರಗಿಸಿಕೊಳ್ಳುವುದು, ಪಾರಮಾರ್ಥದ 'ಜಿಜ್ಞಾಸು'ವಾಗಿ ಅಧ್ಯಾತ್ಮವನ್ನು ಉಸಿರಾಡುವುದು ....ಸಂತತ್ವವೇ ?ಹಾಗೊಮ್ಮೆ ಅದರೂ, ಜನರ ನಡುವೆ, ಸಂಸಾರದೊಳಿದ್ದೂ , ಇದನ್ನೆಲ್ಲಾ ಮಾಡುವ ಜೀವಗಳಿಲ್ಲವೇ...?

ಹೊರಗಿನ ಸಂತತ್ವದಿಂದೇನು ..ನಮ್ಮ ನಮ್ಮೊಳಗಿನ ಸಂತನ ಕಾಣುವ ಮನವಾದರೆ...

ಒಂದೊಮ್ಮೆ , ನೌಕರಿ ಮಾಡುತ್ತಿದ್ದ ಕಂಪೆನಿಯಲ್ಲಿ ಸಹೋದ್ಯೋಗಿಯೊಬ್ಬಳು, ನಿತ್ಯ ಮನೆಯಿಂದ ಎರಡು ಬುತ್ತಿ ಕಟ್ಟಿ ತರುತ್ತಿದ್ದಳು...ಒಂದು ಅವಳಿಗೇ, ಮಧ್ಯಾಹ್ನದ ಊಟಕ್ಕೆ. ಇನ್ನೊಂದು ಕೆಲಸ ಹಿಡಿಯಲು ತಾನು ಹೋಗುವ ರೈಲು ನಿಲ್ದಾಣದ ಮೂಲೆಯಲಿ ಕಣ್ಣಿಲ್ಲದೆ , ಕುಟುಂಬ ಸಂಸಾರದಿಂದ ಪರಿತ್ಯಕ್ತಳಾಗಿ ಬಿದ್ದ ವೃದ್ದೆಗೆ....

. . . ಅಚ್ಚರಿ ಎಂದರೆ , ಅವಳಿಗೂ ಒಬ್ಬ ಸಂಗಾತಿ.ಅದೆಷ್ಟೋ ಸಂಜೆಗಳಲ್ಲಿ ಅವರಿಬ್ಬರೂ ಜೊತೆಯಾಗಿ, ಅದೇ ರೈಲು ನಿಲ್ದಾಣದ ಬೆಂಚಿನ ಮೇಲೆ ಮಾತಿನ ಮಂಟಪ ಕಟ್ಟಿ ಜಗದ ಪರಿವೆ ಇಲ್ಲದೆ ಹಗುರಾದದ್ದನ್ನು ಕಂಡು ' ಇದೇ ನೋಡು ಬದುಕಿನ ಮಾಯೆ' ಎಂದು ಒಳ ಮನಸ್ಸು ಹೇಳುತ್ತಿತ್ತು.! ಅವಳಿಗಾಗಿಯೂ ತರುವ ಬುತ್ತಿ, ಮತ್ತು ಆ ಒಬ್ಬ ಸಂಗಾತಿ, ಆಕೆ ನನ್ನ -ನಿಮ್ಮಂತೇ , ಹಸಿವು - ನೀರಡಿಕೆ ಇರುವ, ದೇಹ ಸಹಜ ಬಯಕೆಗಳ ಗೆಲ್ಲಲಾರದ, ಅಥವಾ ಗೆಲ್ಲಬೇಕೆಂಬ ಹಟವಿಲ್ಲದ (ಯಾಕಾಗಿ ಗೆಲ್ಲಬೇಕು?) ಮನುಷ್ಯ ಮಾತ್ರಳು.. ಎಂಬುದನ್ನು ತಿಳಿಸುತಿತ್ತು. . ಹೀಗೆ ಇದು ಬಹುಕಾಲ ನಡೆಯುತ್ತಿತ್ತು...ವೃದ್ದೆ ತೀರಿಕೊಂಡಾದ ಬಳಿಕ ಆಕೆಗೆ ಇನ್ಯಾರೋ ಅಶಕ್ತ ಜೀವ ಕಂಡಿತು.. ತನ್ನೊಳಗಿನ 'ಸಂತ' ನ ಕಾಯಕ ಮುಂದುವರಿಸಲು.... ಆದರೆ ತನ್ನಂತೆ ದುಡಿಯಲಾಗದ ಅಶಕ್ತೆಗಾಗಿ ಕಟ್ಟಿ ತರುತ್ತಿದ್ದ ಬುತ್ತಿ ಆಕೆಯೊಳಗಿನ ಶುದ್ದ 'ಜೀವ ಪ್ರೇಮ' ವಲ್ಲದೆ , ಸಂತತ್ವವಲ್ಲದೆ ಮತ್ತೇನು ?

ನೆನೆದಾಗಲೆಲ್ಲ ನನ್ನ ಕಣ್ಣ ಪಾಪೆಯೊಳಗೆ ನೀರು ತರಿಸುವ, ಪಾನಿ ವಾಲ ರಾಜೂಭಾಯಿ ಇವತ್ತಿಗೂ ಮುಂಬಯಿ ಲೋಕಲ್ ರೈಲಿನ ತನ್ನ ನಿತ್ಯ ಯಾನದ ನಡುವೆ ಐವತ್ತಕ್ಕೂ ಹೆಚ್ಚು ಲೀಟರ್ ನೀರು ಹೊತ್ತು ಸಾಗುತ್ತಿದ್ದಾನೆ...ಅರುವತ್ತು ದಾಟಿ ಸಾಗಿದ ವಯಸ್ಸಿನಲ್ಲಿ ಬೋಗಿಯಿಂದ ಬೋಗಿಗೆ ದಾಟುತ್ತಾ ಮುಖದ ತುಂಬ ಮಲ್ಲಿಗೆ ನಗು ಬೀರುತ್ತಾ ಬಸವಳಿದ ಪಯಣಿಕರ ಬಳಿ ಸಾಗಿ ನೀರ ಬಾಟಲು ನೀಡಿ ಮನದ ಬೇಗೆಯ, ದೇಹದ ಧಗೆಯ ಕ್ಷಣ ಹೊತ್ತಿಗಾದರೂ ಮರೆವಂತೆ ಮಾಡುವ ಈತನ ಸಂತನೆನ್ನಲು ನನಗೆ ಹಿಂಜರಿಕೆಯೇ ...?
***
ವಾತ್ಸಲ್ಯ ಧಾರೆಯ ಸುರಿಸಿ ಬೆಳೆಸಿ, ದುಡಿದು ಬೆವರಿಳಿಸಿ ಪೊರೆದ ಅವ್ವ, ಕೈ - ಕಾಲು ಮಾತು ಕೇಳುವ ತನಕವೂ ದುಡಿದು ಸಜ್ಜನಿಕೆಯಿಂದ ಬಾಳಿ, ತಾನು ಬದುಕಿದ ರೀತಿಯಲ್ಲೇ ನೀತಿಯ 'ಪಠ್ಯ' ವಾಗುವ ಒಬ್ಬ ಅಪ್ಪ , ಯಾವ ಆಧುನಿಕ ತರಬೇತಿಗಳ ನೆರವಿಲ್ಲದೆಯೂ ಬರೆವ 'ಕೈ' , ಆಡುವ 'ಬಾಯಿ' ಗೆ ಚೈತನ್ಯ ಬರುವಂತಾ ರೀತಿಯಲಿ 'ಆ ಆ , ಈ .. ' ಕಲಿಸಿ ನಿವೃತ್ತನಾದೊಬ್ಬ ಅಧ್ಯಾಪಕ , ...ಇವರಷ್ಟೇ ಸಾಕು, ಸದಾ ನನ್ನೊಳಗಿನ 'ಸಂತ' ನ ಜಾಗೃತಿ ಯಲ್ಲಿಡಲು ...ಹೊರಗಿನ ನೂರು ಸಾವಿರ ಸ್ವಾಮಿಗಳ ಹಂಗೇಕೆ...?
ಸುರಿವ ಬಡತನದಿಂದ , ಕಲಿವ ವಯಸ್ಸು ಮೀರಿದ ಮಗನ ಕೈ ಹಿಡಿದು ಬಂದ ಬಡಪಾಯಿ ಅಪ್ಪನಿಗಾಗಿ 'ನಿಯಮಗಳಲ್ಲೇನೋ ಹೊಂದಾಣಿಕೆ ಮಾಡಿ' ಶಾಲೆ ಕಲಿಯಲವಕಾಶ ಮಾಡಿಕೊಟ್ಟ ಒಬ್ಬ ಅಧ್ಯಾಪಕನ ಕರುಣೆಯ ಕಣ್ಣುಗಳಲ್ಲೊಂದು ಸ೦ತತ್ವವಿಲ್ಲವೇ ...ಅದ ಕಾಣುವ ಕಣ್ಣು ಬೇಕು...!


ನನ್ನೊಳಗೆ ನಾನು ಕಾಣಲಾಗದ ಸಂತನನ್ನು ಇನ್ಯಾರೋ 'ಸಂತನೆಂದವನಲ್ಲಿ' ಕಾಣಹೊರಟ ಕಾರಣ,. . ನಾನು ಇತರರಿಗೆ ತೋರಲಾಗದ ವಿವೇಕವ ಅವನಿಂದ ತೋರಿಸ ಹೊರಟ ಕಾರಣ,. . ನಾನು ಬದುಕಲಾಗದ ರೀತಿಯ ಬದುಕ ಅವನಿಂದ ಕಾಣಿಸ ಹೊರಟ ಕಾರಣ ... ನನ್ನ ದುಡಿಮೆಯ ಫಲದೊಳಗೆ 'ಇಲ್ಲ ' ದವರಿಗೊಂದಂಶ ನೀಡಲಾಗದ ಕಾರಣವೇ . . , ಈ ತುಮುಲ , ಈ ತಲ್ಲಣ..!


ನನ್ನ ಸಂತ ಕಾವಿಯೊಳಗಿಲ್ಲ ..ನನ್ನ ಸಂತ ನೀಳ ಜಟೆಯೊಳಗೆ ಅವಿತಿಲ್ಲ, ನನ್ನ ಸಂತ, ಬಿಟ್ಟ ನಿಡು ದಾಡಿಯೊಳಗಿಲ್ಲ, ನನ್ನ ಸಂತನಿಗೆ ಅಶ್ರಮದ ಹಂಗಿಲ್ಲ, ನನ್ನ ಸಂತನಿಗೆ ಬ್ರಹ್ಮ ಚರ್ಯದ ಕಟ್ಟುಪಾಡುಗಳಿಲ್ಲ ...ನನ್ನ ಸಂತನಿಗೆ, ಕೈ - ಕಾಲುಗಳ ಅಕರಾಳ ವಿಕರಾಳ ತಿರುಗಿಸಿ, ಪಾದದ ನೀರ ಕುಡಿಸಿ, ನಾನು ಇಂತಾ ದೇವರು ಎಂದು 'ಅಪ್ಪಣಿಸಿ' ಆಶೀರ್ವಚನದ ಭಂಗಿಯಲಿ ನಿಲ್ಲುವ ಕಷ್ಟಗಳಿಲ್ಲ ..ನನ್ನ ಸಂತನಿಗೆ, ' ಹಣವಲ್ಲವೇ ಮನುಷ್ಯನ ಶತ್ರು ' ಎನ್ನುತ್ತಲೇ , ಮುಂದಿನ ಭೇಟಿಗೆ ' ನಿಮ್ಮಿಂದ ಬರಬಹುದಾದ ನಿಧಿ ಎಷ್ಟು ' ಎಂದು ಪರೋಕ್ಷವಾಗಿ ಕಾ೦ಚಾಣ ಸ೦ಗ್ರಹಿಸಲು ಸೂಚಿಸುವ ಅಗತ್ಯಗಳಿಲ್ಲ.

ಕಲಿತ ಶಾಲೆಗೊಂದು ಹಿಡಿ ಪುಸ್ತಕವ ದಾನವನಿತ್ತ ಘಳಿಗೆ, ಬೈಕು ಕೊಳ್ಳಲೆಂದು ಸಂಗ್ರಹಿಸಿದ ಹಣದಲ್ಲಿ ಒಂದಿಷ್ಟು ಭಾಗವನ್ನು , ಪತ್ರಿಕೆಯಲ್ಲಿ ಪ್ರಕಟವಾದ ಕ್ಯಾನ್ಸರ್ ಪೀಡಿತ ಮಗುವಿನ ಬಡ ತಾಯಿಯೊಬ್ಬಳ ಕೈಗಿತ್ತ ಘಳಿಗೆ .. , ನಾಷ್ಟಾ ಮಾಡುವ ಹೊಟೇಲಲ್ಲಿ ನಿತ್ಯ ತಿಂಡಿ ಸಪ್ಲಯಿ ಮಾಡುವ ವೈಟರ್ ಹುಡುಗನ ಬಾಡಿದ ಮುಖ ನೋಡಿ, ಅವನ ತಂಗಿಯ ಮದುವೆಗೆಂದು ಒಂದಿಷ್ಟು ಮೊತ್ತ ವನ್ನಿತ್ತ ಹೊತ್ತು, .. ಓಡುವ ಬಸ್ಸಿ೦ದ ಬಿದ್ದ ಅಪರಿಚಿತ ವ್ಯಕ್ತಿಯನ್ನು ಸಾಗಿಸಲು ಸ್ಟ್ರೆಚರ್ ಬರುವ ತನಕ ಆಫೀಸಿನ ತುರ್ತು ಮರೆತು, ರಕ್ತ ಒಸರುವ ಕೈಗೆ ನಿಮ್ಮ ಟವೆಲು ಕಟ್ಟಿದ ಆ ಕ್ಷಣ..., ಸುತರಾಂ ಅರ್ಥವೇ ಆಗದಿದ್ದ 'ಲೆಕ್ಕ' ವನ್ನು ಮೆತ್ತಿ , ಒತ್ತಿ ತಲೆಗೆ ಹತ್ತಿಸಿದ ಆ ಹೈಸ್ಕೂಲು ಅಧ್ಯಾಪಕರನ್ನು , ಅವರ ಎಂಭತ್ತರ ಇಳಿಜಾರಲ್ಲಿ ಕಂಡು ಕಾಲಿಗೆರಗಿ 'ಸಾರ್.. ' ಎಂದು ಕಣ್ಣು ಮಂಜಾಗಿಸಿಕೊಂಡ ಆ ಸಂಜೆ .., ನಿಮ್ಮೊಳಗೊಬ್ಬ ಸಂತನಿದ್ದ.

ಆಗಾಗ ಈ ಸಂತನ ಇರವನ್ನು ನೆನಪಿಸಿಕೊಳ್ಳಿ, ಅವ ಮರೆಯಾಗದಂತೆ ನೋಡಿಕೊಳ್ಳಿ, ಅಷ್ಟು ಸಾಕು!
***
ಈಗ , ಹಲುಬುವ ನನ್ನ ಗೆಳೆಯನಿಗೆ ಹೇಳಬೇಕು ....


ನನ್ನ ದೇವರು, ಇದ್ದರೆ , ನಾ ಹುಟ್ಟುವ ಮೊದಲೇ ಇದ್ದ.. ನಾನಿದ್ದಾಗಲೂ, ನಾನಿಲ್ಲದಿರುವಾಗಲೂ ಇರುವ...ಮಧ್ಯೆ ನನ್ನ -ಅವನ ನಡುವೆ 'ಇನ್ನೊಬ್ಬನ' ನೇಮಿಸುವ ಜರೂರು ನನಗಿಲ್ಲ. ...ಹಾಗಾಗಿಯೇ, ಮತ್ತು ಹಾಗಾಗಿಯೇ ಎಲ್ಲೋ, ನಿತ್ಯಾನಂದನೆಂಬವನೊಬ್ಬ ಕಾಮಾನಂದನಾದಾಗ ನನ್ನ 'ದೇವರ ಜಗತ್ತು ' ಬಿದ್ದು ಹೋಗಿಲ್ಲ..ಯಾಕಂದರೆ , ನನ್ನ ದೇವರು ಅವನ ಹೆಗಲ ಮೇಲಿರಲಿಲ್ಲ.....!!
***


No comments:

Post a Comment