Tuesday, March 30, 2010

ಮುಂಬಯಿ ಕನ್ನಡಕ್ಕೆ ಹೆಮ್ಮೆ ತ೦ದ ಹುಡುಗ...

" ಳನೇ ಕ್ಲಾಸನ್ನು ಒಳ್ಳೆಯ ಅಂಕ ತೆಗೆದು ಪಾಸಾಗಬೇಕು...ಈ ವರ್ಷ ನಿನಗೆ ಹೊಸ ಸೈಕಲ್ ಕೊಡಿಸುವೆ...ಹತ್ತನೆಯ ತರಗತಿಯಲ್ಲಿ ತೆಗೆವ ಮಾರ್ಕು, ಪಡೆವ ದರ್ಜೆ ಬಹಳ ಮುಖ್ಯ ಮಗೂ..ಮುಂದೆ ನಿನಗೆ ಒಳ್ಳೆಯ ವಿಭಾಗಕ್ಕೆ ಸೇರಿ ವಿದ್ಯಾಭ್ಯಾಸ ಮುಂದುವರಿಸಬಹುದು..'ದೊಡ್ಡ ಜಾಬ್'ಸಿಕ್ಕಿ , ಬಹಳ ದೊಡ್ಡ ಮನುಷ್ಯನಾಗಬಹುದು...ಅಮ್ಮ ನ 'ಕೊಂಡಾಟ' ದ ಮುಂಗೈ ಬೆಣ್ಣೆ ...
ಪಿ .ಯೂ.ಸಿ ಅಂದರೆ ನಿನ್ನ ಜೀವನದ ಗುರಿ ನಿರ್ಧರಿಸುವ ಹಂತ...ಕ್ಲಾಸಲ್ಲಿ ಎರಡು ಅಥವಾ ಮೂರನೇ ಗ್ರೇಡಿಗಾದರೂ ಏರ ಬೇಕು..ಈ ಸಮ್ಮರ್ ನಲ್ಲಿ ಕ್ರಿಕೆಟ್ ಟೂರ್ನಿ, ಸ್ವಿಮ್ಮಿಂಗ್ ಕ್ಯಾಂಪ್ ಬೇಡ..ಮುಂದೆ ಎಲ್ಲಕ್ಕೂ ಸಮಯ ಬರುತ್ತದೆ.. ಸಣ್ಣಗೆ ಅಪ್ಪನ ಗದರಿಕೆ...
ಒಳ್ಳೆಯ ಕಾಲೇಜೊಂದರಲ್ಲಿ ಇಂಜಿಯನಿರಿಂಗ್ ಪ್ರವೇಶ ದೊರೆತ ಖುಷಿಯನ್ನು ಹಂಚಿಕೊಂಡರೆ... ' ಮುಂದಿನ ನಾಲ್ಕು ವರ್ಷ ಬಹಳ ಮಹತ್ವದ್ದು...ಕಾಲೇಜಿನ ಆ ಸಂಘ , ಈ ಕ್ಲಬ್ ಅಂತಾ ಎಲ್ಲಾ ಹಚ್ಚಿಕೊಳ್ಳೋದು ಬೇಡ.... ' ಅಣ್ಣನ ಹಿತವಚನ...
ಒಮ್ಮೆ ಕಾಲೇಜು ಮುಗಿದು, ಕ್ಯಾಂಪಸ್ ಸೆಲೆಕ್ಷನ್ ನಲ್ಲೋ, ಅಪ್ಲಿಕೇಶನ್ ಹಾಕಿಯೋ ಒಳ್ಳೆಯ ಕಂಪನಿ ಕೈ ಹಿಡಿದರೆ , ...ಮತ್ತೆ , ಬೆನ್ನ ಹಿಂದಿಂದ ಅಪ್ಪನ ಮಾತು...ಸಂಬಳ ಜೋಪಾನ...ಹೊಸ ಜೀನ್ಸು , ಸಿನಿಮಾ ಟಿಕೇಟು ಅಂತಾ ಪೋಲು ಮಾಡೋದು ಬೇಡ..ನಿನ್ನದೇ ಒಂದು ಮನೆ ಅಂತಾ ಆದರೆ...
ಮುಂದೆ, ಮದುವೆ , ಮಕ್ಕಳು... !

ಹೀಗೆ ,ಅದೇ ಚಕ್ರ..ಅದೇ ತಾಳ ..ಅದೇ ಆಟ.ಪಾತ್ರಧಾರಿಗಳಷ್ಟೇ ಬದಲು...! ಇಲ್ಲಿ ಮಕ್ಕಳೋ ಅಂ ಕದ ಹುಂಜಗಳು.. ಇನ್ನು , ಹೆತ್ತವರು, " ಅಗೋ, ಕಾಣಿಸ್ತಿದೆಯಲ್ಲಾ...ಅದೇ ಫಿನಿಶಿಂಗ್ ಲೈನ್ ...ಗೆಲುವಿನ ಗೆರೆ...ಅದಕ್ಕೆ ಕಾಲಿಟ್ಟು ಬಿಡು..ಮುಟ್ಟಿಬಿಡು..''ಎಂದು ಅವರ ಹುರಿದುಂಬಿಸುವವರು... ಸ್ಪರ್ಧೆಗೆ ಬಿಟ್ಟ ಹುಂಜಗಳ ಗೆಲುವಿನ ವಾರಸುದಾರರು. ಟ್ಯೂಷನ್ ಕ್ಲಾಸುಗಳಿರಬಹುದು, ಬರಿದೇ , ಪರೀಕ್ಷೆಗೆ ಬರುವ ಪ್ರಶ್ನೆಗಳನ್ನಷ್ಟೇ ಉರು ಹೊಡೆಸಿ ಕಲಿಸುವ 'ಸ್ಪೆಶಲ್ ಟ್ಯೂಟರ್ ' ಗಳ ನೇಮಕವಿರಬಹುದು.. ಇಲ್ಲಿ, ಗೆಲುವೊಂದೇ ಮಂತ್ರ, ಅದಕ್ಕಾಗಿಯೇ ಎಲ್ಲ ತಂತ್ರ. !
***
ಈ ಹುಡುಗನನ್ನು ಕಂಡದ್ದು , ಮುಂಬೈ ಮಹಾನಗರದಲ್ಲಿ ಮನೆ ಮಾತಾಗಿರುವ , ಎಳೆಯ ಮಕ್ಕಳ ಪ್ರತಿಭಾ ಚೈತನ್ಯವನ್ನೂ ಅರಳಿಸ ಹೊರಟ ಮಕ್ಕಳ ಸಂಸ್ಥೆ , "ಚಿಣ್ಣರ ಬಿಂಬ' ದ ಶಿಬಿರದ ಕಾರ್ಯಕ್ರಮವೊಂದರಲ್ಲಿ. ಹದಿನಾರರ ಪ್ರಾಯದ ಆತ ವೇದಿಕೆಯಲ್ಲಿ ಹಾಡುತ್ತಿದ್ದ , ತಾಳಬದ್ದವಾದ , ಶಾಸ್ತ್ರೀಯ ನೃತ್ಯ ದ ಹೆಜ್ಜೆಗಳನ್ನಿಡುತ್ತಿದ್ದ.ಅದೇ ಉಸಿರಿನಲ್ಲಿ, "ವೆಸ್ಟರ್ನ್' ಡ್ಯಾನ್ಸ್ ಕೂಡಾ ಮಾಡಬಲ್ಲವನಾಗಿದ್ದ. ಕನ್ನಡದ ಸುಮಧುರ ಭಾವಗೀತೆಗಳನ್ನು ರಾಗ -ತಾಳ -ಭಾವಕ್ಕೆ ಭಂಗವುಂಟಾಗದಂತೆ ಹಾಡುತ್ತಿದ್ದ .. ಹಿಂದಿ ಸಿನಿಮಾಗಳ ಹಳೆಯ ಹಾಡು , ಈ ಹುಡುಗನ ಕಂಠದಲ್ಲಿ ಹುಡುಗುತನವನ್ನು ಮೀರಿಯೇ ಜೀವ ತಳೆಯುತ್ತಿದ್ದರೆ, ಶಾಸ್ತ್ರೀಯ ಭರತನಾಟ್ಯಕ್ಕೆ , ಕಲಿಸಿದ ಗುರುಗಳೇ ಭಾವುಕರಾಗಿ ಬಿಡುತ್ತಿದ್ದರು. ಭರತನಾಟ್ಯ, ನಾಟಕ , ಕ್ವಿಜ್, ಡ್ರಾಯಿಂಗ್, ಹಾಡುಗಾರಿಕೆ , ಕೋರಿಯೋ ಗ್ರಾಫಿ, ನಿರ್ದೇಶನ , ಕೊನೆಗೆ ಪ್ಯಾಶನ್ ...ಹೀಗೆ, ಹುಡುಗ ಮಹಾರಾಷ್ಟ್ರವಲ್ಲದೆ, ಅಂಧ್ರಪ್ರದೇಶ, ತಮಿಳ್ನಾಡು ಅಂತ, ರಾಜ್ಯ -ಅಂತಾರಾಜ್ಯ ಪ್ರಶಸ್ತಿ ಪುರಸ್ಕಾರಗಳನ್ನು ತರುತ್ತಲೇ ಇದ್ದ. ಈತ ಕಲಿವ ಶಾಲೆ -ಕಾಲೇಜು ಗಳ ಅಧ್ಯಾಪಕರೇ,ಈ ಹುಡುಗನ ಜೊತೆ ಮಾತಾಡಲು, ಒಂದಷ್ಟು ಹೊತ್ತು ಕಳೆಯಲು ಸ್ಪರ್ಧೆಗೆ ಬಿದ್ದದ್ದುಂಟು. ಮುಂಬಯಿಯಲ್ಲಿ, ನಾಟಕ ಸಂಸ್ಥೆ ಕಟ್ಟಿ ಹತ್ತಾರು ನಾಟಕಗಳನ್ನು ಕೊಟ್ಟ ಗಟ್ಟಿ ನಿರ್ದೇಶಕರೇ ತಮ್ಮ ಹೊಸ ನಾಟಕಗಳಿಗೆ ಈ ಹದಿನೇಳರ ಹುಡುಗನ ನಿರ್ದೇಶನ, ಕೋರಿಯೋಗ್ರಾಫಿಗಾಗಿ ಡೇಟ್ ಕೇಳಿದ್ದುಂಟು.ಹಿರಿಯ ಹಾಡುಗಾರರನ್ನೊಳಗೊಂಡ ಕಲಾ ಸಂಸ್ಥೆಗಳು ಈ ಹುಡುಗನ 'ಕಂಠ' ವನ್ನೂ ತಮ್ಮೊಂದಿಗೆ ಸೇರಿಸಿಕೊಳ್ಳಲು ಕಾಲೇಜಿನ ಬಿಡುವಿಗಾಗಿ ಕಾಯ್ದದ್ದುಂಟು.

ಅಚ್ಚರಿ ಎಂದರೆ, ಆರಡಿಗೂ ಮೀರಿದ ಎತ್ತರದ, ಎಂಭತ್ತೈದಕ್ಕೂ ಮೀರಿದ ತೂಕದ ಈ ಹುಡುಗ , ಮನವನ್ನೊಪ್ಪಿಸಿ, ದೇಹ ಬಗ್ಗಿಸಿ, 'ಭರತ ನಾಟ್ಯ' ದಲ್ಲಿ ರಾಜ್ಯ ಮಟ್ಟಕ್ಕೆ ಬೆಳೆದದ್ದು. ಮರಾಠಿ ಮಣ್ಣಲ್ಲಿ ಹುಟ್ಟಿ, ಕರಾವಳಿಯ ಬದುಕಿನ ಚಿತ್ರಗಳನ್ನೂ ಲೀಲಾ ಜಾಲವಾಗಿ 'ಕ್ಯಾನ್ ವಾಸ್' ನಲ್ಲಿ ಬಿಂಬಿಸಿ, ಹೈದರಾಬಾದಿನ ವರೆಗೂ ಹೋಗಿ ಪ್ರಥಮ ಪುರಸ್ಕಾರ ಪಡೆದದ್ದು.

ಟ್ಯುಟೋರಿಯಲ್ ಗಳ ' ಮುಖ ' ನೋಡದೆ, " ಡೊನೇಶನ್ ಶುಲ್ಕಗಳ ಹಂಗಿಲ್ಲದೀ, ಎಲ್ಲ ಪರೀಕ್ಷೆಗಳಲ್ಲಿ ಕಾಲೇಜಿಗೆ, ಪ್ರಥಮ ನಾಗಿ ಪ್ರವೇಶ ಗಿಟ್ಟಿಸಿ, ಇಂಜಿಯನಿರಿಂಗ್ ಮುಗಿಸಿದ ಈ ಹುಡುಗ, ಆರು ತಿಂಗಳ ಹಿಂದೆ, ಮೈಸೂರಿನ ಇನ್ ಪೋಸಿಸ್ ಗೆ ನೌಕರಿ ತರಬೇತಿಗೆ ಹೊರಟಾಗ ಮುಂಬೈ ವಿಟಿಯ ರೈಲು ನಿಲ್ದಾಣದ ತುಂಬಾ ಬೀಳ್ಕೊಡುವ ಜನ ಜಾತ್ರೆ ನೆರೆದಿತ್ತು. ಅವರಲ್ಲಿ ಬಹುತೇಕ ಮಾತಾಪಿತರು, ಪ್ರೀತಿ, ಕೃತಜ್ಞತೆಗೆ ಅಲ್ಲಿ ಸೇರಿದ್ದರು, ಕಾರಣ ಇಷ್ಟೇ , ಅವರಲ್ಲೆಷ್ಟೊ ಮಂದಿಯ ಮಕ್ಕಳು ಈ ಹುಡುಗನ ಸ್ಪೂರ್ತಿಯಿಂದ ಭರತನಾಟ್ಯ ಕ್ಕಿಳಿದು ಮಿಂಚಿದ್ದರು. ಹಾಡುಗಾರಿಕೆಯಲ್ಲಿ ಪಳಗಿದ್ದರು. ನಾಟಕ ಆಡಿದ್ದರು. ಅವರಲ್ಲೆಷ್ಟೊ ಮಂದಿ , ತುಪ್ಪದ ಅನ್ನ ಬಡಿಸಿ ಬೆಳೆಸಿದರೂ ತಪ್ಪು ಹಾದಿ ಹಿಡಿದ, ಕಾರಲ್ಲಿ ಶಾಲೆಗೆ ಕಳುಹಿಸಿ ಕೊಟ್ಟರೂ ಕಲಿಯದ ತಮ್ಮ ಮಕ್ಕಳು ಕಲಿವಂತೆ ಮಾಡಲು , ಈ ಹುಡುಗನನ್ನು ಅವರು ಬಳಸಿಕೊಂಡಿದ್ದರು. ಟ್ಯೂಷನ್ ಇನ್ಸ್ ಟ್ಯೂಟುಗಳ ಹಂಗಿಲ್ಲದೇ , ತಾನೇ ತಯಾರಿಸಿದ ನೋಟ್ಸ್ ಗಳಿಂದ ಈ ಹುಡುಗ ಹಲವು ಮಕ್ಕಳಿಗೆ ಪರೀಕ್ಷೆಯಲ್ಲಿ ಗೆಲ್ಲುವ ಸೂತ್ರ ಕಲಿಸಿದ್ದ.
***
ಮುಂಬಯಿ ಕನ್ನಡಕ್ಕೆ ಹೆಮ್ಮೆಯಾದ, ಸ್ಪೂರ್ತಿಯಾದ ಈ ಹುಡುಗ ಆಶೀಷ್ ಹಾಲುಂಡು -ಕೆನೆಯುಂಡು ಬೆಳೆದವನಲ್ಲ. ಮುಂಬಯಿಗೆ ಬಹುತೇಕ ಕನ್ನಡದ ಬಹುತೇಕ ಮಂದಿಯಂತೇ ದುಡಿದು-ಕಲಿತು ನೆಲೆ ಕಾಣಲೆತ್ನಿಸುವ ಅಪ್ಪನ, ಬೇಸಾಯ --ಸಾಗುವಳಿಯಲ್ಲಿ ಮುಳುಗಿ, ಮದುವೆ ಎಂಬೊಂದು ಸೇತುವೆ ಏರಿ ಊರು ಬಿಟ್ಟು ಮುಂಬಯಿಗೆ ಸೇರಿದ ಅಮ್ಮನ ಮಗ. ವ್ಯಾಪಾರದ ಏರಿಳಿತದಲ್ಲಿ ಇದ್ದ ಮನೆಯನ್ನೂ ಮಾರಬೇಕಾಗಿ ಬಂದ ಅಪ್ಪ ನಿಗೆ, "ನನಗಿಂತ ಮೊದಲು ಜನಿಸಿದ ಹೆಣ್ಣುಮಗಳೊಬ್ಬಳಿದ್ದಳು. ಅವಳ ಮದುವೆಗೆ ಅದು ಖರ್ಚಾಯಿತೆಂದುಕೊಂಡು, ಮರೆತು ಬಿಡು," ಎಂದು ಸಾಂತ್ವನ ಹೇಳಿದ ಮಗ , ಆ ವರ್ಷ ಕಾಲೇಜಿಗೆ ಪ್ರಥಮನಾಗಿ ತೇರ್ಗಡೆಯಾಗಿದ್ದ.
***
ತನ್ನ ಬಾಲ್ಯಕ್ಕೆ ದಕ್ಕದೆ ಹೋದದ್ದೆಲ್ಲವನ್ನೂ ಮಗನ ಮೂಲಕ ದಕ್ಕಿಸಿಕೊಂಡ , ಯಕ್ಷಗಾನ ಭಾಗವತಿಕೆಗಿಳಿದ ಮುಂಬಯಿಯ ಪ್ರಥಮ ಮಹಿಳೆ , ತಾಯಿ ಸುಮಂಗಲಾ ಇಚ್ಚೆಯಂತೆ ಐ ಎ ಎಸ್ ಕಲಿಕೆ - ಆಶೀಶ್ ನ ಮೊದಲ ಪ್ರಾಶಸ್ತ್ಯ. ಇನ್ ಫೋ ಸಿಸ್ ನೌಕರಿಯ ಗರಿ ಹೊತ್ತು ಮರಳಿದ ಪ್ರತಿಭಾವಂತ ಆಶೀಷ್ ಮತ್ತೆ ಮುಂಬಯಿಯ ಮಕ್ಕಳ -ರಂಗದ ,ಹೊಸ ಪೀಳಿಗೆಗೆ ತನ್ನ ಪ್ರತಿಭೆ -ಸಾಧನೆಯ ಬೆಳಕಲ್ಲಿ ಹೊಸ ಚೈತನ್ಯ ನೀಡುವಂತಾದರೆ...ಇದು ಇಲ್ಲಿನ ಕನ್ನಡಿಗರ ಬಯಕೆ.

. . . ಮಧ್ಯೆ, ಯಾವ ಚಟುವಟಿಕೆಯ ನಾದ - ನಿನಾದವೂ ಇಲ್ಲದೆ ಕಳೆದು ಹೋಗುವ ನಮ್ಮ ಹುಡುಗರ ಬಾಲ್ಯ ...ತುಂಟಾಟಿಕೆಯ ಒಗರಿಲ್ಲದೆ ಗೆಜ್ಜೆಯ ಜಣ ಜಣವಿಲ್ಲದೆ ಒಣಗುವ ಹುಡುಗಿಯರ ಕೌಮಾರ್ಯ...'ಗುರುತಿಸುವಿಕೆ' ಯ ನೆರವಿಲ್ಲದೆ, ಪ್ರೋತ್ಸಾಹದ, ನೀರಿಲ್ಲದೆ ಒಳಗೇ ಇಂಗಿ ಬಿಡುವ ಮಕ್ಕಳ ಪ್ರತಿಭಾ ಚೈತನ್ಯ..ಎಲ್ಲ , ಬದುಕಿನ ತುರುಸಿಗೆ, ಸ್ಪರ್ಧೆಗೆ ಬಲಿ. ತಮ್ಮ ಮಕ್ಕಳು ಶಾಲೆ ಕಾಲೇಜುಗಳ ಪರೀಕ್ಷೆ ಗೆಲ್ಲುವ , ಗ್ರೇಡು ದೊರಕಿಸಿಕೊಳ್ಳುವಂತೆ ಮಾಡುವ ಹುರುಪಿನಲ್ಲಿ, ಹಪಾಹಪಿಯಲ್ಲಿ ಅವರೊಳಗಿರುವುದನ್ನೆಲ್ಲ ಚಿವುಟುವ , ಬತ್ತಿಸಿ ಬಿಡುವ ಅಪ್ಪ -ಅಮ್ಮಂದಿರಿಗೆಲ್ಲ ಉತ್ತರ ಆಶೀಷ್ ಮತ್ತು ಆತನ ಹೆತ್ತವರು!
***

No comments:

Post a Comment