Friday, March 26, 2010

ರುಚಿಯೊಂದಿದ್ದರೆ..ಬದುಕಿಗೆ...!

ಒಂದೊಮ್ಮೆ , ಹಸಿದ ಹೊಟ್ಟೆಯನ್ನು ಉಣಿಸಲು, ದೇಹದ ದಣಿವು ತಣಿಸಲು ಹುಟ್ಟಿಕೊಂಡ ಹೊಟೇಲುಗಳು, ಉಪಹಾರ -ವಿಶ್ರಾಂತಿ ಗೃಹಗಳು , ಮುಂದೆ ರಾತ್ರಿ ಹಗಲು ಲತಾಂಗಿಯರು ಮದ್ಯ ಉಣಿಸುವ ಬಾರುಗಳಾಗಿ ರೆಸ್ಟೋರಾಗಳಾಗಿ ಬದಲಾದಾಗ, ಅದನ್ನು ನಮ್ಮ ಪ್ರಗತಿಗೆ ಭಾಷ್ಯವೆದು ತಿಳಿಯಲಾಯಿತು. ಹಳೆಯ ಮಿಲ್ಲುಗಳ ಜಾಗವನ್ನೆಲ್ಲಾ ಮಾಲ್ ಗಳು "ಸಾಮ್ರಾಜ್ಯ"ದಂತೆ ವ್ಯಾಪಿಸಿಕೊಂಡಾಗ ಅದು ಅಭಿವೃದ್ದಿಗೆ ಹೊಚ್ಚ ಹೊಸಾ ವ್ಯಾಖ್ಯಾನವಾಯಿತು. ಮನುಷ್ಯನ ಕೊಳ್ಳುವ ತಾಕತ್ತು ಹೆಚ್ಚಾದಂತೆಲ್ಲಾ "ರುಚಿ"ಯೂ ಬದಲಾಯಿತು. ನಾಲಗೆಯದ್ದಷ್ಟೇ ಅಲ್ಲ, ಬದುಕಿನದ್ದೂ ಕೂಡ ! ನೂರಾರು ಮಹಡಿಗಳ ಕಾಂಕ್ರೀಟು ಕಟ್ಟಡಗಳನ್ನು, ಮೇಲ್ಸೇತುವೆಗಳನ್ನು ನಿರ್ಮಿಸುವುದು , ವಿಶೇಷ ಕಾರಿಡಾರ್ ಗಳನ್ನು ರಚಿಸುವುದು , ಅಥವಾ ಹೊಳೆವ ಗಾಜುಗಳ ಬಿಗ್ ಬಜಾರುಗಳು , ಮಾಲುಗಳನ್ನು ಬಹು ಪರದೆಗಳ ಸಿನಿಮಾ ಥಿಯೇಟರುಗಳನ್ನು ಅಲ್ಲಲ್ಲಿ ಕಟ್ಟಿ ಬಿಡುವುದು ಇವು ಪ್ರಗತಿಯ ಮಾನದಂಡವಾಗುತ್ತಿರುವುದು ಕಂಡು ಬರುತ್ತಿದೆ.

ನಮ್ಮ ಹಳ್ಳಿಗಳ ಕಡೆಗೆ ಹೊರಳಿದರೂ , ಮಠ ಮಂದಿರಗಳೂ ನೆಲದಿಂದ ತಲೆಯ ವರೆಗೆ ಸಿಮೆಂಟಿನಚ್ಚಿನಲ್ಲಿ ಎರಕಗೊಂಡು ಒಂದರ ತದ್ರೂಪ ಇನ್ನೊಂದಾಗಿ ಗೋಚರಿಸುತ್ತಿವೆ. ಅಚ್ಚರಿಯೆಂದರೆ ಹತ್ತಾರು ಕೋಟಿ ವೆಚ್ಚದಲ್ಲಿ ಮೂಲ ಸ್ವರೂಪವನ್ನು ವಿರೂಪಗೊಳಿಸಿ ನಿರ್ಮಾಣಗೊಳ್ಳುವ ಇಂತಾ ಸಿಮೆಂಟು ಸಂಕೀರ್ಣಗಳೂ "ವಾಸ್ತು ಶಾಸ್ತ್ರದ ಪ್ರಗತಿ"ಯಲ್ಲಿ ದಾಖಲಾದವು.. ಎಲ್ಲೋ ಊರ ನಡುವಣ ಪ್ರಶಾಂತ ಜಾಗದಲ್ಲಿದ್ದ ದೇವಸ್ಥಾನಗಳು ಇಗರ್ಜಿ ಗಳು ಹಳ್ಳಿಗಳ ಸಂಜೆಗೊಂದು ವಿಶೇಷ ಅಲೌಖಿಕ ಪರಿಸರವನ್ನು ನಿರ್ಮಾಣ ಮಾಡಿ ಕೊಡುತ್ತಿದ್ದವು . ಕಾರಣ ಅಲ್ಲಿದ್ದ ಮೌನ ಮತ್ತು ಸರಳತೆ . ಕಾಣದ ದೇವರ ಬಗೆಗೆ ಅಷ್ಟಾಗಿ ಚಿಂತಿಸದೆ , ಕಣ್ಣ ಮುಂದಿನ ಬದುಕಿನ ಮೌಲ್ಯ ವರ್ಧನೆಗೇ ಶತಮಾನ ಶ್ರಮಿಸಿದ ಶಿವರಾಮ ಕಾರಂತರು ದೇವಾಲಯಗಳ ಆವರಣಗಳನ್ನು ಇಷ್ಟಪಡುತ್ತಿದ್ದರು . ಪುತ್ತೂರು, ಉಡುಪಿ, ಕುಂದಾಪುರ ಪರಿಸರದ ಅವರ ಚಟುವಟಿಕೆಯ ದಿನಗಳಲ್ಲಿ ಅಲ್ಲಿನ ದೇವಸ್ಥಾನಗಳ ಬಳಿಯೇ ಹೆಚ್ಚಾಗಿ ಮಕ್ಕಳೊಡನೆ ಅವರ ಒಡನಾಟವಿರುತ್ತಿತ್ತು . ಅದೇ ಮಂದಿರ ಮಂದಿರ ಪರಿಸರಗಳೀಗ ವಾಣಿಜ್ಯ ಮಳಿಗೆಗಳಂತೆ ಕಾಣುತ್ತಿವೆ. ಸ್ವಲ್ಪ ಸೂಕ್ಷ್ಮವಾಗಿ ನೋಡಿದರೆ ಅಲ್ಲಿ ನಡೆದ "ಪ್ರಗತಿ" ಕಾರ್ಯಗಳಿಂದ ಮೂಲ ಸೌಂದರ್ಯ ನಷ್ಟವಾಗಿರು ವುದು ಸ್ಪಷ್ಟವಾಗಿ ಗೋಚರಿಸುತ್ತದೆ. ರಫಿ, ಮುಖೇಶ ರ ಹಳೆಯ ಹಾಡುಗಳ ಮೇಲೆ ಇಂಡಿಪಾಪ್ ನ ಸುರುಳಿ ಸುತ್ತಿದ ಹಾಗೆ !
ಒಳಗಿನ ರುಚಿ ಕೆಟ್ಟಾಗ ನಾವು ಈ ರೀತಿಯ ಬದಲಾವಣೆಗೆ ಒಗ್ಗಿಕೊಳ್ಳುತ್ತೇವೆ . ಪ್ರಗತಿಯ ಪಥದಲ್ಲಿ ಎಲ್ಲವೂ ಸರಿ ಎನ್ನತೊಡಗುತ್ತೇವೆ. ಇಷ್ಟಕ್ಕೂ ಕಾರಣ ನಮ್ಮ 'ರುಚಿ" . ರುಚಿ ಕೆಟ್ಟಾಗ ಅಭಿರುಚಿಯೂ ಬದಲಾಗುತ್ತದೆ. ಇಷ್ಟಗಳು ಬದಲಾಗುತ್ತವೆ. ಇದರಿಂದ ನಮ್ಮ ಎಲ್ಲ ರೀತಿಯ ಯೋಚನೆ ಮತ್ತು ಯೋಜನೆಗಳು ಪ್ರಭಾವಗೊಳ್ಳುತ್ತವೆ. ಸಣ್ಣದೊಂದು ಮನೆಯನ್ನು ಕಟ್ಟಿ , ಅದಕ್ಕೊಪ್ಪುವ ಪೀಠೋಪಕರಣಗಳನ್ನು ಆಯ್ಕೆ ಮಾಡುವುದಕ್ಕೂ ಒಂದು ಒಳ್ಳೆಯ ರುಚಿ ಬೇಕಾಗುತ್ತದೆ. ಅದಿಲ್ಲವಾದಾಗ ಆ ಮನೆ ನಮ್ಮ ಸಂಪತ್ತು -ಆಡಂಬರ -ಅಬ್ಬರಗಳ ಪ್ರತಿಫಲನವಾಗಿ ಕಣ್ಣಿಗೆ ರಾಚುವ "ಶೋಕೇಸು"ಗಳಾಗಿ ಬಿಡುತ್ತವೆ. ತರಹೇವಾರಿ ವಸ್ತುಗಳನ್ನೆಲ್ಲಾ ತಂದು ರಾಶಿ ಹಾಕುವ ಉಗ್ರಾಣಗಳಾಗುತ್ತವೆ.

ಇನ್ನು ಮನೆಯ ಒಳ ಹೂರಣವಾನ್ನಾದರೂ ನೋಡಿ.... ಹೆಚ್ಚು ಬೇಡ , ನೀವು ಮಧ್ಯ ವಯಸ್ಕರಾದರೆ, ಮೂವತ್ತು - ನಲವತ್ತು ವರ್ಷ ಗಳ ಹಿಂದಕ್ಕೆ ಹೋಗಿ ನೋಡಿ ಮನೆಯ ಹಜಾರದ ಗೋಡೆಗಂಟಿದ ಚಿತ್ರಗಳಲ್ಲಿ ಅಮ್ಮ ಇರುತ್ತಿದ್ದಳು.. ಜೊತೆಗೆ ಮುಖದ ಪ್ರತಿ ನೆರಿಗೆಯಲ್ಲೂ ಸಂಸಾರದ ರಥವೆಳೆದ ಕಥೆಯನ್ನೇ ಕೆತ್ತಿದ ಅಜ್ಜಿ -ಅಜ್ಜ ಇರುತ್ತಿದ್ದರು...ಕೆಲವೊಮ್ಮೆ ಕಾಲಕ್ಕೂ ಮುನ್ನ ಕಾಲವಶಳಾದ ಅಮ್ಮನ ಜಾಗ ತುಂಬಿ, ಸಲಹಿದ ದೊಡ್ಡಮ್ಮನೋ ಅತ್ತೇಯೋ ಇರುತ್ತಿದ್ದರು.. ಮನೆಯೊಳಗೆ ಬೆಳೆವ ಮಗು ಬಂದವರಿಗೆ " ಗೊತ್ತಾ ಇದು ನಮ್ಮಜ್ಜಿ" ಅಂತ ಗೋಡೆ ತೋರಿಸಿ ತೊದಲಿದಾಗ ಮನೆ ಕಲರವದ ಗುಬ್ಬಿಯ ಗೂಡಾಗುತ್ತಿತ್ತು . ಜೊತೆಗೆ ಇಡೀ ಸಂಸಾರದ ಒಂದಾದರೂ ಫೋಟೋ ಇರುತ್ತಿತ್ತ್ತು . ರುಚಿ ಬದಲಾಗಿದೆ. ಮನೆಯ ತುಂಬ ಮೈಖೆಲ್ ಜಾಕ್ಸನ್ ರಾಕ್ ತಂಡದ , ಸಿಡ್ನಿಗೆ ಹೋದ ಮಹೇಂದ್ರ ದೋಣಿ ತಂಡದ , ಅನಾಮಿಕ ಚಿತ್ರಕಾರನ ಸೆರಾಮಿಕ್ ಚಿತ್ರಗಳಿದ್ದರೂ ಎಲ್ಲೂ ಬದುಕಿಗೊಂದು ರೂಪ ಕೊಟ್ಟ ಅಮ್ಮನ ಸುಳಿವಿಲ್ಲ. ಮಕ್ಕಳೂ ಹಾಗೆಯೇ ಬಿ ಇ , ಎಂಬಿಎ ನಂತರ ಮೈಖೇಲ್ ನ ಅಮೆರಿಕಾಕ್ಕೆ ಮಾರು ಹೋದಷ್ಟು ಅಮ್ಮನ ಭಾರತಕ್ಕೆ ಒಪ್ಪುವುದಿಲ್ಲ. ಆಗ ಅದಕ್ಕೆ "ಬ್ರೈನ್ ಡ್ರೈನ್ " (ಪ್ರತಿಭಾ ಪಲಾಯನ) ಎಂದು ಹೆಸರಿಟ್ಟು ನಾವು ಮಾಡಿದ ತಪ್ಪುಗಳನ್ನು ಮರೆ ಮಾಚಿ ಬಿಡುತ್ತೇವೆ.

ಕೊಳ್ಳುವ ತಾಕತ್ತು ಹೆಚ್ಚಾದಂತೆಲ್ಲಾ "ರುಚಿ" ಯೂ ಬದಲಾಯಿತು. ರುಚಿಯನ್ನನುಸರಿಸಿ ನಮ್ಮ ಆಯ್ಕೆಗಳು ಬದಲಾದವು. ಆಯ್ಕೆಗಳನ್ನನುಸರಿಸಿದ ಜೀವನ ಶೈಲಿಯೇ ಬದಲಾಯಿತು. ನಿಧಾನವಾಗಿ ಅದು ಸುತ್ತಲ ಜಗತ್ತಿನ ಮತ್ತು ಸಹಜೀವಿಗಳ ಕುರಿತಾದ ನಮ್ಮ ಚಿಂತನೆಯ ಮೇಲೂ ಪರಿಣಾಮ ಬೀರಿತು.ಒಂದೊಮ್ಮೆ, ನಾವು ತಿನ್ನುವ ಬಹುತೇಕ ಹಸಿರು -ಹಣ್ಣು ವಸ್ತುಗಳು ನೇರವಾಗಿ ತೋಟ , ಗದ್ದೆಗಳಿಂದ ಮನೆ ಸೇರುತ್ತಿದ್ದವು. ಯಾವ ರಸಾಯನಿಕಗಳ, ತಂಗಳ ಕಾಯ್ದಿರಿಸುವ ಪೆಟ್ಟಿಗೆಯ (ಫ್ರಿಜ್ಜು) ಹಂಗಿಲ್ಲದೆ ನಾವು ಅವುಗಳನ್ನು ತಾಜಾ ತಾಜಾ ಬಳಸುತ್ತಿದ್ದೆವು. ಕನಿಷ್ಟ, ಬೀದಿಯ ಕೊನೆಯ ಅಂಗಡಿಯಿಂದ ಮನೆಯ ನಿತ್ಯ ಬಳಕೆಯ ತರಕಾರಿಗಳನ್ನು ಖರೀದಿಸುತ್ತಿದ್ದಷ್ಟು ಕಾಲ ನಮಗೂ ಭೂಮಿಗೂ ಏನೋ ಸಂಬಂಧವಿರುವುದು ಅರಿವಿಗೆ ಬರುತ್ತಿತ್ತು. ಮೊನ್ನೆ, ಮೊನ್ನೆಯ ವರೆಗೂ ಮನೆಯ ಮಕ್ಕಳು ದಂಟು ಹೆಚ್ಚುವಲ್ಲಿ, ಬೆಂಡೆಯ ತೊಟ್ಟು ತರಿಯುವಲ್ಲಿ ಕೋಡು ಬಿಡಿಸಿ ಕಾಳು ಆಯುವಲ್ಲಿ ಅಮ್ಮನ ಜೊತೆಗೂಡುತ್ತಿದ್ದವು. ಜೊತೆಗೆ ಒಂದು ಪ್ರಶ್ನೆ ಹುಟ್ಟು ತ್ತಿತ್ತು .ಉತ್ತರವಾಗಿ ಒಂದು ಮಾಹಿತಿ ಮಿದುಳಿನ ಕೋಶ ಸೇರುತ್ತಿತ್ತು. ಬದುಕಿನ ರುಚಿ , ಸಹನೆ ಹೆಚ್ಚುತ್ತಿತ್ತು. ದೂರದ ಹಳ್ಳಿಗಾಡಿನ ಕೆಸರು ಗದ್ದೆಯಲ್ಲಿ ದುಡಿದು ತನಗಾಗಿ ಮಾತ್ರವಲ್ಲದೆ ಎಲ್ಲರ ಹೊಟ್ಟೆಗೆ ತಕ್ಕ ಅಹಾರವನ್ನು ಬೆಳೆದ , ಮಣ್ಣಲ್ಲಿ ಜೀವದ ಉಸಿರುಕ್ಕಿಸಿದ ವ್ಯಕ್ತಿಯ ಬಗೆಗೆ ತನ್ನಿಂತ್ತಾನೇ ಮನದಾಳದಲ್ಲೊಂದು ಸಮ್ಮಾನ ಭಾವ ಮೂಡಿ ಘನವಾಗುತ್ತಿತ್ತು .

ಇವೆಲ್ಲಾ ಯಾವ ಟ್ಯೂಶನ್ ಗಳಿಲ್ಲದೆ ನಿತ್ಯ ಬದುಕಿನ ಜೊತೆಗೇ ನಡೆದುಹೋಗುತ್ತಿದ್ದವು.ಆದರೆ ಮಾಲುಗಳು , ಮಾರ್ಟುಗಳಿಂದಲೋ ಆಯ್ದು ತಂದ ನಿರ್ವಾತ ಪ್ಲಾಸ್ಟಿಕ್ ಚೀಲದೊಳಗಿನ ರಾಜ್ಮಾ ಬೀಜಗಳನ್ನು ತಿನ್ನುವ ಮಕ್ಕಳಿಗೆ ಅವು ಫ್ಯಾಕ್ಟರಿಯಲ್ಲಿ ತಯಾರಾದ ಸಿಂಥೆಟಿಕ್ ಪದಾರ್ಥಗಳೋ ಅಥವಾ ನೆಲದಲ್ಲಿ ಬೆಳೆದವುಗಳೋ ಎಂದು ತಿಳಿಯುವುದಕ್ಕಾಗಿಯೂ ಡಿಕ್ಷನರಿಯಲ್ಲೋ, ಕಂಪ್ಯೂಟರ್ ತೆರೆದು "ಗೂಗಲ್" ನಲ್ಲೋ ಹುಡುಕುವ ಸಂದರ್ಭ ಸೃಷ್ಟಿಯಾಗುತ್ತಿದೆ. ನಿಧಾನವಾಗಿ ಅಕ್ಕರೆಯ ಮನೆಯೂಟ ಸವಿಯಲು ಕಷ್ಟವಾಗುತ್ತದೆ, ಮೆಕ್ ಡೊನಾಲ್ಡ್ ಗಳ ಪಿಜ್ಜಾ, ಬರ್ಗರುಗಳೇ ಇಷ್ಟವಾಗು ತ್ತದೆ ಮನೆಗೆ ಬರುವ , ತೆರಳುವ ಹಿರಿಯರ ಕಾಲಿಗೆರಗುವುದಾದರೂ ಅಷ್ಟೇ...ಮೇಲ್ನೋಟಕ್ಕೆ ತೀರಾ ಸಾಂಪ್ರದಾಯಿಕ ಬಳುವಳಿಯೆಂದು ಗೋಚರಿಸಬಹುದು, ಆದರೆ ಅಲ್ಲಿ ಉತ್ಪನ್ನವಾಗುವ ಭಾವದ ಧನಾತ್ಮಕ ಕಂಪನ (ಪೊಸಿಟಿವ್ ವೈಬ್ರೇಶನ್) , ಸದಾಶಯ ಮತ್ತು ಸಂಸ್ಕೃತಿ ವೈಶಿಷ್ಟ್ಯ ನಿಜಕ್ಕೂ ಉದ್ದಾತ್ತವಾದುದು. ಬಗ್ಗಿ ಎರಗುವ ಎಳೆಯನ ವಿಧೇಯತೆ , ಗೌರವ , ಬೆನ್ನು ಪೂಸಿ ಮೇಲೆತ್ತುವ ಹಿರಿಯನ ಸಜ್ಜನಿಕೆ ಸಾತ್ವಿಕ ಭಾವ ಆ ಸಂದರ್ಭಕ್ಕೇ ಒಂದು ಹಿರಿಮೆಯನ್ನು, ಸಂಸ್ಕಾರವನ್ನು ಕೊಟ್ಟು ಬಿಡುತ್ತದೆ.ಎಲ್ಲ ನಾಗರಿಕತೆಗಳಲ್ಲೂ ಇದು ಇದ್ದರೂ ಇದರ ವ್ಯಕ್ತ ಸ್ವರೂಪ (Form) ಮಾತ್ರ ಭಾರತಕ್ಕೇ ವಿಶೇಷವಾದುದು.

ಬೆಳೆವ ಮಗುವೊಂದು ತನ್ನ ಮೊದಲ ಭೌದ್ದಿಕ ಆವರಣವನ್ನು ರೂಪಿಸುವುದು ತಾನು ಬೆಳೆವ ಮನೆಯಿಂದಲೇ.ತನ್ನ ಅಮ್ಮ, ಅಪ್ಪ , ಅಜ್ಜಿ, ಅಜ್ಜ ಹೀಗೆ ತನ್ನ ಬಳಗ , ಕುಟುಂಬದ ಪರಿಚಯದಿಂದಲೇ ಆದರ ಸಹಜೀವನದ , ಸಮಾಜ ಕಲ್ಪನೆಯ ಹಂದರ ಮೈದಳೆಯುತ್ತದೆ. ಅಜ್ಜ -ಆಜ್ಜಿಯರ ಮಾಗಿದ ವಯಸ್ಸು , ಅನುಭವದ ಮಾತು , ವರ್ತನೆ ಜೊತೆಗೆ ಅವರ ವೃದ್ದಾಪ್ಯವನ್ನು ತನ್ನ ಅರಳು ಕಣ್ಣುಗಳಲ್ಲಿ ಕಂಡ ಮಗು ನಿಜವಾಗಿ ಮಾಗುತ್ತದೆ. ಅವರನ್ನು ಆರೈಕೆ ಮಾಡಿದ ತನ್ನ ಅಪ್ಪ - ಅಮ್ಮನ ಬಗೆಗೊಂದು ಗೌರವ ಭಾವ ಬೆಳೆಸಿಕೊಳ್ಳುತದೆ. ವ್ಯಕ್ತಿತ್ವದ ನಿರ್ಮಾಣಕ್ಕೆ ರುಚಿ ಮತ್ತು ಸದಭಿರುಚಿಯೇ ಪಂಚಾಂಗ.
ಬದುಕಿನ ರೀತಿ - ಬದುಕುವ ರೀತಿ, -ಸಂದರ್ಭ- ಪರಿಸರ , ಸವಲತ್ತು - ಅಂತಸ್ತು ಬದಲಾಗಬಹುದು. ಆದರೆ ರುಚಿ ಯೊಂದು ಕೆಟ್ಟು ಹೋಗದಂತೆ ನೋಡಿಕೊಳ್ಳಬೇಕು. ಅದಕ್ಕೇ ಇರಬೇಕು ಹಳೆಯ ತಲೆಮಾರಿಗರ ಮಾತಲ್ಲಿ ಆಗಾಗ "ರುಚಿ" ನಸುಳುತ್ತಿತ್ತು .. ಅವರು ಯರಾದರೊಬ್ಬ ವ್ಯಕ್ತಿಯ ಕುರಿತಾಗಿ, " ಅವನ ಸಂಪತ್ತು - ಅಂತಸ್ತು ಎಲ್ಲ ಸರಿ, ಆದರೆ ಮಾತಿಗೊಂದು ರುಚಿಯಿಲ್ಲ" ಎಂದರೆ ಮತ್ತೆ ಆ ವ್ಯಕಿಯನ್ನು ಭೇಟಿಯಾಗುವ ಮನ ವಾಗುತ್ತಿರಲಿಲ್ಲ.!
********

No comments:

Post a Comment