Tuesday, March 30, 2010

ಬಂದೆಷ್ಟು ಕಾಲವಾಯಿತು ಕೇಳಿಕೊಳ್ಳಿ.....!


ಆಧುನಿಕ ಸಮಾಜ ಜೀವನ ಪ್ರವಾಹ ಎರಡು ಪ್ರಮುಖ ನೆಲೆಗಳಲ್ಲಿ ಹರಿಯುತ್ತಿದೆ. ಒಂದೆಡೆ ಸಾರ್ವಜನಿಕ ಆಡಳಿತದಲ್ಲಿ ಪ್ರಜೆ -ಪ್ರಭು ಎಂಬುದಕ್ಕಿಂತಲೂ ಸಂಘ ಸಂಸ್ಥೆಗಳ ಪಾತ್ರ ಹೆಚ್ಚಾಗತೊಡಗಿದೆ.ಕಾನೂನಿನ ನೇರ ದಾರಿಗೆ ಒಲಿಯದ ಆಡಳಿತ ಯಂತ್ರ, ಪ್ರತಿಭಟನೆ, ಮುಷ್ಕರ ಮತ್ತು ಪ್ರತಿಕ್ರಿಯೆಗಳಿಗೆ ಬಾಗುತ್ತಿದೆ. ಒಲಿಯುತ್ತಿದೆ.ಇನ್ನೊಂದೆಡೆ ಸರಕಾರೇತರ ಸ್ವಯಂ ಸೇವಾ ಸಂಸ್ಥೆಗಳು ನೀತಿ ರೂಪಣೆಯಲ್ಲಿ, ಜನಾಭಿಪ್ರಾಯ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸತೊಡಗಿವೆ..

"ಈ ಒಂದು ಅವಧಿಗೆ ನಾನು ಸಂಸ್ಥೆಯ ನೇತೃತ್ವ ವಹಿಸಲೇಬೇಕು, ..ಇಲ್ಲವಾದರೆ, ಇದು ತನಕ ಮಾಡಿದ ಕೆಲಸಗಳು ಅಪೂರ್ಣವಾಗುಳಿದು ಬಿಡುತ್ತವೆ.... ಏನೇ ಆದರೂ ಅಧ್ಯಕ್ಷನಾಗದೆ ಕೆಳಗಿಳಿಯಲಾರೆ..'' ಇದು ಸಂಘ -ಸಂಸ್ಥೆಗಳ ಆಡಳಿತದಲ್ಲಿ ಆಗಾಗ ಕೇಳಿ ಬರುವ ಮಾತು .. ಹಾಗಾಗಿ ಎದುರು ಪಂಗಡದವರನ್ನು ಒಲಿಸಿಯೋ ಇಳಿಸಿಯೋ ಅಳಿಸಿಯೋ..ಶತಾಯ ಗತಾಯ ಕುರ್ಚಿ ಉಳಿಸಿಕೊಳ್ಳುವ "ಆಟ' ಕ್ಕೆ ಹಾಗನ್ನುವವರು ಇಳಿದು ಬಿಡುತ್ತಾರೆ.! ಅವರು ಗೆದ್ದು ಬಿಡುತ್ತಾರೆ, ಕುರ್ಚಿ ಅವರೆದುರೇ ಸಣ್ಣದಾಗಿ ಬಿಡುತ್ತ್ತದೆ!

ಒಂದು ಸಂಸ್ಥೆಯ ಆಡಳಿತ ವ್ಯವಸ್ಥೆಯಲ್ಲೋ, ಸಂಘಟನೆಯ ಸಮಿತಿಯಲ್ಲೋ ಇದ್ದೀರೆಂದಾದರೆ, ಅಲ್ಲಿ ಆ ಸಮಿತಿಯ ಎಲ್ಲರಿಗೂ ಒಂದು ಸಹಜ, ಪ್ರಜಾಸತ್ತಾತ್ಮಕ ಧ್ವನಿ ಇರುತ್ತದೆ.. ಅಭಿಪ್ರಾಯ ವ್ಯಕ್ತ ಪಡಿಸಲು, ಸಾಧಕ ಬಾಧಕಗಳ ಸಲಹೆ ಯಾ ಸೂಚನೆ ನೀಡುವುದಕ್ಕಿರುವ ವ್ಯಕ್ತಿಗೆ ಇದು ಸಾಕಾಗುತ್ತದೆ. ಹತ್ತ್ತು ವರ್ಷ ಸಮಿತಿಯಲ್ಲಿದ್ದು ಯಾವ ಬದಲಾವಣೆಯನ್ನೂ ತರಲಾಗದ ವ್ಯಕ್ತಿ , ತಾನು ನಾಯಕತ್ವದ ಮುಂಚೂಣೆಗೆ ಬಂದ ಮಾತ್ರಕ್ಕೆ ಎಲ್ಲ ಬದಲಾವಣೆಗಳಿಗೆ ಕಾರಣನಾಗುತ್ತಾನೆಂದು ನಂಬಬೇಕಾಗಿಲ್ಲ. ಅಧ್ಯಕ್ಷನೋ, ಕಾರ್ಯದರ್ಶಿಯೋ ಉಪಾಧ್ಯಕ್ಷನೋ ಹೀಗೆ ಬಗೆ ಬಗೆ ಹುದ್ದೆಯಲ್ಲಿ ದಶಕಗಳನ್ನೇ ಕಳೆದ ಬಳಿಕವೂ ಸಂಘಟನೆಯ ಒಳಗೇ ಇದ್ದು ಬಿಡುವುದು ,, ಜಾತಿ ಪಂಗಡಗಳ ಓಟ್ ಬ್ಯಾಂಕ್ ಗಳ "ಲೆಕ್ಕಾಚಾರ" ಮಾಡಿ ಟ್ರಸ್ಟಿಯೋ, ಇನ್ನೇನೋ ಆಗಿ ಸಂಸ್ಥೆಯ ಆಡಳಿತದ ಮೇಲೆ ತಮ್ಮ "ಪ್ರಭಾವ' ಬೀರುತ್ತಲೇ ಇರುವುದು , ತಮ್ಮ ಭಾರಕ್ಕೆ ಸಂಸ್ಥೆಯನ್ನು ಜಗ್ಗುತ್ತಲೇ ಇರುವುದು, ಇನ್ನು ಕೆಲವರ ಜಾಯಮಾನ! ಇದು ಎಲ್ಲೆಡೆ, ಬಹುತೇಕ ಸಂಸ್ಥೆಗಳ"ಒಳ' ನೋಟ!

ಹೇಗಾದರೂ ಮುಂಚೂಣಿಗೆ ಬರಲು, ಹಾಗೊಮ್ಮೆ ಕುರ್ಚಿ ಹಿಡಿದ ಬಳಿಕ ಅದನ್ನು ಉಳಿಸಿಕೊಳ್ಳಲು ಹೆಣಗುವ ವರ್ಗ ಒಂದಾದರೆ, ಸಹಜ ಅವ-ಯನ್ನು ಕುರ್ಚಿಯಲ್ಲಿ ಕೂತು "ಕಾರುಬಾರು"ನಡೆಸಿ , ಇಳಿದ ಬಳಿಕವೂ ಸಂಸ್ಥೆಯ ಪಡಸಾಲೆಯಲ್ಲೇ, ಬಿಡಾರ ಹೂಡುವ ನಾಯಕಮಣಿಗಳದ್ದು ಇನ್ನೊಂದು ವರ್ಗ. ತಾವಿಳಿದ ಬಳಿಕ , ತಮ್ಮವರನ್ನು , ತಾವು ಬಯಸುವವರನ್ನು ಅಥವಾ ತಮಗೆ ಬೇಕಾದಂತೆ ನಡೆದುಕೊಳ್ಳುವವರು "ಕುರ್ಚಿ'ಯಲ್ಲಿರುವಂತೆ ನೋಡಿಕೊಳ್ಳುವವರಿವರು! ಒಟ್ಟಾರೆಯಾಗಿ, ಕಾಂಚಾಣದ ಉಸ್ತುವಾರಿ , ಪ್ರಚಾರದ ಬಿಡು ಬೆಳಕು ಅ-ಕಾರದ ಕುರ್ಚಿ ಇವರ ಪಕ್ಕದಲ್ಲೇ ಇರಬೇಕು , ಇದೂ ಒಂದು ರೀತಿಯ ತುರಿಕೆ. ಇವೆಲ್ಲಾ ಕೊನೆಯಲ್ಲಿ ಪರ್ಯವಸನಗೊಳ್ಳುವುದು, ಸಂಘಟನೆಯ ಸೋಲಿನಲ್ಲಿ!

ಈ ಹಿನ್ನಲೆಯಲ್ಲಿ ನೋಡಿದಾಗ, ಸಣ್ಣ ಊರಿನ ಯುವಕ ಮಂಡಲವೊಂದು ಉಂಡು ಎಲೆ ಮಡಿಸಿ ಏಳುವಂತೆ ತನ್ನ ಚಟುವಟಿಕೆಗಳನ್ನು ನಡೆಸುವ ಪರಿಗೆ ಹೆಮ್ಮೆ ಪಟ್ಟಿದ್ದೇನೆ. ವಾರ್ಷಿಕೋತ್ಸವಕ್ಕೆರಡು ತಿಂಗಳಿರುವಂತೆ ಸಭೆ ಸೇರಿ, ಇಡೀ ವರ್ಷ, ಗ್ರಾಮದ ಸಮಸ್ತ ಆಗು ಹೋಗು, ಏರಿಳಿತವನ್ನು ಗಮನಿಸಿ ಆ ನೆಲೆಯಲ್ಲೇ, ಸಮಿತಿ ಸದಸ್ಯರು ಈ ಬಾರಿ ತಾವು ಮಾಡಬೇಕಾದ ವಿಧಾಯಕ ಕಾರ್ಯಗಳದೊಂದು ಯಾದಿ ತಯಾರಿಸುತ್ತಾರೆ. . ಅಲ್ಲಿ ಒಂದಷ್ಟು ಸ್ಪರ್ಧೆಗಳು, ಹಳ್ಳಿಯ ಎಲ್ಲ ವಯೋಮಾನದವರಿಗನ್ವಯವಾಗುವಂತಿರುತ್ತದೆ.ವರ್ಷದುದ್ದಕ್ಕೆ ಪ್ರತಿಭೆ ಮೆರೆದ ಹಳ್ಳಿಯ ಹತ್ತು ಮಕ್ಕಳಿಗೆ ಪ್ರೋತ್ಸಾಹದ ಗರಿ ಯಾಗಬಲ್ಲ ಒಂದಿಷ್ಟು ಬಹುಮಾನಗಳು...ಜೊತೆಗೆ, ಬೆಂಕಿ ಅವಘಡದಲ್ಲಿ ಮನೆ ಕಳಕೊಂಡ ಕುಟುಂಬಕ್ಕೋ, ತೆಂಗು ಅಥವಾ ಕಂಗಿನ ಮರದಿಂದಲೋ ಬಿದ್ದ್ದು ಅಂಗ ವೈಕಲ್ಯಕ್ಕೊಳಗಾದ ಕೂಲಿಯ ಆರೈಕೆಗೋ,, ಆತನ ಅವಲಂಬಿತ ಸಂಸಾರಕ್ಕೆ ಸ್ವಲ್ಪ ಸಾಂತ್ವನ ತರಬಲ್ಲ ಅಗತ್ಯ ವಸ್ತುಗಳ ವಿತರಣೆಗೋ ...ಹೀಗೆ ಕೆಲವು ವಿಚಾರಗಳು ಎಜೆಂಡಾ ದಲ್ಲಿರುತ್ತವೆ. ಮನರಂಜನೆಯ ವಿಭಾಗ ಊರ ಮನೆಯ ಮಕ್ಕಳಿಗೇ ಸೇರಿದ್ದು, ಅದಕ್ಕೊಂದಿಷ್ಟು ಹಣ ಸುರಿವ ಪ್ರಮೇಯವೇ ಬರುವುದಿಲ್ಲ.

ಒಟ್ಟು ಬಜೆಟ್ಟನ್ನೂ , ಅಲ್ಲೇ, ಆ ಕ್ಷಣದಲ್ಲೇ ಯೋಜಿಸಲಾಗುತ್ತದೆ.ಮುಂದೆ, ಗ್ರಾಮದ ಹತ್ತಾರು ಅಂಗಡಿ ಮುಂಗಟ್ಟುಗಳವರು, ತಮ್ಮ ವ್ಯವಹಾರ ಸ್ವರೂಪಕ್ಕನುಗುಣವಾಗಿ, ಬಹುಮಾನವನ್ನು ಪ್ರಯೋಜಿಸಿದರೆ, ಬೇಕಾಗುವ ನಗದನ್ನು, ಸಮಿತಿಯಲ್ಲೇ ಇರುವ ಬೆರಳೆಣಿಕೆಯ ಮಂದಿ , ಸ್ವಲ್ಪ ಧಣಿಕರು ತಮ್ಮ ಪಾಲಿನದೆಂದು ವಹಿಸಿಕೊಳ್ಳುತ್ತಾರೆ. ಹಾಗಂತ ಒಂದು ನಿರ್ದಿಷ್ಟ ಮೊತ್ತಕ್ಕಿಂತ ಹೆಚ್ಚು ದೇಣಿಗೆಯನ್ನು ಯಾರಿಂದಲೂ ಸ್ವೀಕರಿಸುವುದಿಲ್ಲ. ಒಟ್ಟು ದೇಣಿಗೆ ಸಂಗ್ರಹ , ಹಾಕಿಕೊಂಡ ಕಾರ್ಯಕ್ರಮಗಳ ವೆಚ್ಚಕ್ಕಿಂತ ದಾಟಿ ಸಾಗದಂತೆ ನಿಗಾ ವಹಿಸಲಾಗುತ್ತದೆ.ಅರ್ಥಾತ್,ದಾನಿಗಳಾದರೂ ಹೆಚ್ಚು ಉದಾರಿಗಳಾಗದಂತೆ ನೋಡಿಕೊಳ್ಳುವ ಸಂಸ್ಥೆ ಇದೊಂದೇ ಇರಬೇಕು!
ಹೀಗೆ ಕಾರ್ಯಕ್ರಮ ಮುಗಿದಾಗ , ಆಯ ಮತ್ತ್ತು ವ್ಯಯ ಸಮ ಸಮ ಗೊಂಡು ಕೋಶವೆನ್ನುವುದು ಖಾಲಿಯಾಗಿಯೇ ಉಳಿಯುವುದರಿಂದ ಅದನ್ನು ಕಾಯುವುದಕ್ಕಿರುವ ಕೋಶಾ-ಕಾರಿಗೆ, , "ಅಧ್ಯಕ್ಷತೆ' ಯ ಪಟ್ಟದಲ್ಲಿರುವವನಿಗೆ , ಹೇಗಾದರೂ ತಾನೇ ಮುಂದುವರಿಯಬೇಕೆಂಬ ಹಂಬಲ ಉಳಿದಿರುವುದಿಲ್ಲ. ಮತ್ತೆ ಮರು ವರ್ಷ ಹೊಸದೇ ಒಂದು ಸಮಿತಿ.ಹೊಸದಾಗಿಯೇ ಕೋಶ ರಚನೆ. ಹೀಗೆ ಸಂಸ್ಥೆಯೊಂದು ಸ್ಥಾವರವಾಗಿದ್ದೇ ಜಂಗಮವಾಗುಳಿವ ಈ ಪರಿ ನಿಜಕ್ಕೂ ಒಂದು ಮಾದರಿಯಾಗಬಹುದೇನೋ..! ಅಂದ ಹಾಗೆ ಈ ಯುವಕಮಂಡಲವಿರುವುದು ಕಾಸರಗೋಡಿನ ಮಂಜೇಶ್ವರದಲ್ಲಿ.
***
ಕಾಲ ತನ್ನ ಅವಶ್ಯಕತೆಯನ್ನು ಪೂರೈಸಿಕೊಳ್ಳುತ್ತ್ತದೆ. ಮಹಾನ್ ಸೃಜನಶೀಲ, ಕ್ರಿಯಾಶೀಲನೆಂದು ಕೊಂಡವನಿಗೂ , ತನಗೆ ಸರಿಸಮನಾಗಿ ದುಡಿವ ನಾಯಕನ್ಯಾರು ಎಂದು ಕೊಂಡವನಿಗೂ ಬರುವ ನಾಳೆಗಳಲ್ಲಿ ಪರ್ಯಾಯವಿರುತ್ತ್ತದೆ. ಬಹಳಷ್ಟು ಕ್ರಿಯಾಶೀಲತೆಯಿಂದ ಸೇವೆ ಸಲ್ಲಿಸಿದವನಿರಬಹುದು , ತನ್ನ ತನು ಮನ ಧನ ಕೌಶಲ್ಯದಿಂದ ಸಂಸ್ಥೆಯ ಉಛ್ರಾಯಕ್ಕೆ, ಅಭಿವೃದ್ದಿಗೆ ಕಾರಣನಾದವನೇ ಇರಬಹುದು..ತಾನು ಬಂದೆಷ್ಟು ಕಾಲವಾಯಿತೆಂದು ಕೇಳುತ್ತಿರಬೇಕು.! ಇದು ಸಂಘದ , ಸಂಸ್ಥೆಯ , ವ್ಯಕ್ತಿಯ ಆರೋಗ್ಯಕ್ಕೆ ಒಳ್ಳೆಯದು!
***
" ಅಯ್ಯಯ್ಯ ಎಂಚ ಪೊರ್ಲಾಂಡ್ . . .

ಇದೊದು ಅಪವಾದ ಬಹುಕಾಲದಿಂದ ಕರ್ನಾಟಕ ರಾಜ್ಯದ ""ಆಡಳಿತದಲ್ಲಿ ಒಳಗೊಂಡ'' ತುಳುವ ಮಂದಿಯ ಮೇಲಿತ್ತು...ಅದು ಕಟ್ಟಕಡೆಗೂ ನಿವಾರಣೆಯಾಗಿದೆ, ಅವರು ಶಾಪಮುಕ್ತರಾಗಿದ್ದಾರೆ..ಪ್ರಯತ್ನ ಯಾರದೇ ಇರಲಿ..! ತುಳುವ ಮಂದಿಯ ಬಾಹುಳ್ಯವಿರುವ ದ.ಕ . ಮತ್ತು ಉಡುಪಿ ಜಿಲ್ಲಾ ವ್ಯಾಪ್ತಿಯ ಶಾಲಾ ಕಲಿಕೆಯಲ್ಲಿ ಮೂರನೆಯ ಭಾಷೆಯಾಗಿ ತುಳುವನ್ನೂ ಕಲಿವ ಅವಕಾಶವನ್ನು ಕೊನೆಗೂ ಕರ್ನಾಟಕ ಸರಕಾರ ಕರುಣಿಸಿದೆ.ಮೊನ್ನೆ ಮೊನ್ನೆ ವಿಶ್ವ ಮಟ್ಟದ ತುಳು ಸಮ್ಮೇಳನ, ಅದಕ್ಕೂ ಸ್ವಲ್ಪ ಹಿಂದೆ ಕೇರಳ ಸರಕಾರದಿಂದಲೂ ತುಳು ಅಕಾಡೆಮಿ, .ಈಗ ಅ-ಕೃತವಾಗಿ ಮೂರನೆಯ ಕಲಿಕಾ ಭಾಷೆ ..ಹೀಗೆ ಅನ್ನದ ಭಾಷೆಯಾದ, "ಅಣ್ಣ"ನ ಭಾಷೆಯಾದ ತುಳುವಿಗೆ ತಡವಾಗಿಯಾದರೂ "ಶುಕ್ರದೆಸೆ' ಪ್ರಾಪ್ತಿಯಾಗಿದೆ..

ರಾಷ್ಟ್ರ ಮಟ್ಟದ ಶಿಕ್ಷಣ ಸಂಸ್ಥೆಗಳು, ಬ್ಯಾಂಕುಗಳು, ಮಠ ಮಂದಿರಗಳಿದ್ದು...ಆಡಳಿತದ ನೈಪುಣ್ಯಕ್ಕೂ ಖ್ಯಾತಿವೆತ್ತ ಅವಳಿ ಜಿಲ್ಲೆಯಲ್ಲಿ ಶತಮಾನದ ಹಿಂದೆಯೇ ಬಾಸೆಲ್ ಮಿಶನ್ ನಂತಾ ವಿದೇಶೀ ಮಿಶನರಿಯೇ ತುಳುವನ್ನು ಅ-ಕೃತವಾಗಿ ಜನರಿಗೆ ಕಲಿಸಲು ಮುಂದಾಗಿತ್ತೆನ್ನುವಾಗ, ನಾವು , ಬಹಳೇ ಸಮಯ ವ್ಯರ್ಥಮಾಡಿದ್ದ್ದು ಗೋಚರಕ್ಕೆ ಬರುತ್ತದೆ. ಕೊನೆಗಾದರೂ , "ಭರತೇಶ ವೈಭವ" ದ ಕವಿ ರತ್ನಾಕರ ವರ್ಣಿಯ ಆತ್ಮ ಮತ್ತೊಮ್ಮೆ, " ಅಯ್ಯಯ್ಯ ಎಂಚ ಪೊರ್ಲಾ ಂ ಡ್ ..." ಎಂದು ಸಂತಸ ಪಡುತ್ತಿರಬಹುದು.

*******************

No comments:

Post a Comment